July 1, 2026

ಅಂತರಾಷ್ಟ್ರೀಯ ಎಂಎಸ್‍ಎಂಇ ದಿನಾಚರಣೆ ಅಂಗವಾಗಿ ಭಿತ್ತಿಪತ್ರ ಬಿಡುಗಡೆ


ಚಿತ್ರದುರ್ಗ29:
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈಚೆಗೆ ನಡೆದ ಅಂತರಾಷ್ಟ್ರೀಯ ಎಂಎಸ್‍ಎಂಇ ದಿನಾಚರಣೆ ಅಂಗವಾಗಿ ಆರ್‍ಬಿಐ ವಿನ್ಯಾಸಗೊಳಿಸಿದ ಭಿತ್ತಿಪತ್ರಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಬಿಡುಗಡೆಗೊಳಿಸಿದರು.
ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್ ಮಾತನಾಡಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಉದ್ಯಮ್ ನೋಂದಣಿ ಮಾಡಿಕೊಂಡರೆ ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆಯಬಹುದು ಎಂದು ಮಾಹಿತಿ ನೀಡಿದ ಅವರು, ಈ ಭಿತ್ತಿಪತ್ರಗಳನ್ನು ಜಿಲ್ಲೆಯ ಎಲ್ಲ ಬ್ಯಾಂಕ್ ಶಾಖೆಗಳು ಮತ್ತು ಆರ್‍ಎಸ್‍ಇಟಿಐ ಕೇಂದ್ರಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಆರ್‍ಬಿಐ ವಿನ್ಯಾಸಗೊಳಿಸಿದ ಭಿತ್ತಿಪತ್ರದಲ್ಲಿ ಉದ್ಯಮ್ ನೋಂದಣಿಯ ಪ್ರಯೋಜನಗಳ ಬಗ್ಗೆ ಜಾಗೃತಿ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸಾಲ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಬ್ಯಾಂಕುಗಳು ಅನುಸರಿಸಬೇಕಾದ ಆರ್‍ಬಿಐ ಮಾರ್ಗಸೂಚಿಗಳ ಕಾಲಮಿತಿ, ಮೇಲಾಧಾರ ರಹಿತ ಸಾಲದ ಮಿತಿಗಳು, ಎಂಎಸ್‍ಇ ಸಾಲಗಳನ್ನು ಮುಕ್ತಾಯಗೊಳಿಸುವಾಗ ವಿಧಿಸಲಾಗುವ ಪೂರ್ವಪಾವತಿ ಶುಲ್ಕಗಳ ವಿವರವಾದ ಮಾಹಿತಿ ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಬಿ.ಕೆ.ಮಂಜುನಾಥಸ್ವಾಮಿ, ಬೆಂಗಳೂರು ಡಿಎಫ್‍ಎಸ್-ಎಂಎಸ್‍ಎಂಇ ಉಪ ನಿರ್ದೇಶಕ ಶಿವಕುಮಾರ್ ಇದ್ದರು.