ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಕ್ಷೇತ್ರದ ನೀರಾವರಿ ಯೋಜನೆಗಳಿಗೆ ವೇಗ ನೀಡುವ ಮೂಲಕ ಸ್ಥಳೀಯ ಕೆರೆಗಳಿಗೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ರಘುಮೂರ್ತಿ, ಚಿತ್ರದುರ್ಗ ಹಾಗೂ ಶಿರಾ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಜಂಟಿಯಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ತಾಲೂಕಿನ ಹಲವು ಕೆರೆಗಳಿಗೆ ಗುರುವಾರ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಈ ಭಾಗದ ನೀರಾವರಿ ಯೋಜನೆಗಳು ವಿಳಂಬವಾಗಿರುವುದನ್ನು ಸ್ಮರಿಸಿದ ಅವರು, ೧೯೬೨ರ ಎಸ್. ನಿಜಲಿಂಗಪ್ಪ ಅವರ ಕಾಲದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯೋಜನೆಗಳು ಹಲವು ವರ್ಷಗಳ ಕಾಲ ನಿರೀಕ್ಷೆಯಲ್ಲಿದ್ದವು. ಬಳಿಕ ೨೦೧೪ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಭೂಮಿಪೂಜೆ ನೆರವೇರಿಸಿ ಕಾಲುವೆ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದು ಹೇಳಿದರು.
ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಒಟ್ಟು ೧೨ ತಾಲೂಕುಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಿರುವ ಈ ಜಂಟಿ ನೀರಾವರಿ ಯೋಜನೆಯಡಿ ಪ್ರತಿಯೊಂದು ಪ್ರದೇಶಕ್ಕೂ ನಿಗದಿತ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಲಾಗಿದೆ. ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳುತ್ತಾ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೆರೆಗಳಿಗೆ ಹಂತ ಹಂತವಾಗಿ ನೀರು: ಸಾಣೇಹಳ್ಳಿ, ನೀರ್ಗಂದ, ಜಂತಿಕೊಳಲು, ಬಾಗೂರು, ದೇವಪುರ, ಜಾರಕಲ್ಲು ಹಾಗೂ ಮಣಶೆಳ್ಳಿ ಕೆರೆಗಳಿಗೆ ಈಗಾಗಲೇ ನೀರು ಹರಿಯಲು ಆರಂಭವಾಗಿದೆ. ತಾಂತ್ರಿಕ ಕಾರಣಗಳಿಂದ ಪೈಪ್ಲೈನ್ ಮೂಲಕ ನೇರವಾಗಿ ನೀರು ತಲುಪದ ಕೆರೆಗಳಿಗೆ ಹಳ್ಳ-ಕೋಡಿಗಳ ಮೂಲಕ ನೀರು ಹರಿಸುವುದು ಅಥವಾ ಮೋಟಾರ್ ಪಂಪ್ ಮೂಲಕ ಏತ ನೀರಾವರಿ ವ್ಯವಸ್ಥೆ ಕಲ್ಪಿಸುವ ಕ್ರಮ ಕೈಗೊಳ್ಳಲಾಗುವುದು. ಹಂತ ಹಂತವಾಗಿ ನೀರು ತಲುಪದ ಪ್ರತಿಯೊಂದು ಕೆರೆಗೂ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

About The Author
Discover more from JANADHWANI NEWS
Subscribe to get the latest posts sent to your email.