ಚಿತ್ರದುರ್ಗಮೇ18:
ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರಗಳನ್ನು ಖರೀದಿಸಲು ‘ಫ್ರೂಟ್ಸ್ ಎಫ್ಐಡಿ’ (FRUITS FID) ಸಂಖ್ಯೆಯನ್ನು ಹೊಂದುವುದು ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರದ ತಂತ್ರಾಂಶದ ಮೂಲಕ ರೈತರ ಎಫ್ಐಡಿ ಸಂಖ್ಯೆಯನ್ನು ಬಳಸಿಕೊಂಡು, ಅವರ ಜಮೀನಿನ ವಿಸ್ತೀರ್ಣಕ್ಕೆ (ಎಕರೆಗೆ) ಅಗತ್ಯವಿರುವಷ್ಟು ರಸಗೊಬ್ಬರವನ್ನು ನಿಯಮಾನುಸಾರ ವಿತರಿಸಲು ಕೃಷಿ ಇಲಾಖೆಯು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.2026-27ನೇ ಸಾಲಿನ ಮುಂಗಾರು ಹಂಗಾಮಿನಿಂದಲೇ ಇದು ಜಾರಿಗೆ ಬರಲಿದೆ.
ರೈತರು ತಾವು ಬೆಳೆದ ಬೆಳೆ ಆಧಾರದ ಮೇಲೆ ತಂತ್ರಾಂಶದಲ್ಲಿ ಅನುಮೋದಿಸಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಪಡೆಯಲು ಅವಕಾಶವಿರುತ್ತದೆ. ಜಿಲ್ಲೆಯ ಎಲ್ಲಾ ರೈತರು ಆದ್ಯತೆಯ ಮೇರೆಗೆ ತಮ್ಮ ಹೆಸರಿನಲ್ಲಿ ‘ಫ್ರೂಟ್ಸ್ ಎಫ್ಐಡಿ’ ಮಾಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ, ತಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್ಗಳನ್ನು ಈ ಎಫ್ಐಡಿಗೆ ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು ಎಂದು ಕೋರಲಾಗಿದೆ.
ಈಗಾಗಲೇ ಫ್ರೂಟ್ಸ್ ಎಫ್ಐಡಿ ಹೊಂದಿರುವ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಇದರಿಂದ ರಸಗೊಬ್ಬರ ಪಡೆಯುವಾಗ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಎದುರಾಗುವುದಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
===========
About The Author
Discover more from JANADHWANI NEWS
Subscribe to get the latest posts sent to your email.