ಹಿರಿಯೂರು :
ವಾಣಿವಿಲಾಸ ಜಲಾಶಯ ಹಾಗೂ ಗಾಯತ್ರಿ ಜಲಾಶಯ ಸೇರಿದಂತೆ ಸಾಕಷ್ಟು ಜಲಾಶಯಗಳಿದ್ದರೂ, ಇಂಥ ಸಂದರ್ಭದಲ್ಲಿ ಬೇಸಿಗೆ ಬೆಳೆಗಳಾದ ಸೂರ್ಯಕಾಂತಿ, ಶೇಂಗಾ, ರಾಗಿ, ಮೆಕ್ಕೆಜೋಳ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ ಬಾಳೆ ದಾಳಿಂಬೆ ಮಾವು ಮುಂತಾದ ಬೆಳೆಗಳಿಗೆ ಜನವರಿ ಮೊದಲನೇ ವಾರದಿಂದ ನೀರು ಹರಿಸಬೇಕಾಗಿತ್ತು ಆದರೆ ವಿಳಂಬವಾಗಿದೆ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿ, ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ಹಾಗೂ ಗಾಯಿತ್ರಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಗಳ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ವಿಶ್ವೇಶ್ವರ ಜಲನಿಗಮದ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈಗಲಾದರೂ ನಾಲೆಗಳಲ್ಲಿ ತುಂಬಿರುವ ಗಿಡಗಂಟೆ, ಆಪು ಮತ್ತು ಹೂಳು ತುಂಬಿಕೊಂಡಿದ್ದು ಕೂಡಲೇ ನಾಲೆಯನ್ನು ಸ್ವಚ್ಛ ಮಾಡಿ ತೂಬು ಹಾಗೂ ಸಣ್ಣಪುಟ್ಟ ಕೆಲಸಗಳಿದ್ದರೆ ರಿಪೇರಿ ಮಾಡಿಕೊಂಡು ಜನವರಿ 15ರೊಳಗಾಗಿ ನೀರು ಹರಿಸಿದರೆ ಬೇಸಿಗೆ ಬೆಳೆ ಬೆಳೆಯಲು ಉತ್ತಮವಾಗುತ್ತದೆ,
ಆದ್ದರಿಂದ ತುರ್ತಾಗಿ ನೀರು ಹರಿಸಲು ಜಿಲ್ಲಾಧಿಕಾರಿಗಳು ಸಭೆ ಕರೆದು ದಿನಾಂಕ ನಿಗದಿಪಡಿಸಿ ನೀರು ಹರಿಸಬೇಕು ಎಂಬುದಾಗಿ ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಬಿ.ಆರ್.ರಂಗಸ್ವಾಮಿ, ತಿಮ್ಮಾರೆಡ್ಡಿ, ಸಿದ್ದಪ್ಪ, ರಾಜಪ್ಪ, ಜಗನ್ನಾಥ್, ರಮೇಶ್, ಸಣ್ಣತಿಮ್ಮಣ್ಣ, ಬಾಲಕೃಷ್ಣ, ರಂಗಸ್ವಾಮಿ, ವಿರುಪಾಕ್ಷಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.