ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: “ಯಾವಾಗಲೂ ನಾವು ಕನಸುಗಳನ್ನು ಕಾಣುತ್ತಿರಬೇಕು. ಎಚ್ಚರದಲ್ಲಿಯೇ ಕನಸು ಕಟ್ಟುವವರು ಒಂದಲ್ಲೊಂದು ದಿನ ಅದನ್ನು ನನಸು ಮಾಡಿಕೊಳ್ಳುತ್ತಾರೆ. ಬದುಕು ಶಾಶ್ವತವಲ್ಲ ಎಂಬ ಅರಿವಿನೊಂದಿಗೆ ಜೀವನವನ್ನು ಸಾರ್ಥಕಗೊಳಿಸಬೇಕು” ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ವಿಧಾನಪರಿಷತ್ ಸದಸ್ಯ ಕೆ ಎಸ್ ನವೀನ್ ಅವರ ತಂದೆ ದಿವಂಗತ ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕುಟುಂಬ ಮೌಲ್ಯಗಳ ಕುಸಿತದ ಸೂಚಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, “ವಯೋವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಮನೋಭಾವ ಹೆಚ್ಚಾಗಿದೆ. ಮಕ್ಕಳಲ್ಲಿ ಸಂಸ್ಕಾರಗಳ ಕೊರತೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯನಲ್ಲಿ ನಿಷ್ಠೆ ಮತ್ತು ಮಾನವೀಯತೆ ಇರಬೇಕು. ಸಾಕು ನಾಯಿಯಲ್ಲಿರುವ ನಿಷ್ಠೆಯಾದರೂ ಮನುಷ್ಯನಲ್ಲಿ ಇರಬೇಕು” ಎಂದು ಹೇಳಿದರು.
ಜನಸೇವೆ ಮತ್ತು ಸರಳ ಬದುಕಿನ ಮೂಲಕ ಸಮಾಜಕ್ಕೆ ಮಾದರಿಯಾದವರು ಕೆ.ಆರ್. ಶಿವಪ್ರಕಾಶ್ ಎಂದು ಸ್ಮರಿಸಿದರು.
ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, “ಶಿವಪ್ರಕಾಶ್ ಅವರು ಸಂಸ್ಕಾರವಂತ ಮಗನನ್ನು ನಾಡಿಗೆ ನೀಡಿದ್ದಾರೆ. ಸಮಾಜದಲ್ಲಿ ಸಂಸ್ಕಾರಯುತ ಬದುಕಿನ ಅಗತ್ಯತೆ ಹೆಚ್ಚಾಗಿದೆ. ಮೌಲ್ಯವೇ ಇಲ್ಲದಂತಾಗಿರುವ ಇಂದಿನ ರಾಜಕಾರಣದಲ್ಲಿ ಬೇರೆಯವರಿಗೆ ಕೇಡನ್ನೇ ಬಯಸುವ ಮನೋಭಾವ ಹೆಚ್ಚಾಗಿದೆ. ಆದರೆ ಕೆ ಎಸ್ ನವೀನ್ ಒಬ್ಬ ಆದರ್ಶ ರಾಜಕಾರಣಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಮನುಷ್ಯ ಸಾಯುವ ಮುನ್ನ ಸ್ಮರಣೆಯ ಕಾಯಕ ಮಾಡಿ ಹೋಗಬೇಕು” ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ, ಮಾಜಿ ಶಾಸಕ ಟಿ.ಎಚ್. ಬಸವರಾಜು, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ವಿಧಾನಪರಿಷತ್ ಸದಸ್ಯ ಕೆ ಎಸ್ ನವೀನ್, ಸುಜಯ ಶಿವಪ್ರಕಾಶ್, ಸುನೀತಾ, ಬುರುಡೆಕಟ್ಟೆ ರಾಜೇಶ್, ಮಾವಿನಕಟ್ಟೆ ಗುರುಸ್ವಾಮಿ, ಡಾ. ಕೆ. ಅನಂತ್, ದ್ಯಾಮಪ್ಪ, ಗೂಳಿಹಟ್ಟಿ ಜಗದೀಶ್, ಗೂಳಿಹಟ್ಟಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಕ್ಸ್ ಐಟಂ
ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದ ಕೆ.ಆರ್. ಶಿವಪ್ರಕಾಶ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದರು. ಅವರಿಗೆ ತಹಶೀಲ್ದಾರ್ ಹುದ್ದೆ ದೊರೆತಿದ್ದರೂ ಅದನ್ನು ತ್ಯಜಿಸಿ ಕೃಷಿ ಕಾಯಕಕ್ಕಾಗಿ ಎನ್.ಜಿ. ಹಳ್ಳಿಗೆ ಮರಳಿದ್ದರು.
ಗ್ರಾಮೀಣ ಬದುಕನ್ನೇ ಆರಿಸಿಕೊಂಡ ಅವರು ರಾಜ್ಯದಲ್ಲೇ ಮೊದಲ ಬಾರಿಗೆ “ಜಯ ಪದ್ಮ ಮೋಟರ್” ಎಂಬ ಖಾಸಗಿ ವಾಹನ ಸಂಸ್ಥೆಯನ್ನು ಆರಂಭಿಸಿದ್ದರು. ಹೊಸದುರ್ಗ-ಹೊಳೆಲ್ಕೆರೆ ಜಂಟಿ ಎಪಿಎಂಸಿ ಸ್ಥಾಪನೆಗೂ ಅವರು ಕಾರಣರಾಗಿದ್ದರು. ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆ ಮಂಜೂರಾಗಲು ಅವರ ಸೇವೆ ಪ್ರಮುಖವಾಗಿತ್ತು ಎಂದು ಕೆ ಎಸ್ ನವೀನ್ ತಿಳಿಸಿದರು.
About The Author
Discover more from JANADHWANI NEWS
Subscribe to get the latest posts sent to your email.