January 29, 2026
IMG-20241029-WA0158.jpg

ಚಳ್ಳಕೆರೆ : ಆಧುನಿಕತೆಯನ್ನು ಬಹುಬೇಗ ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿರುವ ನಮ್ಮ ದೇಶದಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಆಚರಣೆ ಇರುವಂತದ್ದು ವಿಷಾದನೀಯ ಎಂದು ಚಳ್ಳಕೆರೆ ಹೆಚ್.ಪಿ.ಪಿ.ಸಿ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ಚಳ್ಳಕೆರೆ, ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1989ರ ವಿಷಯ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುಟ್ಟುತ್ತಲೇ ಯಾವ ವ್ಯಕ್ತಿ ಅಸ್ಪರ್ಶನಾಗಿ ಹುಟ್ಟುವುದಿಲ್ಲ ಆದರೆ ಆ ವ್ಯಕ್ತಿಯು ಬೆಳೆಯುತ್ತಾ ಸಮಾಜದಲ್ಲಿ ಜಾತಿ ವ್ಯವಸ್ಥೆಗೆ ಬಲಿಯಾಗಿ ಅಸ್ಪೃಶ್ಯನಾಗಲು ಕಾರಣೀಕರ್ತನಾಗುತ್ತಾನೆ ಆದರೆ ಅಂತಹ ಅಸ್ಪೃಶ್ಯತೆಯನ್ನು ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದ ಹೋಗಲಾಡಿಸಲು ಮುಂದಾಗ ಬೇಕಾಗಿದೆ. ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆಯು ಹೋಗಲಾಡಿಸಲಾಗದಷ್ಟು ಹೆಮ್ಮರವಾಗಿ ಬೆಳೆದಿದೆ, ಅಂತ ಕೆಟ್ಟ ಮನಸ್ಥಿತಿಯನ್ನು ಕಿತ್ತುಹಾಕಿ ನಾವೆಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಪಾಪಣ್ಣ ಮಾತನಾಡಿ
ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಔದ್ಯೋಗಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರನ್ನು ಪರಿಶಿಷ್ಟರು ಎಂದು ನಮ್ಮ ಸಂವಿಧಾನದಲ್ಲಿ ತಿಳಿಸಲಾಗಿದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಆದರೂ ಸಹ ಇನ್ನೂ ಸಹ ದೌರ್ಜನ್ಯಗಳು ನಡೆಯುತ್ತಲೇ ಇವೆ. ಅಸ್ಪೃಶ್ಯರನ್ನು ಊರಿನ ಮುಖ್ಯ ರಸ್ತೆಯಲ್ಲಿ ಹೋಗಲು ಬಿಡುವುದಿಲ್ಲವೋ ಅಥವಾ ದೇವಸ್ಥಾನದ ಒಳಗೆ ಹೋಗಲು ಅಡ್ಡಿಪಡಿಸುತ್ತಾರೆ ಮತ್ತು ಗ್ರಾಮದಲ್ಲಿ ಅಸ್ಪೃಶ್ಯರನ್ನು ಕ್ಷೌರ ಮಾಡುವುದಿಲ್ಲವೋ ಅಂತವರ ವಿರುದ್ಧ ಇಂತಹ ಕಾಯ್ದೆಗೆ ಒಳಪಡುತಾರೆ ಹಾಗಾಗಿ ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿರುವುದರಿಂದ ಜಾತಿನಿಂದನೆಯನ್ನು ಮಾಡದೆ ಸಮಾಜಕ್ಕೆ ಹಾಗೂ ತಂದೆ ತಾಯಿಗೆ ಹೆಸರನ್ನು ತರುವಂತಹ ಪ್ರಜೆ ಆಗಬೇಕೆಂದರು.

ಬ್ರಾಹ್ಮಣ ಕ್ಷತ್ರಿಯರನ್ನು ಹೊರತುಪಡಿಸಿದರೆ ಬೇರೆ ಯಾವ ಜಾತಿಯವರಿಗೂ ವಿದ್ಯೆ ಕಲಿಯಲು ಅವಕಾಶ ಕೊಟ್ಟಿರಲಿಲ್ಲ ಆದರೆ ಅಂಬೇಡ್ಕರ್ ತಂದಂತಹ ಸಂವಿಧಾನವು ಯಾವುದೇ ಜಾತಿಯನ್ನದೇ ಪ್ರತಿಯೊಬ್ಬರಿಗೂ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ವಿದ್ಯೆ ಕಲಿಯಲು ಪ್ರೇರಣೆಯಾಗಿದೆ.

ದೌರ್ಜನ್ಯ ಎಂದರೆ ಹೊಡೆಯುವುದಲ್ಲ ಸಾರ್ವಜನಿಕ ಸ್ಥಳಗಳಿಗೆ ಹೋಗದಂತೆ ತಡೆದವರ ವಿರುದ್ಧ ಸಂವಿಧಾನದ ಅಡಿಯಲ್ಲಿ ಶಿಕ್ಷೆ ಕೊಡುವುದು ಹಾಗಾಗಿ ಯಾರು ಕೋಪಕ್ಕೆ ತಮ್ಮ ತಾಳ್ಮೆಯನ್ನು ಬಲಿಕೊಟ್ಟು ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಸಮಾಜದ ಪ್ರತಿಯೊಬ್ಬ ಪ್ರಜೆಯು ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸಿದರೆ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಜಾತಿ ವ್ಯವಸ್ಥೆಯನ್ನು ಮನಸ್ಸಿನಿಂದ ಕಿತ್ತು ಹಾಕಬೇಕು ಎಂದು ತಿಳಿಸಿದರು.

ಚಳ್ಳಕೆರೆ ಪೊಲೀಸ್ ಠಾಣೆಯ ಪಿಎಸ್ಐ ಸತೀಶ್ ನಾಯ್ಕ್ ಮಾತನಾಡಿ ಸಮಾಜದಲ್ಲಿ ನೆಮ್ಮದಿಯಾಗಿ ಬದುಕಬೇಕಾದರೆ ನಾವು ಕಾನೂನಿಗೆ ಗೌರವ ಕೊಡಬೇಕು ಹಾಗೂ ಯಾರು ಧರ್ಮವನ್ನು ಪ್ರೀತಿಸುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ,ಅಸ್ಪೃಶ್ಯತಾ ಪ್ರತಿಬಂದಕ್ಕ ಕಾಯ್ದೆ ಜಾರಿಗೆ ಬಂದು 35 ವರ್ಷವಾದರೂ ನಮ್ಮ ಸಮಾಜದಲ್ಲಿ ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲೂಕಿನಲ್ಲಿ ಅಸ್ಪೃಶ್ಯತೆಯು ಹೆಮ್ಮರವಾಗಿ ಬೆಳೆದಿದೆ ಇದು ಅವರ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಪ್ರಜ್ಞಾವಂತರು ಆಗಿರುವುದರಿಂದ ಇಂತಹ ದೌರ್ಜನ್ಯಗಳನ್ನ ಮಾಡದೆ ನಾವೆಲ್ಲರೂ ಒಂದೇ ಎಂದು ಬದುಕಬೇಕು ಆಗ ನಮ್ಮ ವ್ಯಕ್ತಿತ್ವಕ್ಕೆ ಒಂದು ಗೌರವ ಸಿಗುತ್ತದೆ ಎಂದು ತಿಳಿಸಿದರು.

ಅಸ್ಪೃಶ್ಯತಾ ಪ್ರತಿಬಂದಕ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾದಂತಹ ಸಂದರ್ಭದಲ್ಲಿ 6 ತಿಂಗಳು ಅಥವಾ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆಗೆ ಗುರಿಯಾಗುವಂತಹ ಸಂದರ್ಭ ಇರುತ್ತದೆ ಆದರಿಂದ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಡಾ.ರಾಜಕುಮಾರ್ ಮಾತನಾಡಿ ಅಂಬೇಡ್ಕರ್ ಜನಿಸದೆ ಹೋಗದಿದ್ದರೆ ಯಾರು ವಿದ್ಯಾಭ್ಯಾಸವನ್ನು ಮಾಡಲು ಆಗುತ್ತಿರಲಿಲ್ಲ ಅಂಬೇಡ್ಕರ್ ಒಂದೇ ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಕ್ಕೂ ಮಹಾನ್ ನಾಯಕರಾಗಿದ್ದಾರೆ, ಮಹಿಳೆಯರಿಗೆ ಎಲ್ಲಾ ಬಗೆಯ ಹಕ್ಕುಗಳು ಸಿಗಲು ಕಾರಣವೆಂದರೆ ಡಾ. ಬಿ.ಆರ್.ಅಂಬೇಡ್ಕರ್ ತಂದ ಸಂವಿಧಾನ ಎಂದು ಹೇಳಬಹುದು. ಯಾವುದೇ ಒಂದು ಧರ್ಮ ಒಬ್ಬ ವ್ಯಕ್ತಿಯ ಕಷ್ಟವನ್ನು ಕೇಳದ ಸ್ಥಿತಿಯಲ್ಲಿ ಇದ್ದರೆ ಅಥವಾ ಕಣ್ಣೀರನ್ನು ಒರಿಸಲು ಅವಕಾಶ ಮಾಡಿಕೊಡದಿದ್ದರೆ ಅದು ಧರ್ಮವೇ ಅಲ್ಲ ಅಂತಹ ಧರ್ಮಕ್ಕೆ ಯಾರು ಬೆಲೆ ಕೊಡಬಾರದು ಎಂದು ತಿಳಿಸಿದರು.

ಜಾತಿ ವ್ಯವಸ್ಥೆಯು ನಮ್ಮ ದೇಶದಲ್ಲಿ ಹೆಮ್ಮರವಾಗಿ ಬೆಳೆದಿರುವುದರಿಂದ ನಮ್ಮ ದೇಶ ಹಿಂದುಳಿಯಲು ಕಾರಣವಾಗಿದೆ. ಹಾಗೂ ನಾವೆಲ್ಲರೂ ಸಮಾನರು ಎಂಬ ಭಾವನೆ ಯಾವಾಗ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುತ್ತಾರೆ ಆಗ ಮಾತ್ರ ಜಾತಿ ವ್ಯವಸ್ಥೆ ದೂರವಾಗಿ ದೇಶ ಅಭಿವೃದ್ಧಿ ಆಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗ್ರೇಡ್-1 ದೇವಲನಾಯ್ಕ್ ಮಾತನಾಡಿ
ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಜಾತಿ ಧರ್ಮ ಜನಾಂಗ ಎನ್ನದೆ ಎಲ್ಲರ ಜೊತೆಗೂಡಿ ಗೆಳೆತನವನ್ನು ಬೆಳೆಸಬೇಕು ಹಾಗೂ ತಮ್ಮ ಗುರಿಯ ಕಡೆ ಗಮನವನ್ನು ಹರಿಸಿದ್ದೆ ಆದರೆ ಸಮಾಜದಲ್ಲಿ ಯಾವುದೇ ತರಹದ ಜಾತಿನಿಂದನೆಯನ್ನಾ ತಪ್ಪಿಸಬಹುದು ಹಾಗೂ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ತಂದೆ ತಾಯಿಗಳಿಗೆ ಹೆಸರನ್ನು ತರುವಂತಹ ಪ್ರಜೆಯಾಗಬೇಕು ಎಂದು ತಿಳಿಸಿದರು.

ಈ ಒಂದು ಸಂದರ್ಭದಲ್ಲಿ ಹೆಚ್.ಪಿ.ಪಿ.ಸಿ ಕಾಲೇಜು ಪ್ರಾಧ್ಯಾಪಕರಾದ ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಅಭಿಷೇಕ್, ನಗರಸಭೆಯ ನಾಮ ನಿರ್ದೇಶನ ಸದಸ್ಯ ವೀರಭದ್ರ, ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದ್.ಡಿ. ಖಜಾಂಚಿ ಪ್ರದೀಪ್, ಸದಸ್ಯರಾದ ದರ್ಶನ್, ದ್ಯಾಮಕುಮಾರ್ ,ಲಕ್ಷ್ಮಿಪತಿ ಪ್ರವೀಣ್ ಹಾಗೂ ವಿದ್ಯಾಥಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading