ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಳುಗಳು ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಹೇಳಿದರು.

ಅವರು ಪಟ್ಟಣದಲ್ಲಿ ಸಾಲಿಗ್ರಾಮ ಕ್ರಿಕೆಟ್ ಬಾಯ್ಸ್ ಆಯೋಜಿಸಿದ್ದ ಐಪಿಎಲ್ ಮಾದರಿಯ ಸಾಲಿಗ್ರಾಮ ಪ್ರೀಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ವಿಜೇತರಾದವರು ಅದಕ್ಕೆ ಹಿಗ್ಗದೆ, ಸೋತವರು ಕುಗ್ಗದೆ ಪರಸ್ಪರ ದ್ವೇಷ ಭಾವನೆಯನ್ನು ಬಿಟ್ಟು ಎಲ್ಲರೊಂದಿಗೂ ಸಹೋದರ ಭಾವನೆಯಿಂದ ನಡೆದುಕೊಳ್ಳಬೇಕು ಎಂದರು. ಜಯಸಾಧಿಸಿದವರು ಮುಂದಿನ ಹಂತಗಳಲ್ಲಿ ಜಯಭೇರಿ ಬಾರಿಸಲು ತಯಾರಿ ನಡೆಸಿದರೆ, ಸೋಲುಂಡವರು ತಮ್ಮ ಆಟದಲ್ಲಿ ಆಗಿರುವ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಜಯದ ನಗೆ ಬೀರಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕೆಲಸವು ನಿರಂತರವಾಗಿ ಆಗಬೇಕು. ಆ ಮೂಲಕ ಸ್ಥಳೀಯ ಪ್ರತಿಭೆಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು ಎಂದರು.
ಇಂತಹ ಸ್ಪರ್ಧೆಗಳನ್ನು ಆಯೋಜನೆ ಮಾಡುವ ಯುವ ಸಮೂಹಕ್ಕೆ ಸ್ಥಳೀಯ ಮುಖಂಡರುಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಸರ್ವರು ಸಹಕಾರ ನೀಡಬೇಕು ಎಂದು ಕರೆ ನೀಡಿದ ವಿಜಯ್ ಅವರು ಇಂತಹ ಕಾರ್ಯಕ್ರಮಗಳಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಜಿಲ್ಲಾ ಪತ್ರ ಬರಹಗಾರ ಮಿರ್ಲೆರಾಜೀವ್, ಕ್ರೀಡಾಳುಗಳಾದ ಯೋಗ, ರಾಜೇಶ್, ಚೇತನ್, ರಕ್ಷಿತ್, ಸುನಿಲ್, ರಾಘು, ನವೀನ್, ಗುರು, ಸಂದೀಪ, ವಿವೇಕ, ರಾಕಿ, ಅಭಿ, ಪುರುಷೋತ್ತಮ, ಮನೋಜ್, ಮುಜಾಮಿಲ್, ಮಂಜು, ಲಕ್ಕನ್, ರೋಹಿತ್, ಡೈರಿ ಸಂದೀಪ್, ನಾಗೇಶ್, ಕಿರಣ್, ಸಚಿನ್, ಗಿರೀಶ್ ಬಾಂಡ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.