
ಚಳ್ಳಕೆರೆ:
ಕರಡಿ ದಾಳಿಯಿಂದ ಮೃತಪಟ್ಟ ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಮದ ಓಂಕಾರಪ್ಪ ಅವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲು ಇಲಾಖೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸುರೇಶ್ ಹೇಳಿದರು.
ಚಳ್ಳಕೆರೆ ನಗರದ ಹೊರವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಮೃತ ಓಂಕಾರಪ್ಪ ಅವರ ಪತ್ನಿ ಅನುಸೂಯಮ್ಮ ಅವರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಮಾತನಾಡಿದರು.
ಮೃತರ ಕುಟುಂಬಕ್ಕೆ ಈಗಾಗಲೇ ಕಾಳಿ ಹುಲಿ ಸಂರಕ್ಷಿತ ಪ್ರತಿಷ್ಠಾನ ನಿಧಿಯಿಂದ ೫ ಲಕ್ಷ ಪರಿಹಾರ ನೀಡಲಾಗಿದೆ. ನಂತರ ಇಲಾಖೆ ಕ್ರಮದಂತೆ 10 ಲಕ್ಷ ನೀಡಲಾಗುತ್ತಿದೆ. ಒಟ್ಟು ಮೃತರ ಕುಟುಂಬದ ಆರ್ಥಿಕ ಭದ್ರತೆಗೆ ೧೫ ಲಕ್ಷ ಪರಿಹಾರ ಸಿಗಲಿದೆ ಎಂದ ಅವರು, ಕಾಯ್ದಿರಿಸಿದ ಅರಣ್ಯ ಪ್ರದೇಶ ಪ್ರವೇಶ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಇರಬೇಕು. ಕಾಡು ಪ್ರಾಣಿಗಳು ವಾಸಸ್ಥಾನವಾಗಿರುವ ಅರಣ್ಯ ಪ್ರವೇಶ ಮಾಡಿದಾಗ ಸಹಜವಾಗಿ ದಾಳಿ ಮಾಡುತ್ತವೆ. ಇಂತಹ ಘಟನೆಗಳ ನಿಯಂತ್ರಣಕ್ಕೆ ಇಲಾಖೆ ಸಾಕಷ್ಟು ಕಾಯಿದೆ ಮತ್ತು ನಿಯಂತ್ರಣ ಕ್ರಮ ಕೈಗೊಂಡಿರುತ್ತೇವೆ. ನಿಯಮಗಳನ್ನು ಪಾಲನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾಥಕ್ಕಾಗಿ ಅರಣ್ಯ ಪ್ರದೇಶ ನಾಶ ಮಾಡಲಾಗುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ಊರುಗಳಿಗೆ ಲಗ್ಗೆ ಇಡುತ್ತಿವೆ. ಆಗ ಮನುಷ್ಯರು ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಡುತ್ತವೆ. ದೊಡ್ಡ ಪ್ರಮಾಣದಲ್ಲಿ ಪ್ರಾಣ ಹಾನಿ ನಡೆಯುತ್ತವೆ ಎಂದು ಹೇಳಿದರು.
ತಾಲೂಕಿನಲ್ಲಿ 2020-21ನೇ ಸಾಲಿನಿಂದ ಇದುವರೆಗೂ ಕಾಡು ಪ್ರಾಣಿಗಳಿಂದ ನಡೆದಿರುವ 29 ಪ್ರಕರಣಗಳಲ್ಲಿ ಈಗಾಗಲೇ ಫಲಾನುಭವಿಗಳಿಗೆ 19.28 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಸರ್ಕಾರದ ಸೌಲಭ್ಯವನ್ನು ಫಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕು. ಕುಟುಂಬದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಹಸಿರೀಕರಣ, ಬರಗಾಲ ನಿವಾರಣೆ ಮತ್ತು ಕಾಡು ಪ್ರಾಣಿಗಳ ಸಂತತಿ ಪೋಷಣೆಗೆ ಬೆಳೆಸುತ್ತಿರುವ ಅರಣ್ಯ ಪ್ರದೇಶದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಕಾಡು ರಕ್ಷಣೆ ಮಾಡುವ ಜಾಗೃತಿ ಪ್ರತಿಯೊಬ್ಬರ ಜವಾಬ್ದಾರಿ ಎನ್ನುವ ಮನೋಭಾವನೆ ಇರಬೇಕು ಎಂದು ಹೇಳಿದರು.
ತಾಲೂಕು ವಲಯ ಅರಣ್ಯಾಧಿಕಾರಿ ಎಸ್.ವಿ. ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿ ವಿ.ವಸಂತಕುಮಾರ್, ಅರಣ್ಯ ಪಾಲಕ ಕೆ. ಇಮಾಮ್ ಹುಸೇನ್, ಮಹಾಂತೇಶ್, ಲಕ್ಷಕ್ಷ್ಮಣ್, ಒ. ಬಾಬು ಮತ್ತಿತರರು ಇತರರಿದ್ದರು
About The Author
Discover more from JANADHWANI NEWS
Subscribe to get the latest posts sent to your email.