ನಾಯಕನಹಟ್ಟಿ:
ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಾತ್ರೆಗೆ ಬರುವ ಬೀದಿ ಬದಿ ವ್ಯಾಪಾರಿಗಳಿಂದ ಮನೆ ಮಾಲೀಕರು, ಸೈಟ್ ಮಾಲೀಕರು ಹಾಗೂ ವಿವಿಧ ಸ್ಥಳಗಳ ಮಾಲೀಕರು ಯಾವುದೇ ರೀತಿಯ ಹಣ ವಸೂಲಿ ಮಾಡಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಓ. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತೇರು ಬೀದಿಯ ಮನೆ ಹಾಗೂ ಅಂಗಡಿ ಮಾಲೀಕರಿಗೆ ತಿಳುವಳಿಕೆ ನೋಟಿಸ್ ನೀಡಿ ಮಾತನಾಡಿದ ಅವರು, ಫೆಬ್ರವರಿ 27ರಿಂದ ಮಾರ್ಚ್ 9ರವರೆಗೆ ನಡೆಯಲಿರುವ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಬಂದು ವ್ಯಾಪಾರ ಮಾಡುತ್ತಾರೆ. ಈ ವೇಳೆ ಪಟ್ಟಣದ ತೇರು ಬೀದಿ, ಜೆಸಿ ರಸ್ತೆ, ಹಟ್ಟಿ ಮಲ್ಲಪ್ಪ ನಾಯಕ ವೃತ್ತ, ನಾಗರಕಟ್ಟೆ, ಪಾದಗಟ್ಟೆ, ಪೊಲೀಸ್ ಠಾಣೆ ರಸ್ತೆ ಹಾಗೂ ವಿಐಪಿ ರಸ್ತೆಗಳಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಸ್ಥಾಪಿಸಲಿದ್ದಾರೆ ಎಂದರು.
ಜಾತ್ರೆಯ ಸಮಯದಲ್ಲಿ ಮೇಲ್ಕಂಡ ಸ್ಥಳಗಳಲ್ಲಿ ಇರುವ ಮನೆ, ಸೈಟ್ ಹಾಗೂ ಜಾಗಗಳ ಮಾಲೀಕರು ವ್ಯಾಪಾರಸ್ಥರಿಂದ ಯಾವುದೇ ರೀತಿಯ ಹಣ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿ ಹಣ ವಸೂಲಿ ಮಾಡಿರುವುದು ಕಂಡುಬಂದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
About The Author
Discover more from JANADHWANI NEWS
Subscribe to get the latest posts sent to your email.