April 24, 2026
FB_IMG_1777032920088.jpg

ಬಳ್ಳಾರಿ,ಏ.24
ನಗರದ ವಿದ್ಯಾನಗರ ವೃತ್ತದಿಂದ ಕೊಳಗಲ್ ರಸ್ತೆಯವರೆಗೆ ರಸ್ತೆ ಅಗಲೀಕರಣ ಕಾಮಗಾರಿಯ ನೆಪದಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮರಗಳನ್ನು ಕಟಾವು ಮಾಡುತ್ತಿದ್ದ ಗುತ್ತಿಗೆದಾರರ ಕೃತ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದಾಗ, ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅಧಿಕಾರಿಯ ಮೊಬೈಲ್ ಹಾನಿಗೊಳಿಸಿದ ಆರೋಪದ ಮೇಲೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.

*ಘಟನೆಯ ವಿವರ:*
ಏ.23 ರಂದು ರಾತ್ರಿ 10:30ರ ಸುಮಾರಿಗೆ ಚೈನಾಜ್ 1.10 ಕಿ.ಮೀ ನಿಂದ 1.60 ಕಿ.ಮೀ ವರೆಗೆ ರಸ್ತೆ ಬದಿಯ ಮರಗಳನ್ನು ಅಕ್ರಮವಾಗಿ ಕಟಾವು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಶಹರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಆರ್. ಚೌವ್ಹಾಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಅನುಮತಿ ಪತ್ರ ಕೇಳಿದಾಗ, ಕಾಮಗಾರಿ ತುರ್ತಾಗಿ ಆಗಬೇಕಿದೆ ಎಂಬ ಹಾರಿಕೆ ಉತ್ತರದೊಂದಿಗೆ ಮರ ಕಟಾವು ಮುಂದುವರಿಸಲಾಯಿತು. ಇದನ್ನು ತಡೆಯಲು ಪ್ರಯತ್ನಿಸಿದಾಗ ಗುತ್ತಿಗೆದಾರರ ಸಹಚರರಾದ ತಿಲ್ಲು ಮತ್ತು ರವಿ ಮೋಕಾ ಎಂಬುವವರು ವಾಗ್ವಾದಕ್ಕಿಳಿದು, ಕೃತ್ಯವನ್ನು ಚಿತ್ರೀಕರಿಸುತ್ತಿದ್ದ ಅಧಿಕಾರಿಯ ಮೊಬೈಲ್ ಫೋನ್ ಕಿತ್ತುಕೊಂಡು ನೆಲಕ್ಕೆ ಎಸೆದು ಹಾನಿಗೊಳಿಸಿದ್ದಾರೆ. ನಂತರ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮರ ಕಟಾವು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು.
*ವಶಪಡಿಸಿಕೊಂಡ ಸ್ವತ್ತು ಮತ್ತು ದಾಖಲಾದ ಪ್ರಕರಣ:*
ಸ್ಥಳ ಪರಿಶೀಲನೆಯಲ್ಲಿ ಒಟ್ಟು 25 ಮರಗಳನ್ನು (21 ತಪಸಿ, 02 ಬೇವು, 02 ಅರಳಿ) ಅಕ್ರಮವಾಗಿ ಕಟಾವು ಮಾಡಿರುವುದು ಪತ್ತೆಯಾಗಿದೆ. ಅಂದಾಜು 5 ಟನ್ ಸೌದೆಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರ ಅಡಿಯಲ್ಲಿ ಎನ್.ಸಿ ನಂ 01/2026-27 ರಂತೆ ಪ್ರಕರಣ ದಾಖಲಾಗಿದೆ.
ನ್ಯಾಯಾಲಯದ ಅನುಮತಿ ಪಡೆದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರಂತೆ ಶ್ರೀನಿವಾಸ್ (ಶ್ರೀನಿವಾಸ್ ಇನ್ಫಾç ಪ್ರಾಜೆಕ್ಟ್ ಪ್ರೆöÊ.ಲಿ) ಮತ್ತು ಇತರ ನಾಲ್ವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಮತ್ತು ಕರ್ತವ್ಯಕ್ಕೆ ಅಡ್ಡಿ ಮತ್ತು ಸಾಕ್ಷö್ಯ ನಾಶಪಡಿಸಿದ ಹಿನ್ನೆಲೆಯಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಲಾಗಿದೆ.
*ನಿಯಮಗಳ ಉಲ್ಲಂಘನೆ:*
ಈ ರಸ್ತೆ ಕಾಮಗಾರಿಗಾಗಿ ಒಟ್ಟು 233 ಮರಗಳ ಕಟಾವಿಗೆ ಲೋಕೋಪಯೋಗಿ ಇಲಾಖೆ ಅನುಮತಿ ಕೋರಿತ್ತು. ಆದರೆ, ಪರಿಸರ ಸಂರಕ್ಷಣೆ ದೃಷ್ಟಿಯಿಂದ 139 ಮರಗಳನ್ನು ಉಳಿಸಿಕೊಂಡು ಫುಟ್‌ಪಾತ್ ವಿನ್ಯಾಸ ಬದಲಿಸುವಂತೆ ಅರಣ್ಯ ಇಲಾಖೆಯು ಮಾರ್ಚ್ 23ರಂದೇ ಪತ್ರ ಬರೆದಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಗುತ್ತಿಗೆದಾರರು, ಏಕಾಏಕಿ ತಡರಾತ್ರಿ ಈ ದುಷ್ಕೃತ್ಯ ಎಸಗಿದ್ದಾರೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರ ಪ್ರಕಾರ 50ಕ್ಕೂ ಹೆಚ್ಚು ಮರಗಳ ಕಟಾವಿಗೆ ಸಾರ್ವಜನಿಕ ಆಕ್ಷೇಪಣೆ ಪಡೆಯುವುದು ಕಡ್ಡಾಯ. ಯಾವುದೇ ಆಕ್ಷೇಪಣೆ ಇಲ್ಲದಿದ್ದಲ್ಲಿ ರಸ್ತೆ ಅಗಲೀಕರಣದ ನಂತರ ಗಿಡಗಳನ್ನೂ ನೆಡಲು ಅನ್ವಯಿಸುವ ಶುಲ್ಕಗಳನ್ನು ಪಾವತಿಸಿಕೊಂಡು ಅನುಮತಿ ನೀಡಲು ಕ್ರಮವಹಿಸಬೇಕಾಗಿರುತ್ತದೆ. ಆದರೆ ಕಾನೂನು ಗಾಳಿಗೆ ತೂರಿ ಈ ಕೃತ್ಯ ಎಸಗಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಯ ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್ ಅವರು ತಿಳಿಸಿದ್ದಾರೆ.
————

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading