
ಚಿತ್ರದುರ್ಗ ನ.23:
ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಲ್ಲಾಪುರ ಶಾಲೆಯ ಮಕ್ಕಳು ಬಿಸಿಯೂಟ ಮಾಡುತ್ತಿದ್ದ ಸಂದರ್ಭದಲ್ಲಿ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ ಊಟ ಕೊಡುವಲ್ಲಿ ಏನಾದರೂ ಸಮಸ್ಯೆ ಇದೆಯಾ? ಎಂದು ಮಕ್ಕಳನ್ನು ಕೇಳಿದಾಗ ಯಾವುದೇ ಸಮಸ್ಯೆ ಇಲ್ಲ, ಹೊಟ್ಟೆ ತುಂಬಾ ಊಟ ಕೊಡುತ್ತಾರೆ, ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಶಾಲೆಯ ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಂಗ ಮಾಡಿ, ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ನಂತರ ಸಿಇಒ ಎಸ್.ಜೆ.ಸೋಮಶೇಖರ್ ಅವರು ಬಿಸಿಯೂಟ ತಯಾರು ಮಾಡುವ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಕುಡಿಯುವ ನೀರು, ಶೌಚಾಲಯ ವೀಕ್ಷಣೆ ಮಾಡಿದರು. ನಂತರ ಇನ್ಫರ್ಮೇಷನ್ ಅಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ ಕೊಠಡಿಗೆ ತೆರಳಿ ವಿದ್ಯಾರ್ಥಿಗಳು ಬಳಸುವ ಕಂಪ್ಯೂಟರ್ ಪರಿಶೀಲಿಸಿದರು. ಹಾಗೆಯೇ ಮಕ್ಕಳ ಆಟಿಕೆ ಕೊಠಡಿಗೆ ಭೇಟಿ ನೀಡಿ, ಮಕ್ಕಳು ಬಿಡಿಸಿದ ವಿವಿಧ ಬಗೆಯ ಚಿತ್ರಗಳು, ಗಣಿತ ಮತ್ತು ಇಂಗ್ಲಿμï ಆಟಿಕೆಗಳ ಬಗ್ಗೆ ಮಾಹಿತಿ ಪಡೆದು ಶಾಲೆಯ ದಾಖಲಾತಿ ಪರಿಶೀಲಿಸಿದರು.
ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 140 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 7 ಮಂದಿ ಶಿಕ್ಷಕರು ಇದ್ದಾರೆ. ಪ್ರತಿ ದಿನ ಶುಚಿತ್ವದೊಂದಿಗೆ ರುಚಿಯಾದ ಅಡುಗೆಯನ್ನು ತಯಾರಿಸಿ, ವಿದ್ಯಾರ್ಥಿಗಳಿಗೆ ನಿತ್ಯವೂ ಮೊಟ್ಟೆಯೊಂದಿಗೆ ಬಿಸಿಯೂಟ ನೀಡಲಾಗುತ್ತಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಂ.ರತ್ನಮ್ಮ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಎಸ್ಎಸ್ಕೆ ಜಿಲ್ಲಾ ಉಪಯೋಜನಾಧಿಕಾರಿ ಸಿ.ಎಸ್ ವೆಂಕಟೇಶ್, ಅಕ್ಷರ ದಾಸೋಹದ ಅಧಿಕಾರಿ ಅಶ್ವಥ್ ನಾರಾಯಣ್, ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಂ ರತ್ನಮ್ಮ, ಸಹ ಶಿಕ್ಷಕರಾದ ಎಚ್.ಸೌಭಾಗ್ಯಮ್ಮ, ಶೋಭಾ, ಜೆ.ಆರ್.ಭಾಗ್ಯ, ಜಿ.ಲತಾ, ಸಲೀಂ, ಶಿಲ್ಪ ಮತ್ತು ಶಶಿಕುಮಾರ್ ಇದ್ದರು.






About The Author
Discover more from JANADHWANI NEWS
Subscribe to get the latest posts sent to your email.