May 22, 2026
FB_IMG_1779457467446.jpg

ಹಿರಿಯೂರು :
ಇಂದಿನ ಯುವಜನಾಂಗ ಡಿಜಿಟಲ್ ಮಾಧ್ಯಮಗಳು ಹಾಗೂ ಮೊಬೈಲ್ ಫೋನ್ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೇ ನಿಮ್ಮ ಕಾಲೇಜಿನ ದಿನಗಳಲ್ಲಿ ಉಪನ್ಯಾಸಕರ ಮಾರ್ಗದರ್ಶನ ಪಡೆದು, ಸತತ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಅತಿಹೆಚ್ಚು ಅಂಕಗಳನ್ನು ಪಡೆದು, ಓದಿದ ಕಾಲೇಜಿಗೆ ಹಾಗೂ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭ ಹಾಗೂ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ಹಿರಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ನನ್ನ ವಿದ್ಯಾರ್ಥಿ ಜೀವನದಲ್ಲಿ ಬಹಳ ಕಷ್ಟಪಟ್ಟು ಓದಿ ಮೇಲೆ ಬಂದಿದ್ದು, ನಾನು ಕೇವಲ 23 ವರ್ಷಕ್ಕೆ ಪದವಿ ಮುಗಿಸಿ, ಆರಂಭದಲ್ಲಿ ಉದ್ಯೋಗ ಅರಸಿ, ಪೋಲೀಸ್ ಆಗಿ, ಎಫ್.ಡಿ.ಸಿ ಯಾಗಿ, ಕಾಲೇಜಿನ ಉಪನ್ಯಾಸಕರಾಗಿ, ಆನಂತರ ಕಷ್ಟಪಟ್ಟು ಕೆ.ಎಎಸ್ ಓದಿ ಪಾಸ್ ಮಾಡಿ, ಇದೀಗ ತಾಲ್ಲೂಕು ತಹಶೀಲ್ದಾರರಾಗಿ ಕೆಲಸ ಮಾಡುತ್ತಿದ್ದೇನೆ,
ನಾನು ನಮ್ಮ ತಂದೆ-ತಾಯಿಗಳ ಕಷ್ಟ ಅರಿತು, ಕೆ.ಎಎಸ್ ಪಾಸ್ ಮಾಡಿ, ನನ್ನ ಗುರಿ ಸಾಧಿಸುವವರೆಗೂ ಟಿವಿ, ಸಿನಿಮಾಗಳನ್ನು ಸಹ ನೋಡದೇ ಯಾವುದೇ ಮೋಜುಮಸ್ತಿ ಮಾಡದೇ, ಕೇವಲ ಓದುವುದನ್ನಷ್ಟೇ ಗುರಿಯಾಗಿಸಿಕೊಂಡು, ಕಮ್ಯೂನಿಕೇಷನ್ ಗಾಗಿ ಕೇವಲ ಕೀ ಪ್ಯಾಡ್ ಮೊಬೈಲ್ ಬಳಸುತ್ತಿದ್ದೆ ಎಂಬುದಾಗಿ ಹೇಳಿದರು.
ಈ ವಿದ್ಯಾರ್ಥಿ ಜೀವನ ಎಂದರೆ ಗೋಲ್ಡನ್ ಟೈಮ್ ಈ ಬಂಗಾರದ ಸಮಯವನ್ನು ವಿದ್ಯಾರ್ಥಿಗಳು ವ್ಯರ್ಥ ಮಾಡದೇ ತಮ್ಮ ತಂದೆ-ತಾಯಿಗಳ ಕಷ್ಟ ಅರಿತು ಓದಿನ ಕಡೆ ಮಾತ್ರ ಗಮನ ಹರಿಸಿ, ಕಾಲೇಜು ಜೀವನದಲ್ಲಿ ನೀವು ಖುಷಿಯನ್ನು ಕಂಡುಕೊಂಡರೆ ಮುಂದೆ ಜೀವನ ಖುಷಿಯಾಗಿರುವುದಿಲ್ಲ, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಹೆತ್ತ ತಂದೆ-ತಾಯಿಗಳಿಗೆ ಓದಿದ ಕಾಲೇಜಿಗೆ ಕೀರ್ತಿ ತರುವಂತಹ ಮಕ್ಕಳಾಗಬೇಕು ಎಂಬುದಾಗಿ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹೆಚ್.ತಿಪ್ಪೇಸ್ವಾಮಿ ಮಾತನಾಡಿ, ಈ ವಾಣಿ ಕಾಲೇಜು ಉತ್ತಮ ಪರಿಸರ ಸೇರಿದಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಈ ಕಾಲೇಜನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಚಿವ ಡಿ.ಸುಧಾಕರ್ ರವರ ಪರಿಶ್ರಮವನ್ನು ನಾವು ಸ್ಮರಿಸಬೇಕಿದೆ ಎಂದರಲ್ಲದೆ, ಆರಂಭದಲ್ಲಿ ಕೇವಲ 400 ವಿದ್ಯಾರ್ಥಿಗಳಿದ್ದ ಈ ಕಾಲೇಜು ಈಗ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂಬುದಾಗಿ ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗಿಡ್ಡೋಬನಹಳ್ಳಿ ಅಶೋಕ್ ಮಾತನಾಡಿ, ವಾಣಿ ಕಾಲೇಜು ಭವ್ಯ ಇತಿಹಾಸ ಹೊಂದಿದ್ದು, ದಿ.ಬಿ.ಎಲ್.ಗೌಡರು ಕೃಷಿಕರಿಂದ ದೇಣಿಗೆ ಸಂಗ್ರಹಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಈ ಕಾಲೇಜು ಸ್ಥಾಪಿಸಿದರು. ಅನಂತರ ಸಚಿವ ಡಿ.ಸುಧಾಕರ್ ರವರು ಸಾಕಷ್ಟು ಅನುದಾನ ನೀಡಿ, ಈಕಾಲೇಜನ್ನು ಬೆಳೆಸಿದರಲ್ಲದೆ ಈಕಾಲೇಜಿನಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಡಿ.ಸುಧಾಕರ್ ನಗದು ಬಹುಮಾನ ನೀಡುತ್ತಿದ್ದು, ಈಕೆಲಸವನ್ನು ಡಿ.ಸುಧಾಕರ್ ಅಭಿಮಾನ ಬಳಗದಿಂದ ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದರು.
ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ ಮಾತನಾಡಿ,ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ವಿದ್ಯಾಸಂಸ್ಥೆ ವತಿಯಿಂದ 1 ಲಕ್ಷ ರೂಗಳ ದತ್ತಿನಿಧಿ ಸ್ಥಾಪನೆ ಮಾಡಲಾಗಿದ್ದು, ಈ ದತ್ತಿನಿಧಿಯಿಂದ ಬರುವ 10ಸಾವಿರ ರೂಗಳನ್ನು ಪ್ರತಿವರ್ಷ ಕಾಲೇಜಿನಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, “ಪ್ರತಿಭಾ ಪುರಸ್ಕಾರ”ವಾಗಿ ನೀಡಲಾಗುತ್ತಿದೆ ಎಂಬುದಾಗಿ ಹೇಳಿದರು.
ಖ್ಯಾತ ಸಾಹಿತಿಗಳು ಹಾಗೂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ಶಿವಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವಿವಿಧ ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ, ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಅಶೋಕ್ ಗಿಡ್ಡೋಬೆನಹಳ್ಳಿ, ಲೋಕೇಶ್ ಮಾಳಿಗೆ,ದತ್ತಿನಿಧಿ ಪ್ರಾಯೋಜಕರುಗಳಾದ ಡಾ.ಜಗನ್ನಾಥ್, ದಿವಾಕರ್ ಹಳೆಯಳನಾಡು, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಹೇಮಲತಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಧರ್, ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ್ ನಾಯ್ಕ, ಮಹಮ್ಮದ್ ಸಾದತ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಧರ್ ಯಾದವ್, ಬಸವರಾಜ್ ಬಳಗಟ್ಟ, ಡಾ.ದೇವಿಕಾ, ಉಪನ್ಯಾಸಕರಾದ ಮಹಂತೇಶ್, ಎಸ್.ಎಲ್.ಎನ್.ಮೂರ್ತಿ, ಉಪಸ್ಥಿತರಿದ್ದರು.
ಆರಂಭದಲ್ಲಿ ಉಪನ್ಯಾಸಕ ಬಸವರಾಜ್ ಬಳಗಟ್ಟ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು, ಎನ್.ಎಸ್.ಎಸ್. ಅಧಿಕಾರಿ ಡಾ.ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಉಪನ್ಯಾಕ ಡಾ.ವೆಂಕಟೇಶ್ ವಂದಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading