ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಮತದಾರರ ಪಟ್ಟಿ ಪರಿಷ್ಕರಣೆ ಬಿಜೆಪಿ ಷಡ್ಯಂತ್ರ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷರು ಇನ್ನು ೫೦ ವರ್ಷ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬರಬಾರದೆಂಬ ಹುನ್ನಾರ ನಡೆಸಿದ್ದು, ಕಾಂಗ್ರೆಸ್ ಮತದಾರರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ. ಪರಮೇಶ್ವರ ನಾಯಕ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಓದಲು ಬಾರದವರಿಗೆ ದೇಶದ ಅಧಿಕಾರ ಕೊಟ್ಟು ವಿದೇಶಗಳಲ್ಲಿ ಅವಮಾನ ಎದುರಿಸುತ್ತಿದ್ದೇವೆ. ಬಿಜೆಪಿ ಅವರಿಗೆ ಬಡವರ, ಮಹಿಳೆಯರ ಹಿತ ಬೇಕಿಲ್ಲ. ಅವರಿಗೆ ಬೇಕಿರುವುದು ಬರೀ ಅಧಿಕಾರ. ರಾಜ್ಯದಲ್ಲಿ ಈ ಬಾರಿ ಏನಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂಬ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ವೋಟ್ ಬರುವ ಕಡೆ ದುಡ್ಡು ಕೊಟ್ಟು ಸೋಲಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಾಲಿ ಮುಖ್ಯಮಂತ್ರಿಯವರನ್ನೇ ಸೋಲಿಸಿದರು. ಬಿಜೆಪಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ವಿರುದ್ಧ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಬಿಎಲ್ಒ ಒಬ್ಬರನ್ನೇ ನಂಬಿಕೊAಡು ಕೂತರೆ ಸಾಲದು. ಬೂತ್ ಮಟ್ಟದ ಏಜೆಂಟರ ಜೊತೆಗೆ ಸ್ಥಳೀಯ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು. ಮತದಾರರ ಹೆಸರು ಕಳೆದುಕೊಂಡರೆ ದೊಡ್ಡ ಅನಾಹುತವಾಗುತ್ತದೆ. ಆಧಾರ್ ಕಾರ್ಡ್ನಲ್ಲಿ ಹೇಗಿದೆಯೋ, ಹಾಗೆಯೇ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಪ್ರತಿಯೊಬ್ಬರೂ ಅರ್ಜಿ ತುಂಬಬೇಕು. ವಿವಿಧ ಅರ್ಜಿಗಳ ಬಗ್ಗೆ ಅತ್ಯಂತ ಜಾಗೃತರಾಗಬೇಕು. ಈ ಮೂಲಕ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ಯಾರಂಟಿ ಸಮಿತಿ ಅಧ್ಯಕ್ಷರು ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕೆಪಿಸಿಸಿ ಸದಸ್ಯರುಗಳು, ತಾಲೂಕು ಹಾಗೂ ಜಿಲ್ಲಾ ಮತ್ತು ರಾಜ್ಯ ಮುಖಂಡರುಗಳು, ಬಿಎಲ್ಒಗಳು ಪಕ್ಷದ ಕಾರ್ಯಕರ್ತರುಗಳು ಸೇರಿದಂತೆ ಮತ್ತಿತರರು ಇದ್ದರು.
ಬಾಕ್ಸ್ ಐಟಂ
ಈಗಾಗಲೇ ಮತಪಟ್ಟಿಯಲ್ಲಿರುವ ಎಲ್ಲಾ ಮತದಾರರು ಸಹ ಹೊಸದಾಗಿ ಅರ್ಜಿ ಕೊಟ್ಟು ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಯಾವುದೇ ತಪ್ಪಿಲ್ಲದಂತೆ ನೋಡಿಕೊಳ್ಳಬೇಕು. ಕ್ಷೇತ್ರದಲ್ಲಿ ಈಗಾಗಲೇ ೨,೦೧,೭೬೬ ಮತದಾರರು ಇದ್ದು, ಈ ಸಂಖ್ಯೆ ಯಾವುದೇ ಕಾರಣಕ್ಕೂ ಕುಸಿಯದಂತೆ ನೋಡಿಕೊಳ್ಳಬೇಕು. ಈ ಕಾರ್ಯದ ಯಶಸ್ಸಿಗೆ ನಾನು ಒಂದು ತಿಂಗಳ ಕಾಲ ಬೆಂಗಳೂರಿಗೆ ಹೋಗಲ್ಲ. ಕ್ಷೇತ್ರದಲ್ಲಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುತ್ತೇನೆ.
– ಬಿ.ಜಿ. ಗೋವಿಂದಪ್ಪ, ಶಾಸಕ, ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.