ಚಿತ್ರದುರ್ಗಜೂನ್ 08:
ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸಲು ಮತ್ತು ಯುವ ಸಮುದಾಯವನ್ನು ನಿಕೋಟಿನ್ ವ್ಯಸನದಿಂದ ರಕ್ಷಿಸಲು ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ತಂಬಾಕನ್ನು ನಿಲ್ಲಿಸೋಣ, ತಂಬಾಕು ಮುಕ್ತ ವಾತಾವರಣ ನಿರ್ಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಸಂದೇಶ ನೀಡಿ ಮಾತನಾಡಿದ ಅವರು, ತಂಬಾಕು ಬಳಕೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಅದನ್ನು ತ್ಯಜಿಸುವುದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳ ಮಾಹಿತಿ ಹಂಚಿಕೊಂಡಿದ್ದಾರೆ.
“ಆಕರ್ಷಣೆಯನ್ನು ಬಹಿರಂಗಪಡಿಸುವುದು-ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು” ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ ಎಂದು ತಿಳಿಸಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 8 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ. ಭಾರತದಲ್ಲೇ ವಾರ್ಷಿಕವಾಗಿ 13.5 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗುತ್ತಿದ್ದು, ಇವರಲ್ಲಿ ಯುವ ಪೀಳಿಗೆಯ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ಸಂಗತಿಯಾಗಿದೆ.
ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ (GATS-2) ಪ್ರಕಾರ, ಕರ್ನಾಟಕದಲ್ಲಿ 15 ವರ್ಷ ಮೇಲ್ಪಟ್ಟ ಯುವಜನತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಅತಿ ಹೆಚ್ಚು ತಂಬಾಕು ಸೇವನೆಗೆ ದಾಸರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸುವುದರಿಂದ ಧೂಮಪಾನ ನಿಲ್ಲಿಸಿದ 20 ನಿಮಿಷ ಹೃದಯ ಬಡಿತ ಸಾಮಾನ್ಯವಾಗುತ್ತದೆ. ಧೂಮಪಾನ ನಿಲ್ಲಿಸಿದ 12 ಗಂಟೆಗಳಲ್ಲಿ ನಿಮ್ಮ ದೇಹದ ಕಾರ್ಬನ್ ಡೈಯಾಕ್ಸೈಡಿನ ಪ್ರಮಾಣ ಸಾಮಾನ್ಯ ಹಂತಕ್ಕೆ ತಲುಪುತ್ತದೆ. ಸುಮಾರು 2 ರಿಂದ 12 ವಾರದಲ್ಲಿ ನಿಮ್ಮ ಶ್ವಾಸಕೋಶದ ಕಾರ್ಯ ಉತ್ತಮಗೊಳ್ಳುತ್ತದೆ. 1 ರಿಂದ 9 ತಿಂಗಳುಗಳಲ್ಲಿ ಕೆಮ್ಮು, ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ. 5 ರಿಂದ 15 ವರ್ಷಗಳಲ್ಲಿ ಪಾಶ್ರ್ವವಾಯು ಮತ್ತು ಹೃದಯಾಘಾತದ ಅಪಾಯವು ಗಣನೀಯವಾಗಿ ಇಳಿಕೆಯಾಗುತ್ತದೆ. ಹೀಗೆ ಹಲವು ಪ್ರಯೋಜನಗಳು ತಂಬಾಕು ಸೇವನೆ ತ್ಯಜಿಸುವುದರಿಂದ ಸಾಧ್ಯವಿದೆ.
ಚಿತ್ರದುರ್ಗ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಮತ್ತು ಸದೃಢ ನಾಗರಿಕರ ಸಮಾಜ ನಿರ್ಮಿಸಲು ಪ್ರತಿಯೊಬ್ಬ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಕ್ರಿಯವಾಗಿ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
============
About The Author
Discover more from JANADHWANI NEWS
Subscribe to get the latest posts sent to your email.