ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಎನ್ಎಸ್ಎಸ್, ಕ್ರೀಡಾ, ಮೈ ಭಾರತ್, ವೈಆರ್ಸಿ ಹಾಗೂ ಯೂತ್ ರೆಡ್ಕ್ರಾಸ್ ವಿಭಾಗಗಳ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಶಾಮುಕ್ತ ಭಾರತ ಅಭಿಯಾನದ ಅಂಗವಾಗಿ ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಆ.18ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆ ತಡೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಮಾತನಾಡಿ, ಮಾದಕ ವ್ಯಸನಗಳಿಗೆ ಯುವಜನತೆ ಬಲಿಯಾಗುತ್ತಿದ್ದು, ಇದರಿಂದ ಮಾರಕ ಕಾಯಿಲೆಗಳು ಸೇರಿದಂತೆ ಹಲವು ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿದ್ದು, ಸಮಾಜದಲ್ಲಿ ನಶಾಮುಕ್ತಿಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
“ನಶಾಮುಕ್ತ ಭಾರತ ಎನ್ನುವುದು ಕೇವಲ ಘೋಷಣೆಯಲ್ಲ, ಅದೊಂದು ಮಹಾನ್ ಸಂಕಲ್ಪ. ಆರೋಗ್ಯಕರ ಮತ್ತು ಬಲಶಾಲಿ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಒಟ್ಟಾಗಿ ನಿಂತು ಮಾದಕ ದ್ರವ್ಯಗಳನ್ನು ತಿರಸ್ಕರಿಸಬೇಕು. ಯುವ ಸಮೂಹವನ್ನು ರಕ್ಷಿಸಿ ದೇಶದ ಉಜ್ವಲ ಭವಿಷ್ಯಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಎಂ.ಎಸ್. ಪರಮೇಶ್ವರಪ್ಪ, ಡಾ. ಸಿ.ಟಿ. ಜಯಣ್ಣ, ಡಾ. ರಮೇಶ್ ಕೆ., ಡಾ. ರವಿ ಮೆಟ್ಟಿಹಾಳ, ಕುಮಾರ್ ಜಿ. ಗಿರೀಶ್, ಮಿಸ್ಬಾ ಖಾನಂ, ಮೀರಾ ಯಾದವ್, ಮಲ್ಲೇಶ್, ಮಧು, ಡಾ. ಪುಷ್ಪಾ, ನಂದಿನಿ, ನಿರ್ಮಲ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್ಎಸ್ಎಸ್ ಘಟಕ–1ರ ಕಾರ್ಯಕ್ರಮ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಗೋವಿಂದಪ್ಪ ಎನ್.ಎಲ್. ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ನೆರವೇರಿಸಿದರು. ಎನ್ಎಸ್ಎಸ್ ಘಟಕ–2ರ ಕಾರ್ಯಕ್ರಮ ಅಧಿಕಾರಿ ಕೆ.ಎಚ್. ಶಿವಕುಮಾರ್ ವಂದಿಸಿದರು.




About The Author
Discover more from JANADHWANI NEWS
Subscribe to get the latest posts sent to your email.