ಜಗತ್ತು ಕಂಡ ಶ್ರೇಷ್ಠ ಮೌಲ್ಯಾಧಾರಿತ ಚಿಂತಕರು ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರು. “ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಯ್ಯನೆಂತೊಲಿವನಯ್ಯ?” ಎಂಬ ವಚನದ ಮೂಲಕ ನುಡಿ-ನಡೆ ಏಕತ್ವದ ಮಹತ್ವವನ್ನು ಮಾನವಕುಲಕ್ಕೆ ಸಾರಿದ ವಿಶ್ವಗುರು ಬಸವಣ್ಣನವರು ನಮ್ಮ ನಾಡಿನ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಕರ್ನಾಟಕದ ಹೆಮ್ಮೆ.
12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಸಾಮಾಜಿಕ-ಧಾರ್ಮಿಕ ಚಳುವಳಿ ಅಪೂರ್ವವಾದದ್ದು. ಜಾತಿ, ಮೂಢನಂಬಿಕೆ ಮತ್ತು ಲಿಂಗಭೇದವನ್ನು ವಿರೋಧಿಸಿ “ಕಾಯಕವೇ ಕೈಲಾಸ” ಎಂಬ ತತ್ವದಡಿ ಅನುಭವ ಮಂಟಪವನ್ನು ಸ್ಥಾಪಿಸಿ ಸಮಾನತೆಯ ಸಂದೇಶವನ್ನು ಸಾರಿದರು. ಇದು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನಾ ವೇದಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಸವಣ್ಣನವರು ಕೇವಲ ವ್ಯಕ್ತಿಯಲ್ಲ, ಒಂದು ಮಹಾ ಆಂದೋಲನ. ಜಾತಿ-ಮತ ರಹಿತ ಸಮಾಜ ನಿರ್ಮಾಣದ ಅವರ ಕನಸು ಇಂದಿಗೂ ಪ್ರಸ್ತುತವಾಗಿದೆ. ಅವರ ಚಿಂತನೆಗಳು ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ದಿಕ್ಕಿನಲ್ಲಿ ಸಾಗಿವೆ.
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ…” ಎಂಬ ವಚನವು ಇಡೀ ವಿಶ್ವಕ್ಕೆ ನೀಡಿದ ನೈತಿಕ ಸಂಹಿತೆಯಾಗಿದ್ದು, ಇಂದಿನ ದ್ವೇಷಪೂರಿತ ಸಮಾಜಕ್ಕೆ ದಾರಿ ತೋರಿಸುವ ದೀಪವಾಗಿದೆ.
ಮಾನವ ಭ್ರಾತೃತ್ವದ ಸಂದೇಶವನ್ನು “ಇವ ನಮ್ಮವ” ಎಂಬ ವಚನದ ಮೂಲಕ ಸಾರಿದ ಬಸವಣ್ಣನವರು ಸಮಾನತೆ ಮತ್ತು ಸಹೋದರತ್ವದ ಪ್ರತೀಕ. ಸ್ತ್ರೀಯರ ಬಗ್ಗೆ “ಹೆಣ್ಣು ಪ್ರತ್ಯಕ್ಷ ದೇವತೆ” ಎಂಬ ಸಂದೇಶ ನೀಡಿ ಲಿಂಗ ಸಮಾನತೆಯ ಪರಿಕಲ್ಪನೆಯನ್ನು ಬಲಪಡಿಸಿದರು.
ಇಂತಹ ಮಹಾನ್ ಪ್ರಜಾಪ್ರಭುತ್ವವಾದಿ ಬಸವಣ್ಣನವರ ತತ್ವಗಳು ಇಂದಿನ ಸಮಾಜಕ್ಕೆ ದಿಕ್ಸೂಚಿಯಾಗಿದೆ. ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಬಸವ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ ಮತ್ತು ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.
ಗೀತಾ ಭರಮಸಾಗರ
ಶಿಕ್ಷಕರು, ಲೇಖಕರು
ಚಿತ್ರದುರ್ಗ
📞 9113694200
About The Author
Discover more from JANADHWANI NEWS
Subscribe to get the latest posts sent to your email.