ಚಿತ್ರದುರ್ಗ.ಜೂ.03:
ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಸಮರ್ಪಕವಾಗಿದ್ದು, ಯಾವುದೇ ರೀತಿಯ ಇಂಧನ ಕೊರತೆ ಇಲ್ಲ. ಇಂಧನ ಪೂರೈಕೆ ಎಂದಿನಂತೆ ಸಹಜವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯಿಲ್ ಕಂಪನಿಗಳ ಅಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂಧನದ ಅನಧಿಕೃತ ದಾಸ್ತಾನು ಇರಿಸುವುದು ಮತ್ತು ತಾತ್ಕಾಲಿಕ ಕೊರತೆ ಸೃಷ್ಠಿಸುವಂತಹ ಪ್ರಕರಣ ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಸಂಬಂಧಪಟ್ಟ ನಿಯಮಗಳಡಿ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಔದ್ಯೋಗಿಕ ಮತ್ತು ವಾಣಿಜ್ಯ ಖರೀದಿದಾರರು ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುತ್ತಿರುವುದನ್ನು ತಡೆಗಟ್ಟಬೇಕು. ಬೃಹತ್ ಗ್ರಾಹಕರಿಗೆ ಬೇಡಿಕೆಯನ್ನು ಪೆಟ್ರೋಲ್ ಬಂಕ್ಗಳ ಮುಖಾಂತರ ಪೂರೈಕೆ ಮಾಡದೇ ಕಡ್ಡಾಯವಾಗಿ ನೇರವಾಗಿ ತೈಲ ಕಂಪನಿಗಳ ಮುಖಾಂತರವೇ ನಿಯಮಾನುಸಾರ ಇಂಧನ ಖರೀದಿಸಬೇಕು. ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರು ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಡೀಸೆಲ್ ಖರೀದಿಸುದನ್ನು ಉತ್ತೇಜಿಸಬಾರದು. ಬಂಕ್ಗಳಲ್ಲಿ ಅನಗತ್ಯವಾಗಿ ಸಾರ್ವಜನಿಕರ ಜನದಟ್ಟಣೆ ಉಂಟಾಗದಂತೆ ನಿಯಂತ್ರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅನಧಿಕೃತ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟ, ಪೆಟ್ರೋಲ್ ಬಂಕ್ಗಳಲ್ಲಿ ಅಕ್ರಮ ದಾಸ್ತಾನು ಇಡದಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ಗ್ರಾಹಕರ ಬೇಡಿಕೆಯನ್ನು ಪೂರೈಸಲು ತೈಲ ಕಂಪನಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಇಂಧನ ಪೂರೈಕೆ ಎಂದಿನಂತೆ ಸಹಜವಾಗಿದ್ದು, ಕಂಪನಿಗಳಿಂದ ನಿರಂತರ ಸರಬರಾಜು ಆಗುತ್ತಿದೆ ಎಂದು ತೈಲ ಕಂಪನಿಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಐ.ಓ.ಸಿ.ಎಲ್ ಸೇಲ್ಸ್ ಅಧಿಕಾರಿ ಪ್ರತಾಪ್, ಬಿ.ಪಿ.ಸಿ.ಎಲ್ ಸೇಲ್ಸ್ ಅಧಿಕಾರಿ ಜಯಚಂದ್ರ, ಹೆಚ್.ಪಿ.ಸಿ.ಎಲ್ ಸೇಲ್ಸ್ ಅಧಿಕಾರಿ ಸುಮಂತ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.