
ಹಿರಿಯೂರು:
ತಾಲ್ಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಗುರುವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ರೈತರ ತೋಟಗಳಿಗೆ ಬೆಂಕಿ ತಗುಲಿದ ಪರಿಣಾಮ ತೆಂಗಿನಮರಗಳು, ಬೆಲೆಬಾಳುವ ತೇಗ, ಶ್ರೀಗಂಧ, ಬೇವು ಇತರೆ ಮರಗಳು, ಮಾವಿನತೋಟ ಸೇರಿದಂತೆ ಹನಿನೀರಾವರಿ ಉಪಕರಣಗಳು, ದಾಳಿಂಬೆ ತೋಟ ಸೇರಿದಂತೆ ಇತರೆ ಕೃಷಿ ಉಪಕರಣಗಳೆಲ್ಲವೂ ಬೆಂಕಿಗೆ ಅಹುತಿಯಾಗಿರುವ ಘಟನೆ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.
ಬೆಂಕಿ ತಗುಲಿದ ಪರಿಣಾಮ ಹರಿಯಬ್ಬೆ ಗ್ರಾಮದ ರೈತ ಗುಂಡೇಗೌಡರ 11ಎಕರೆ ಜಮೀನಿನಲ್ಲಿನ ಫಸಲು ಬಿಡುತ್ತಿದ್ದ 30 ತೆಂಗಿನ ಮರಗಳು, 200 ಶ್ರೀಗಂಧದ ಮರಗಳು, 60 ಮಾವಿನಮರಗಳು, 95 ತೇಗದ ಮರಗಳು, ಹನಿನೀರಾವರಿ ಉಪಕರಣಗಳು, ವಿದ್ಯುತ್ ಮೋಟಾರ್ ಪಂಪ್ ಸೆಟ್, ಪೈಪ್ ಲೈನ್ ಸೇರಿದಂತೆ ಸಂಪೂರ್ಣ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ ಎನ್ನಲಾಗಿದೆ.
ಶ್ರವಣಗೆರೆ ರೈತ ಗೋವಿಂದರೆಡ್ಡಿ ಅವರ ಜಮೀನಿನಲ್ಲಿನ ಫಸಲಿಗೆ ಬಂದಿದ್ದ 2500 ದಾಳಿಂಬೆ ಹಣ್ಣಿನ ಗಿಡಗಳು, ಹನಿ ನೀರಾವರಿ ಉಪಕರಣಗಳು, ವಿದ್ಯುತ್ ಮೋಟಾರ್ ಪಂಪ್ ಸೆಟ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಆರಂಭದಲ್ಲಿ ರೈತ ಗೋವಿಂದರೆಡ್ಡಿ ಅವರ ದಾಳಿಂಬೆ ತೋಟದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ವಿದ್ಯುತ್ ಪರಿವರ್ತಕ ಸಿಡಿದು ಬೆಂಕಿ ಇಡೀ ಆವರಿಸಿದೆ. ಬೆಂಕಿ ಇಡೀ ದಾಳಿಂಬೆತೋಟವನ್ನು ಆಪೋಶನ ತೆಗೆದುಕೊಂಡ ನಂತರ ದಾಳಿಂಬೆ ತೋಟದ ಪಕ್ಕದ ಜಮೀನಿನಲ್ಲೇ ಇದ್ದ ಗುಂಡೇಗೌಡರ ತೆಂಗು, ಮಾವು, ಶ್ರೀಗಂಧ, ತೇಗ ಮರಗಳಿದ್ದ ತೋಟಕ್ಕೂ ಆವರಿಸಿ ಇಡೀ ತೋಟವನ್ನು ಭಸ್ಮ ಮಾಡಿದೆ.


ಬೆಂಕಿ ತಗುಲಿದ ಸುದ್ಧಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ರೈತರು ಸಾಕಷ್ಟು ಪ್ರಯತ್ನ ಮಾಡಿದರೂ ಆ ವೇಳೆಗಾಗಲ ಬೆಂಕಿಯ ಕೆನ್ನಾಲಿಗೆ ಇಡೀ ತೋಟವನ್ನು ಭಸ್ಮ ಮಾಡಿದೆ.ಇದಾದ ನಂತರ ಹಿರಿಯೂರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತಡವಾಗಿ ಆಗಮಿಸಿದ್ದು, ರೈತರ ತೋಟಗಳಲ್ಲಿನ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯಿವಾಗಿಲ್ಲ.
ಕಂದಾಯ, ಬೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರದಿಂದ ತುಂಬಿಸಿಕೊಡಬೇಕು ಎಂಬುದಾಗಿ ಸಂತ್ರಸ್ತ ರೈತರ ಪರವಾಗಿ ಹರಿಯಬ್ಬೆ, ಶ್ರವಣಗೆರೆ ರೈತರು ಒತ್ತಾಯಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.