ಚಳ್ಳಕೆರೆ-28 ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರಿಗೆ ಕೆಲವೊಂದು ಖಾಸಗಿ ಗೊಬ್ಬರದ ಅಂಗಡಿ ಮಾಲೀಕರು ಬಲವಂತವಾಗಿ ಹೊಸ ತಳಿಗಳ ಬೀಜಗಳನ್ನು ವಿತರಿಸಿ ಹೆಚ್ಚು ಬೆಳೆ ಬೆಳೆಯುತ್ತೀರಿ, ಲಾಭಗಳಿಸುತ್ತೀರಿ ಎಂದು ಭರವಸೆ ನೀಡಿ ಕಳಿಸುತ್ತಾರೆ. ಆದರೆ, ಬಿತ್ತನೆ ಮಾಡಿದ ರೈತ ನಿರೀಕ್ಷಿತ ಅವಧಿಯಲ್ಲಿ ಬೆಳೆಬಾರದೆ ಕಂಗಲಾಗಿ ಬೀಜ ವಿತರಕರ ಮೇಲೆ ಬೇಸರ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ತಾಲ್ಲೂಕಿನ ಗಂಜಿಗುಟ್ಟೆ ಗ್ರಾಮದ ರೈತ ಆರ್.ಬೀರಲಿಂಗಪ್ಪ ಎಂಬುವವರು ರಿ.ಸರ್ವೆ ನಂ, 74/05ರ ತಮ್ಮ ಎರಡು ಎಕರೆ ಜಮೀನಿಗೆ ನಗರದ ಖಾಸಗಿ ಗೊಬ್ಬರದ ಅಂಗಡಿಯಿಂದ ಸೆಪ್ಟಂಬರ್ ತಿಂಗಳಲ್ಲಿ ಪ್ರಸಿದ್ದಿ-ಕೆಎಸ್ಪಿ-117 ಈರುಳ್ಳಿ ಬೀಜವನ್ನು ತಂದು ಬಿತ್ತನೆ ಮಾಡಿದ್ದರು. ವಿನಾಯಕ ಗೊಬ್ಬರ ಅಂಗಡಿಯಲ್ಲಿ ಬೀಜ ಖರೀದಿಸುವಾಗ ಅಂಗಡಿ ಮಾಲೀಕರು ನಾಲ್ಕು ತಿಂಗಳಲ್ಲಿ ಉತ್ತಮ ಈರುಳ್ಳಿ ಬೆಳೆ ಆಗಲಿದ್ದು ಹೆಚ್ಚು ಲಾಭಗಳಿಸಬಹುದು ಎಂದು ಹೇಳಿದ್ದರು. ಆದರೆ, ರೈತರು ಆರ್.ಬೀರಲಿಂಗಪ್ಪ ಬೀಜ ಬಿತ್ತನೆ ಮಾಡಿ ಐದು ತಿಂಗಳಾದರೂ ಈರುಳ್ಳಿ ಬೆಳೆ ಮಾತ್ರ ಮೇಲ್ಭಾಗದಲ್ಲಿ ಹುಲುಸಾಗಿ ಬೆಳೆದಿದ್ದು, ಕೆಳಭಾಗದಲ್ಲಿ ಮಾತ್ರ ಈರುಳ್ಳಿ ಗಡ್ಡೆ ಕಟ್ಟಿಲ್ಲ. ಸಣ್ಣ ಪ್ರಮಾಣದಲ್ಲಿ ಅಲ್ಲಲ್ಲಿ ಗಡ್ಡೆಕಾಣಿಸಿದ್ದು, ನಿಗದಿತ ಅವಧಿ ಮೀರಿದ್ದರೂ ಇನ್ನೂ ಈರುಳ್ಳಿ ಬೆಳೆ ಮಾತ್ರ ಆಗಲಿಲ್ಲ. ಈ ಬಗ್ಗೆ ಮನನೊಂದು ರೈತ ಪತ್ರಿಕೆಗೆ ಮಾಹಿತಿ ನೀಡಿ ಎರಡು ಎಕರೆಗೆ ಬಿತ್ತನೆ ಮಾಡಲು ಎರಡು ಪಾಕೇಟ್ ಬೀಜ 5600 ಎರಡು ಪಾಕೇಟ್ ಖರೀದಿಸಿದ್ದೆ. ಕ್ರಿಮಿನಾಶಕ, ಇತರೆ ವೆಚ್ಚದ ಸೇರಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಈರುಳ್ಳಿ ಬೆಳೆಗೆ ಸಾಲ ಮಾಡಿದ್ದು ಸಾಲಕೊಟ್ಟವರು ಮರುಪಾವತಿಸುವಂತೆ ಒತ್ತಾಯಿಸುತ್ತಿದ್ಧಾರೆ. ಅಧಿಕಾರಿಗಳು ಈ ಬಗ್ಗೆ ಮಧ್ಯೆ ಪ್ರವೇಶಿಸಿ ಬೀಜ ವಿತರಿಸಿದ ಅಂಗಡಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ಧಾರೆ.





About The Author
Discover more from JANADHWANI NEWS
Subscribe to get the latest posts sent to your email.