ನಗರಂಗೆರೆ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರಂಗೆರೆ ಯಂಗ್ ಅಂಡ್ ಯೂತ್ ಅಸೋಸಿಯೇಷನ್ (NYAYA) ವತಿಯಿಂದ ಸೆ.12 ಮತ್ತು 13ರಂದು ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
‘ನೀರು ಉಳಿಸಿ, ಮರ ಬೆಳೆಸಿ, ಪ್ಲಾಸ್ಟಿಕ್ ತ್ಯಜಿಸಿ’ ಹಾಗೂ ‘ಇಂದಿನ ನಮ್ಮ ಜವಾಬ್ದಾರಿ–ನಾಳೆಯ ನಮ್ಮ ಭವಿಷ್ಯ’ ಎಂಬ ಘೋಷವಾಕ್ಯಗಳೊಂದಿಗೆ ಗ್ರಾಮದ ಮನೆಮನೆಗೆ ತೆರಳಿದ ಯುವಕರು, ಸುಮಾರು 350 ಮನೆಗಳಿಗೆ ಒಂದೊಂದು ಬಟ್ಟೆಯ ಕೈಚೀಲ ವಿತರಿಸಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹಲವು ಕುಟುಂಬಗಳು ಸಂತೋಷದಿಂದ ಕೈಚೀಲಗಳನ್ನು ಸ್ವೀಕರಿಸಿ, ಇನ್ನು ಮುಂದೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುತ್ತೇವೆ ಅಥವಾ ಸಂಪೂರ್ಣವಾಗಿ ತ್ಯಜಿಸಲು ಪ್ರಯತ್ನಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ನಗರಂಗೆರೆ ಗ್ರಾಮದ ನಿವಾಸಿ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಕೆ.ಆರ್. ತಿಪ್ಪೇಸ್ವಾಮಿ ಮತ್ತು ಗ್ರಾಮದ ನಿವಾಸಿ, ನಾಗರಂಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ವಹಿಸಿದ್ದರು. ಗ್ರಾಮದ ಯುವಕರು ಮನೆಮನೆಗೆ ತೆರಳಿ ಕೈಜೋಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಂತಹ ಸಣ್ಣ ಪ್ರಯತ್ನಗಳ ಮೂಲಕ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.









About The Author
Discover more from JANADHWANI NEWS
Subscribe to get the latest posts sent to your email.