ಚಿತ್ರದುರ್ಗ ಸೆ.25:
ಜಾಗತೀಕರಣದಲ್ಲಿ ಒಬ್ಬ ವ್ಯಕ್ತಿ ಉತ್ತಮ ಯಶಸ್ವಿ ಉದ್ಯಮಿಯಾಗಲೂ ಸ್ವಂತ ಜ್ಞಾನ ಹಾಗೂ ಆಲೋಚನಾ ಕ್ರಮ ತುಂಬಾ ಸಹಕಾರಿ ಎಂದು ಚಿತ್ರದುರ್ಗ ಎಸ್.ಜೆ.ಎಂ.ಐ.ಟಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಪಿ.ಬಿ. ಭರತ್ ಹೇಳಿದರು.
ನಗರದ ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಹಾಗೂ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವಟೈಸಿಂಗ್ ಲಿಮಿಟೆಡ್ ಹಾಗೂ ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಇನ್ಕ್ಯೂಬೇಷನ್ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅದು ಕೇವಲ ಒಂದು ನೌಕರಿ ಅಥವಾ ಕೆಲಸ ಕಾರ್ಯವಾಗಿರುತ್ತದೆ. ಆದರೆ ಉದ್ಯಮ ನಡೆಸುವಾತ, ಒಬ್ಬ ಶ್ರೇಷ್ಠ ಉದ್ಯಮಿಗಾರ ಉದ್ಯೋಗ ಸೃಷ್ಠಿಸಿ ಸಾವಿರಾರು ಕಟುಂಬಗಳಿಗೆ ಉದ್ಯೋಗ ಕಲ್ಪಿಸಿಕೊಡುತ್ತಾನೆ. ಇಂದಿನ ವಿದ್ಯಾರ್ಥಿಗಳು ತಮ್ಮ ಸ್ವಂತ ಜ್ಞಾನ ಹಾಗೂ ಆಲೋಚನೆ ಕ್ರಮ ಬಳಸಿ ಅತ್ಯುತ್ತಮ ಉದ್ಯಮಿಯಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ್ ಮಾತನಾಡಿ, ಕರ್ನಾಟಕದಲ್ಲಿ ಪ್ರತಿ ವರ್ಷ ಪದವಿ ಮುಗಿಸಿದ 10 ಲಕ್ಷ ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದಾರೆ. 1990ನೇ ಇಸವಿ ಹಿಂದೆ ಸರ್ಕಾರಿ ನೌಕರಿಗಳು ಅಭ್ಯರ್ಥಿಗಳು ಪಡೆದ ಮಾರ್ಕ್ಗಳ ಆಧಾರದ ಮೇಲೆ ನಿರ್ಧರಿತವಾಗುತ್ತಿದ್ದವು, ಬದಲಾಗಿ ಪ್ರಸ್ತುತ ಸಾಮಾನ್ಯ ಪ್ರವೇಶ ಪರೀಕ್ಷೆ ಅಥವಾ ಇಲಾಖೆ ನಡೆಸುವ ಪರೀಕ್ಷೆ ಪಾಸ್ ಮಾಡಿದರೂ ಕೂಡ ಸಂದರ್ಶನದಲ್ಲಿ ವಿಫಲವಾಗುತ್ತಿದ್ದಾರೆ ಹಾಗಾಗಿ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟ ಸಾಧ್ಯ, ಸಾಮಾಜಿಕ ಕಳಕಳಿ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯು, ಸರ್ಕಾರಿ ಕೆಲಸವೇ ಅಂತಿಮ ಎಂದು ಭಾವಿಸದೇ, ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡಲು ಮುಕ್ತ ಅವಕಾಶಗಳು ಪ್ರಸ್ತುತ ಸಮಾಜದಲ್ಲಿವೆ. ಆಧುನಿಕ ದಿನಮಾನಗಳಲ್ಲಿ ಸಮಯ ಪರಿಪಾಲನೆ ತುಂಬಾ ಅಗತ್ಯತೆ ಹೊಂದಿದೆ. ಇತ್ತೀಚಿನ ದಿನಮಾನಗಳಲ್ಲಿ ಸ್ವಂತ ಉದ್ಯಮ ನಡೆಸಲು ಇಚ್ಚಿಸುವವರಿಗೆ ಸರ್ಕಾರÀ ಹಾಗೂ ಸಂಘ ಸಂಸ್ಥೆಗಳಿಂದ ಸಾಲ ಸೌಲಭ್ಯ ಮತ್ತು ಸಹಾಯಧನಗಳು ಸುಲಭ ಹಾಗೂ ತ್ವರಿತವಾಗಿ ಕೈಗೆಟುಕುತ್ತಿವೆ. ಇವೆಲ್ಲವನ್ನು ಉದ್ಯಮಿಗಳಾಗ ಬಯಸುವವರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಚಿತ್ರದುರ್ಗ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿ ಜೀವನದ ಸಮಯ ಸದ್ಭಳಕೆ ಮಾಡಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿ ಹಣ ಉಳಿಸುವ ಜೊತೆಗೆ ಖಾತೆ ಚಾಲ್ತಿಯಲ್ಲಿರಿಸುವುದು, ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಬಡ ವರ್ಗದವರಿಗೆ ಪ್ರಧಾನ ಮಂತ್ರಿ ಜನ್ಧನ್ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮ ಯೋಜನೆಯಡಿ ವಾರ್ಷಿಕವಾಗಿ ರೂ. 436 ಹಾಗೂ ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಯಡಿ ವಾರ್ಷಿಕವಾಗಿ ರೂ.20 ಪಾವತಿಸುವ ಮೂಲಕ ಆಕಸ್ಮಿಕ ಹಾಗೂ ನೈಸರ್ಗಿಕ ಸಾವು ಸಂಭವಿಸಿದಲ್ಲಿ ವಿಮೆಯನ್ನು ಕುಟುಂಬದ ಸದಸ್ಯರು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಹೊಸದಾಗಿ ಕೈಗಾರಿಕರಣ ಉದ್ಯಮ ಆರಂಭಿಸುವವರಿಗೆ ಮುದ್ರಾ ಯೋಜನೆಯಡಿ ಪರಿಪಕ್ವ ದಾಖಲೆ ಸಹಿತ 10 ಲಕ್ಷಗಳವರೆಗೆ ಸಾಲ ಸೌಲಭ್ಯಗಳನ್ನು ಒದಗಿಸಬಹುದು ಎಂದು ತಿಳಿಸಿದ ಅವರು, ಪಿಎಂ ಸ್ವನಿಧಿ ಯೋಜನೆಯಡಿ ಕುಶಲಕರ್ಮಿಗಳಿಗೆ ಹಲವಾರು ಯೋಜನೆಗೆ ಸಾಲ-ಸೌಲಭ್ಯ ಹಾಗೂ ಸಹಾಯಧನ ಸಿಗುತ್ತಿದೆ ಎಂದರು.
ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಸ್.ವಿ. ರವಿಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಓದುವ ಹಂತದಲ್ಲೆ ಉತ್ತಮ ಗುರಿ ಮತ್ತು ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ಸಾಗಬೇಕು. ಗುರಿ-ಉದ್ದೇಶಗಳೊಂದಿಗೆ ಹಂತವಾಗಿ ಸಾಗಿ ಸಾಧನೆಯ ದಡಮುಟ್ಟಬೇಕು. ಯಾವೊಬ್ಬ ಉದ್ಯಮಿಯು ಆರಂಭದಲ್ಲೆ ದೊಡ್ಡ ಉದ್ಯಮಿಯಾಗಿ ಹೊರಹೊಮ್ಮಿದ ಉದಾಹರಣೆಗಳಿಲ್ಲ. ಬದಲಾಗಿ ಗುರಿ, ಉದ್ದೇಶ, ಶ್ರಮ, ನಿರಂತರ ಪ್ರಯತ್ನದಿಂದ ಮಾತ್ರ ಒಂದು ಕೆಲಸ ಯಶಸ್ವಿಯಾಗಿ ಕೈಗೂಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ. ಮಂಜುನಾಥಸ್ವಾಮಿ, ಕೆ.ಎಸ್.ಎಂ.ಸಿ.ಎ ಮ್ಯಾನೇಜರ್ ಆರ್. ಮಾರುತಿ, ಉದ್ಯಮಿ ನಾಗರಾಜ್, ಇವೇಂಟ್ ಪ್ರೋಗ್ರಾಮರ್ ಪ್ರವೀಣ್, ಎಸ್.ಜೆ.ಎಂ ಕಾಲೇಜಿನ ಪ್ರಾಧ್ಯಾಪಕಿ ಸವಿತಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಎಸ್.ಜೆ.ಎಂ ಪಾಲಿಟೆಕ್ನಿಕ್ ಸಿಬ್ಬಂದಿ ವರ್ಗದವರು ಇದ್ದರು.

About The Author
Discover more from JANADHWANI NEWS
Subscribe to get the latest posts sent to your email.