ಚಿತ್ರದುರ್ಗ ನ.27:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಹಿತಾಸಕ್ತಿಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗೆ ರೋಗಿಯ ಸಂಬಂಧಿಕರು ಸಂದರ್ಶನ ಅವಧಿಯಲ್ಲಿ ಮಾತ್ರ ಭೇಟಿ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ.ರವೀಂದ್ರ ಮನವಿ ಮಾಡಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದ 7.30 ಗಂಟೆಯವರೆಗೆ, ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಆಸ್ಪತ್ರೆಯಲ್ಲಿ ಸಂದರ್ಶನದ ಅವಧಿಯನ್ನು ನಿಗಧಿಪಡಿಸಲಾಗಿದೆ.
ರೋಗಿಗಳು ಆಸ್ಪತ್ರೆಗೆ ಬರುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ್ಗಳ ನಕಲು ಪ್ರತಿಗಳನ್ನು ತರುಬೇಕು ಹಾಗೂ ಒಳ ರೋಗಿಗಳಾಗಿ ದಾಖಲಾಗುವ ಸಂದರ್ಭದಲ್ಲಿ ತಪ್ಪದೇ ಎ.ಬಿ-ಎ.ಆರ್.ಕೆ ಕೊಠಡಿಯಲ್ಲಿ ಎಂಟ್ರಿ ಮಾಡಿಸಬೇಕು. ಎ.ಬಿ-ಎ.ಆರ್.ಕೆ ಅಡಿಯಲ್ಲಿ ನೋಂದಣಿಯಾದ ಅರ್ಹ ಫಲಾನುಭವಿಗಳಿಗೆ ಎಲ್ಲಾ ರಕ್ತ ಪರೀಕ್ಷೆಗಳು, ಸಿ.ಟಿ. ಸ್ಕ್ಯಾನ್, ಎಕ್ಸ್-ರೇ, ಸ್ಕ್ಯಾನಿಂಗ್, ಆರ್ಥೋ ಇಂಪ್ಲಾಂಟ್ಗಳು, ಔಷಧಿಗಳು ಮತ್ತು ಮಾತ್ರೆಗಳು ಉಚಿತವಾಗಿ ನೀಡಲಾಗುತ್ತದೆ. ಎ.ಬಿ-ಎ.ಆರ್.ಕೆ ಅಡಿಯಲ್ಲಿ ನೋಂದಣಿಯಾಗದ ರೋಗಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಕಡ್ಡಾಯವಾಗಿ ರಸೀದಿಯನ್ನು ಕೇಳಿ ಪಡೆಯಬೇಕು.
ರೋಗಿಗಳು ಇತ್ತೀಚಿನ ದಿನಗಳಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ, ನಂತರ ಬಂದು ರೆಫರಲ್ಗಾಗಿ ಇಲ್ಲಿನ ವೈದ್ಯಾಧಿಕಾರಿಗಳಿಗೆ ಒತ್ತಡವನ್ನು ಹಾಕುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಈ ರೀತಿ ಮಾಡದೇ, ಮೊದಲು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಮಾತ್ರ ಎ.ಬಿ-ಎ.ಆರ್.ಕೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಮಾಡಿ ಕೊಡಲಾಗುವುದು.
ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬಾರದು. ಆಸ್ಪತ್ರೆಯ ಯಾವುದೇ ವೈದ್ಯರು, ಸಿಬ್ಬಂದಿ ಹಣ ಕೇಳಿದಲ್ಲಿ ಹಾಗೂ ಯಾವುದೇ ದೂರುಗಳು ಇದ್ದಲ್ಲಿ ಮೊಬೈಲ್ ಸಂಖ್ಯೆ 9448943163 ಕ್ಕೆ ಕರೆ ಮಾಡಿ ಗಮನಕ್ಕೆ ತರುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==========
About The Author
Discover more from JANADHWANI NEWS
Subscribe to get the latest posts sent to your email.