ಚಿತ್ರದುರ್ಗಫೆ.6:
ಮುಂಬರುವ ಮಾರ್ಚ್ ತಿಂಗಳ ಅಂತ್ಯದೊಳಗೆ ಪೌತಿ ಖಾತೆ ಅಭಿಯಾನ ಹಾಗೂ ದರ್ಖಾಸ್ತು ಪೋಡಿ ಪ್ರಕರಣಗಳನ್ನೂ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.




ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 1,89,435 ಪೌತಿ ಖಾತೆಗಳು ಇದ್ದು, ಇದುವರೆಗೂ ಕೇವಲ 19,839 ಪೌತೆ ಖಾತೆಗಳ ಬದಲಾವಣೆ ಕಾರ್ಯಪೂರ್ಣಗೊಂಡಿದೆ. 1,21,930 ಪೌತಿ ಖಾತೆಗಳ ಬಾಕಿಯಿವೆ. ವಾರಸುದಾರರ ಮಧ್ಯದ ವ್ಯಾಜ್ಯದ ಕಾರಣದಿಂದ ಪೌತಿ ಖಾತೆ ಬದಲಾವಣೆ ವಿಳಂಬವಾದರೆ, ಈ ಕುರಿತು ಸ್ಪಷ್ಟವಾಗಿ ತಹಶೀಲ್ದಾರರು ಮಾಹಿತಿ ನೀಡಬೇಕು. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರೆತೆಯಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ, ಶೇ.80 ಪೌತಿ ಖಾತೆಗಳ ಬದಲಾವಣೆ ಸುಲಭವಾಗಿ ಮುಗಿಯಲಿದೆ. ಜಿಲ್ಲೆಯಲ್ಲಿ ಮೊಳಕಾಲ್ಮೂರು ತಾಲ್ಲೂಕು ಹೊರತು ಪಡಿಸಿದರೆ ಬೇರೆ ತಾಲ್ಲೂಕುಗಳಲ್ಲಿ ಪೌತಿ ಖಾತೆ ಬದಲಾವಣೆ ಕಾರ್ಯ ಮಂದಗತಿಯಲ್ಲಿದೆ. ಸಂಬAದ ಪಟ್ಟ ತಹಶೀಲ್ದಾರರು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಕಂದಾಯ ಗ್ರಾಮಗಳ ಸೇರ್ಪಡೆಗೆ ಕಾಯ್ದೆಯಡಿ ಮಾರ್ಚ್ 15 ವರಗೆ ಕಾಲಾವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ 418 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ 386 ಗ್ರಾಮಗಳ ಅಧಿಸೂಚನೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸಚಿವಾಲಯದಿಂದ ಹಿಂದಿರುಗಿದ ಪ್ರಸ್ತಾವನೆಗಳನ್ನು ಪುನಃ ಪರಿಶೀಲಿಸಿ, ಇದರೊಂದಿಗೆ ಬಿಟ್ಟು ಹೋಗಿರುವ ಜನವಸತಿ ಪ್ರದೇಶಗಳ ಸೇರ್ಪಡೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಬಗರ್ ಹುಕುಂ ಮಂಜೂರಾತಿಯಡಿ ಜಿಲ್ಲೆಯಲ್ಲಿ 76,893 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ಸೆಕ್ಷ್ನ್ 4 ಹಾಗೂ ಪರಿಭಾವಿತ(ಡೀಮ್ಡ್) ಅರಣ್ಯ ಎಂದು ಆರ್.ಟಿ.ಸಿ ಅಲ್ಲಿ ನಮೂದಾಗಿದ್ದು, ಫಲಾನುಭವಿಗಳು ಮೊದಲಿನಿಂದಲೂ ಉಳುಮೆ ಮಾಡುತ್ತಿದ್ದರೆ ಅಂತವರ ವಿವರವನ್ನು ಸಂಗ್ರಹಿಸಿ. ಮೂಲತಃ ಕಂದಾಯ ಭೂಮಿಯಾಗಿದ್ದು, ಅರಣ್ಯ ಇಲಾಖೆ ಡೀಮ್ಡ್ ಅರಣ್ಯ ಎಂದು ನಮೂದಿಸಿರುವ ಜಾಗಗಳನ್ನು ಅರಣ್ಯ ಇಲಾಖೆಯೊಂದಿಗೆ ಸರ್ವೇ ನಡೆಸಿ ಪುನರ್ ಪರಿಶೀಲನೆ ಮಾಡಬೇಕು. ಡೀಮ್ಡ್ ಅರಣ್ಯದ ನಿಯಮಗಳಡಿ ಬರದಿರುವ ಕಂದಾಯ ಇಲಾಖೆ ಜಾಗಗಳನ್ನು ಪುನಃ ಸುಪರ್ದಿ ಪಡೆದುಕೊಳ್ಳಲು ಕ್ರಮ ವಹಿಸುವಂತೆ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.
ಜಿಲ್ಲೆಯಲ್ಲಿ ಶೇ.90 ರಷ್ಟು ಆರ್.ಟಿ.ಸಿ ಒಳಗೆ ಮಾಲೀಕರ ಆಧಾರ ಸೀಡಿಂಗ್ ಮಾಡುವ ಕಾರ್ಯ, 1.04 ಕೋಟಿ ಕಂದಾಯ ದಾಖಲೆಗಳ ಸ್ಕಾö್ಯನಿಂಗ್ ಕಾರ್ಯ ಪೂರ್ಣಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಿ:
ಕಾಡುಗೊಲ್ಲರು ವಾಸಿಸುವ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಬೇಕು ಹಾಗೂ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಕಂದಾಯ ಸಚಿವರಿಗೆ ಒತ್ತಾಯಿಸಿದರು.
ಕಾಡುಗೊಲ್ಲ ಸಮುದಾಯದ ಜನರಿಗೆ ಕಾಡುಗೊಲ್ಲ ಎಂಬ ಜಾತಿ ಪ್ರಮಾಣ ಪತ್ರವನ್ನು ಪಡೆಯುವಲ್ಲಿ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ, ಸುಲಭವಾಗಿ ಪ್ರಮಾಣ ಪತ್ರ ಸಿಗುವಂತಾಗಬೇಕು ಎಂದು ತಿಳಿಸಿದ ಅವರು, ರಾಜ್ಯ ಸರ್ಕಾರವು ಈಗಾಗಲೇ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮೂಲಕ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಮತ್ತು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿ ಹಕ್ಕು ಪತ್ರ ವಿತರಣೆಯಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ಕಚೇರಿಯ ಶಿರಸ್ತೆದಾರರಾದ ಎಸ್.ನೇತ್ರಾವತಿ ಹಾಗೂ ವಿಷಯ ನಿರ್ವಾಹಕಿ ಬಿ.ಎನ್.ರಕ್ಷಿತಾ ಅವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಗೌರವಿಸಿದರು.
ಸಭೆಯಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಭೂ ದಾಖಲೆಗಳ ಉಪನಿರ್ದೇಶಕಿ ಭಾಗ್ಯಮ್ಮ ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕಿನ ತಹಶೀಲ್ದಾರ್ಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.