ಚಿತ್ರದುರ್ಗ.ಸೆ.11:
ಜಿಲ್ಲೆಯ 390 ಪೂರ್ಣಗೊಂಡಿರುವ ಜೆ.ಜೆ.ಎಂ. ಕಾಮಗಾರಿಗಳ ಪೈಕಿ 383 ಕಾಮಗಾರಿಗೆ ಕಾಲಾವಧಿ ವಿಸ್ತರಣೆ ನೀಡಿ, ದಂಡ ವಿಧಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗೀಯ ಇಂಜಿಯರ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಾಮಗಾರಿ ಮೊತ್ತದ ಶೇ 10 ರಷ್ಟು ದಂಡ ವಿಧಿಸಲು ಅವಕಾಶವಿದ್ದರೂ, ದಿನವೊಂದಕ್ಕೆ ರೂ.500 ಅಥವಾ ಒಟ್ಟು ಮೊತ್ತದ ಶೇ1 ರಿಂದ ಶೇ 2 ರಷ್ಟು ದಂಡ ಹಾಕುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್.ಎಸ್ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ನೀರ್ ಲ್ಯಾಬ್ನಲ್ಲಿ ಶುಕ್ರವಾರ ಜರುಗಿದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2019ರಲ್ಲಿ ಪ್ರಧಾನಮಂತ್ರಿಯವರಿಂದ ಘೋಷಣೆಯಾದ ಜಲ ಜೀವನ್ ಮಿಷನ್ ಈ ಯೋಜನೆಯು 2024ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಗ್ರಾಮೀಣ ಮಟ್ಟದ ತಾಂತ್ರಿಕ ಹಾಗೂ ಸ್ಥಳೀಯ ಕಾರಣಗಳಿಂದ ಶೇ.99 ರಷ್ಟು ಕಾಮಗಾರಿಗಳು ನಿಗದಿತ ಸಮಯ ದಾಟಿದ ನಂತರವೇ ಪೂರ್ಣಗೊಂಡಿವೆ. ಪ್ರಸ್ತುತ 390 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾಲಾವಧಿ ವಿಸ್ತರಣೆ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿ ಸಮಿತಿಯಿಂದ ವಿಭಾಗೀಯ ಇಂಜಿಯರ್ ಕಚೇರಿ ಕಳುಹಿಸಿಕೊಡಲಾಗಿತ್ತು. ಈ ಪೈಕಿ 383 ಪ್ರಸ್ತಾವನೆಗಳನ್ನು ಒಪ್ಪಿ, ದಂಡ ವಿಧಿಸುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾ ಸಮಿತಿ ಮುಂದೆ ವಿಷಯ ಮಂಡಿಸಲಾಗಿದೆ.
ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ಲೋಪವೆಷ್ಟು ಮತ್ತು ಇಲಾಖೆಯ ಕಡೆಯಿಂದಾದ ವಿಳಂಬವೆಷ್ಟು ಎಂಬುದನ್ನು ದಿನಗಳ ಆಧಾರದ ಮೇಲೆ ಸ್ಪಷ್ಟವಾಗಿ ಲೆಕ್ಕಹಾಕಬೇಕು. ನಿಯಮಾವಳಿಗಳಂತೆ ಗುತ್ತಿಗೆದಾರರೊಂದಿಗೆ ಒಪ್ಪಂದ ಆದ ತಕ್ಷಣವೇ ಕಾರ್ಯಾದೇಶ ನೀಡಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಒಪ್ಪಂದದ ದಿನಾಂಕ ಹಾಗೂ ಕಾರ್ಯಾದೇಶ ನೀಡಿರುವ ದಿನಾಂಕಗಳ ನಡುವೆ 2 ರಿಂದ 3 ತಿಂಗಳ ವ್ಯತ್ಯಾಸವಿರುವುದು ಕಂಡುಬಂದಿದೆ.
ಬ್ಯಾಚ್-2 ಕಾಮಗಾರಿಗಳಲ್ಲಿ ವರ್ಕ್ ಆರ್ಡರ್ ನೀಡುವುದು ವಿಳಂಬವಾಗಿದ್ದರೂ, ನಿಗದಿತ ಗಡುವು ಮುಗಿದಿದೆ ಎಂಬ ಕಾರಣಕ್ಕೆ ಶೇಕಡ 1 ರಷ್ಟು ದಂಡ ವಿಧಿಸುವುದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರಿಗೆ ನಷ್ಟವಾಗುತ್ತಿದೆ. ಅದೇ ಸಮಯದಲ್ಲಿ ಕಾಮಗಾರಿ ವಿಳಂಬ ಮಾಡಿದವರಿಗೂ ಹಾಗೂ ನಿಯಮ ಪಾಲಿಸಿದವರಿಗೂ ಒಂದೇ ರೀತಿಯ ದಂಡ ಬೀಳುತ್ತಿರುವುದು ಸರಿಯಲ್ಲ. ಆದ್ದರಿಂದ ಅಧಿಕಾರಿಗಳು ಒಪ್ಪಂದದ ದಿನಾಂಕದ ಬದಲಾಗಿ, ಪ್ರಾಯೋಗಿಕವಾಗಿ ಕಾರ್ಯಾದೇಶ ನೀಡಿದ ನೈಜ ದಿನಾಂಕವನ್ನೇ ಪರಿಗಣಿಸಿ ಮುಂದಿನ ಪ್ರಕ್ರಿಯೆ ಹಾಗೂ ಕಾಲಾವಕಾಶ ವಿಸ್ತರಣೆಯನ್ನು ಲೆಕ್ಕಹಾಕಬೇಕು. ಗುತ್ತಿಗೆದಾರರಿಗೆ ಕೆಲಸ ನಿರ್ವಹಿಸಲು ಸ್ಥಳ ಹಸ್ತಾಂತರಿಸಿದ ದಿನವನ್ನು ಪರಿಗಣಿಸಿ, ವಿಳಂಬಗೊಂಡ ದಿನಗಳ ಆಧಾರದಲ್ಲಿ ದಂಡ ವಿಧಿಸಲು ಮಾನದಂಡ ರೂಪಿಸುವಂತೆ ಸಿಇಓ ಡಾ.ಆಕಾಶ್.ಎಸ್ ಸೂಚಿಸಿದರು.
500 ಆರ್ ಓ ಘಟಕ ಸ್ಥಾಪನೆಗೆ ಪ್ರಸ್ತಾವನೆ:
ಜಿಲ್ಲೆಯಲ್ಲಿ ಪ್ರಸ್ತುತ 1,000 ಚಾಲನೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು (ಆರ್ ಓ ಪ್ಲಾಂಟ್), ಸುಮಾರು 500 ಜನವಸತಿ (ತಾಂಡ ಹಾಗೂ ಹಳ್ಳಿ) ಪ್ರದೇಶಗಳಲ್ಲಿ ಆರ್ ಓ ಪ್ಲಾಂಟ್ ಸೌಲಭ್ಯವಿಲ್ಲ. ತಾಂಡಗಳಲ್ಲಿ ನೇರವಾಗಿ ಬೋರ್ವೆಲ್ ನೀರನ್ನೇ ಕುಡಿಯಲು ಬಳಸಲಾಗುತ್ತಿದೆ. ಕನಿಷ್ಠ 25 ಮನೆಗಳು ಅಥವಾ ಸೂಕ್ತ ಜನಸಂಖ್ಯೆ ಇರುವ ಇಂತಹ 500 ತಾಂಡ ಹಾಗೂ ಜನವಸತಿ ಪ್ರದೇಶಗಳಲ್ಲಿ ತಲಾ ರೂ.10 ಲಕ್ಷ ವೆಚ್ಚದಲ್ಲಿ ನೂತನ ಆರ್ ಓಘಟಕಗಳನ್ನು ಸ್ಥಾಪಿಸಲು ಕೆ.ಎಂ.ಇ.ಆರ್.ಸಿ ಅಡಿ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಸಿಇಓ ಡಾ.ಆಕಾಶ್.ಎಸ್ ತಿಳಿಸಿದರು.
ಓವರ್ ಹೆಡ್ ಟ್ಯಾಂಕರ್ಗಳ ಭದ್ರತೆಗೆ ಯೋಜನೆ:
ಜಿಲ್ಲೆಯಲ್ಲಿರುವ ಸುಮಾರು 2,000 ಓವರ್ಹೆಡ್ ಟ್ಯಾಂಕ್ಗಳ ಪೈಕಿ ಕನಿಷ್ಠ 1,000 ಟ್ಯಾಂಕ್ಗಳ ಕೆಳಭಾಗದಲ್ಲಿ ಕಾಂಕ್ರೀಟ್ ಫೆÇ್ಲೀರಿಂಗ್ ಹಾಗೂ ಸುತ್ತಲೂ ತಂತಿ ತಡೆಗೋಡೆ ನಿರ್ಮಿಸಿ ಸುರಕ್ಷತೆ ಕಾಯ್ದುಕೊಳ್ಳಲು ಯೋಜಿಸಲಾಗಿದೆ. ಇದಕ್ಕೆ ತಲಾ ರೂ.2.5 ಲಕ್ಷದಂತೆ ಕಾಮಗಾರಿಗಳ ಯೋಜನೆ ರೂಪಿಸಲಾಗಿದೆ.
ಮೂರು ಹೊಸ ರಾಸಾಯನಿಕ ಪ್ರಯೋಗಾಲಯ:
ಜಿಲ್ಲೆಯ ಆರು ತಾಲೂಕುಗಳ ಪೈಕಿ ಪ್ರಸ್ತುತ ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆಗಳಲ್ಲಿ ಮಾತ್ರ ನೀರು ಪರಿಶೀಲನಾ ರಾಸಾಯನಿಕ ಪ್ರಯೋಗಾಲಯಗಳಿವೆ. ಉಳಿದ ಹೊಳಲ್ಕೆರೆ, ಮೊಳಕಾಲ್ಮೂರು ಮತ್ತು ಹಿರಿಯೂರು ತಾಲೂಕುಗಳಲ್ಲೂ ಹೊಸದಾಗಿ ರಾಸಾಯನಿಕ ಪ್ರಯೋಗಾಲಯಗಳನ್ನು (ಕೆಮಿಕಲ್ ಲ್ಯಾಬ್) ಸ್ಥಾಪಿಸಲು ನಿರ್ಧರಿಸಲಾಗಿದೆ. ಹಾಲಿ ಇರುವ ಸರ್ಕಾರಿ ಕಟ್ಟಡಗಳನ್ನೇ ನವೀಕರಿಸಿ, ಅಗತ್ಯ ಉಪಕರಣಗಳನ್ನು ಅಳವಡಿಸಿ ಈ ಲ್ಯಾಬ್ಗಳನ್ನು ಕಾರ್ಯಾಚರಣೆಗೆ ತರಲಾಗುವುದು. ಈ ಎಲ್ಲಾ ಯೋಜನೆಗಳ ಅನುμÁ್ಠನಕ್ಕೆ ಒಟ್ಟಾರೆಯಾಗಿ ಸುಮಾರು ರೂ.75 ರಿಂದ 80 ಕೋಟಿ ಅನುದಾನದ ಅಗತ್ಯವಿದ್ದು, ಶೀಘ್ರವೇ ಕೆ.ಎಂ.ಇ.ಆರ್.ಸಿ ಸೆಲ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಸಿಇಓ ಡಾ.ಆಕಾಶ್.ಎಸ್ ಹೇಳಿದರು.
ತ್ಯಾಜ್ಯ ಸಾಗಣೆ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್:
ಗ್ರಾಮೀಣ ನೈರ್ಮಲ್ಯ ಮತ್ತು ಕಸ ಸಂಗ್ರಹಣೆ ವ್ಯವಸ್ಥೆಯನ್ನು ಬಲಪಡಿಸಲು ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ ಸಾಧನಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಮನೆ ಮನೆಗಳಿಂದ ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಜಿ.ಪಂ. ಹಂತದಲ್ಲೇ ನೇರವಾಗಿ ಟ್ರ್ಯಾಕ್ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ನಿತ್ಯ ಸುಮಾರು 45,000 ಕಿಲೋ ಒಣ ಮತ್ತು ಹಸಿ ತ್ಯಾಜ್ಯ ಸಂಗ್ರಹವಾಗುವ ಸಾಮಥ್ರ್ಯವಿದೆ. ಜಿಲ್ಲೆಯ 182 ಪಂಚಾಯತಿಗಳ ಪೈಕಿ 30 ರಿಂದ 40 ಪಂಚಾಯತಿಗಳಲ್ಲಿ ಅತಿ ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದು, ಅಂತಹ ಕಡೆಗಳಲ್ಲಿ ವಾಹನಗಳ ಸಂಚಾರ ಹಾಗೂ ಕಸ ಸಂಗ್ರಹಣೆಯನ್ನು ಕಟ್ಟುನಿಟ್ಟಾಗಿ ಜಿಪಿಎಸ್ ಮೂಲಕ ಉಸ್ತುವಾರಿ ಮಾಡಲಾಗುವುದು ಎಂದು ಸಿಇಓ ಡಾ.ಆಕಾಶ್.ಎಸ್ ತಿಳಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಬಾಬು, ಜಿ.ಪಂ.ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್, ವಲಯ ಅರಣ್ಯಾಧಿಕಾರಿ ವಸಂತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಕೃಷಿ ಇಲಾಖೆ ಉಪ ನಿರ್ದೇಶಕಿ ರಂಜಿತಾ, ಜಲತಜ್ಞ ದೇವರಾಜ ರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.