ಚಿತ್ರದುರ್ಗ ನ.29:
ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡವಾಗಿದ್ದು, ಎಲ್ಲರೂ ತಪ್ಪದೇ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಸಂಜೆ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ನಾಮನಿರ್ದೇಶಿತ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಗುರುತರ ಹೊಣೆಗಾರಿಕೆ ರಾಜ್ಯ ಸರ್ಕಾರಿ ನೌಕರರ ಮೇಲಿದೆ. ಭಾಷೆಯ ಬೆಳವಣಿಗೆಗೆ ಶ್ರಮಿಸಿದ ಸಾಹಿತಿಗಳು, ಕವಿಗಳು, ವಿದ್ವಾಂಸರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹಲವು ಆಡಳಿತ ವ್ಯವಸ್ಥೆಗಳಲ್ಲಿ ಹಂಚಿ ಹೋಗಿದ್ದ ಕನ್ನಡಿಗರು ಒಂದು ರಾಜ್ಯದ ವ್ಯಾಪ್ತಿಗೆ ಸೇರಿದ ಸಂದರ್ಭವನ್ನು ರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬರು ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಕನ್ನಡ ನಾಡು ವೈಶಿಷ್ಟ್ಯತೆಯಿಂದ ಕೂಡಿದ್ದು, ಇಂತಹ ಪುಣ್ಯಭೂಮಿಯಲ್ಲಿ ಜನ್ಮ ಪಡೆದು ನಾವುಗಳೇ ಧನ್ಯರು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘಕ್ಕೆ ಹೊಸದಾಗಿ ನೇಮಕಗೊಂಡ ನಾಮನಿರ್ದೇಶನ ಸದಸ್ಯರಿಗೆ ಶುಭ ಹಾರೈಸಿ, ಎಲ್ಲರೂ ಸಂಘಟನೆಯ ಜತೆಗೆ ಕೈಜೋಡಿಸುವ ಮೂಲಕ ಸರ್ಕಾರಿ ನೌಕರರಿಗೆ ಸೇವೆ ಸಲ್ಲಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರಿಯಾಗಬೇಕು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಮಾತನಾಡಿ, ಕನ್ನಡ ನಾಡು ಹಲವು ವೈವಿಧ್ಯಗಳ ಬೀಡು. ಇಲ್ಲಿನ ಪ್ರತಿಯೊಂದು ಅಂಶವು ನಮ್ಮಲ್ಲಿ ರಾಷ್ಟ್ರಾಭಿಮಾನ ಉಕ್ಕುವಂತೆ ಮಾಡುತ್ತದೆ. ಇಂತಹ ಅದ್ಭುತ ಕನ್ನಡ ನಾಡು ಉದಯವಾಗಲು ಹಲವು ಮಹನೀಯರು ಶ್ರಮಿಸಿದ್ದಾರೆ ಎಂದರು.
ಕನ್ನಡ ಭಾಷೆ ಮತ್ತು ಸಂಸ್ಕøತಿಯ ಏಕೀಕರಣ ಮತ್ತು ಉತ್ತೇಜನಕ್ಕಾಗಿ 1962ರಲ್ಲಿ ಸ್ಥಾಪಿತವಾದ ಕರ್ನಾಟಕ ಸಂಯುಕ್ತ ರಂಗ ಎಂಬ ಕನ್ನಡಪರ ಸಂಘಟನೆ ಶ್ರಮಿಸಿತು. ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ, ಈ ಸಂಘಟನೆಯು 1963ರಲ್ಲಿ ಮೊದಲ ಬಾರಿಗೆ ರಾಜ್ಯೋತ್ಸವ ಆಚರಣೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿತು. ಇದು ರಾಜ್ಯೋತ್ಸವ ಆಚರಣೆಗೆ ನಾಂದಿ ಹಾಡಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ, ಖಜಾಂಚಿ ಎ.ಮಲ್ಲಿಕಾರ್ಜುನ, ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಹಿರಿಯೂರು ಅಧ್ಯಕ್ಷ ರಮೇಶ್, ಹಿರಿಯ ಉಪಾಧ್ಯಕ್ಷ ಡಾ.ಚಂದ್ರಕಾಂತ ಎಸ್.ನಾಗಸಮುದ್ರ, ಉಪಾಧ್ಯಕ್ಷರಾದ ಬಿ.ವಿ.ತುಕಾರಾಂರಾವ್, ಕೆ.ಪ್ರಕಾಶ್, ರುದ್ರಮುನಿ ಹೆಚ್. ಪೂಜಾರ್, ಕಾರ್ಯಾಧ್ಯಕ್ಷ ವಿಶ್ವನಾಥ್, ನಿಕಟಪೂರ್ವ ಅಧ್ಯಕ್ಷರಾದ ಕೆ.ಟಿ.ತಿಮ್ಮಾರೆಡ್ಡಿ, ಬಾಗೇಶ್ ಉಗ್ರಾಣ ಹಾಗೂ ಪದಾಧಿಕಾರಿಗಳು, ನಿರ್ದೇಶಕರು, ನಾಮನಿರ್ದೇಶಕರು ಹಾಗೂ ವಿವಿಧ ಇಲಾಖೆಗಳ ನೌಕರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.