ಹಿರಿಯೂರು:
ಶರಾವತಿ ಮುಳುಗಡೆ ಸಂತ್ರಸ್ತರಿಗೆ, ಬಾಗಲಕೋಟೆ ಮುಳುಗಡೆ ಸಂತ್ರಸ್ತರಿಗೆ, ಕೃಷ್ಣ ನದಿ ನೀರು ಸಂತ್ರಸ್ತರಿಗೆ ಹೊಸದಾಗಿ ವಸತಿ ಮತ್ತು ಜಮೀನು ಕೊಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದು ಸರಿ ಅಷ್ಟೇ ಅದರಂತೆ ತಾವುಗಳು ಸಹ ವಾಣಿವಿಲಾಸಸಾಗರ ಹಿನ್ನೀರಿನ ಮುಳುಗಡೆ ಸಹೋದರ ರೈತ ಬಂಧುಗಳಿಗೆ ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡುತ್ತೇವೆ ಎಂಬುದಾಗಿ ವಾಣಿವಿಲಾಸಸಾಗರ ಅಚ್ಚುಕಟ್ಟುದಾರ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್24 ರಂದು ಸಭೆ ಸೇರಿದ್ದ ರೈತ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಲ್ಲದೆ, ಹೊಸದುರ್ಗ ಶಾಸಕರಾದ ಮಾನ್ಯ ಗೋವಿಂದಪ್ಪನವರೇ, ನೀವುಗಳು ಮತ್ತು ಶಿರಾ ಶಾಸಕರಾದ ಜಯಚಂದ್ರ ಅವರು ಸೇರಿ ಭದ್ರಾ ಮೇಲ್ದಂಡೆ ತುಮಕೂರು ಬ್ರಾಂಚ್ ಕೆನಾಲ್ ಮೂಲ ಯೋಜನೆಯಲ್ಲಿ ಹಿರಿಯೂರಿನ ಮೂಲಕ ಹೋಗುತ್ತಿದ್ದದ್ದನ್ನು ಬದಲಾಯಿಸಿ ನಿಮ್ಮ ಅನುಕೂಲಕ್ಕೆ ಹೊಸದುರ್ಗ, ಹುಳಿಯಾರ್, ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಶಿರಾ ತಾಲ್ಲೂಕಿಗೆ ಸುತ್ತಿ ಬಳಸಿ ಯೋಜನಾ ವೆಚ್ಚ ಜಾಸ್ತಿ ಮಾಡಿ ತೆಗೆದುಕೊಂಡು ಹೋಗಿ ಹಿರಿಯೂರು ತಾಲ್ಲೂಕಿಗೆ ಅನ್ಯಾಯ ಮಾಡಲಿಲ್ಲವೇ,
ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರಿಗಾಗಿ 543 ದಿನ ನಿರಂತರ ಹೋರಾಟ ಮಾಡಿದಾಗ ನೀವುಗಳಾಗಲಿ ಜಯಚಂದ್ರ ಆಗಲಿ ಒಮ್ಮೆಯೂ ಬಂದು ಬೆಂಬಲಿಸಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ 5ಟಿ.ಎಂ.ಸಿ ನೀರನ್ನು ಮಂಜೂರು ಮಾಡಿತ್ತು ನೀವುಗಳು ಅಧಿಕಾರಕ್ಕೆ ಬಂದು ಅದನ್ನು 2 ಟಿಎಂಸಿ ಗೆ ಇಳಿಸಿ, ಮೂರು ಟಿಎಂಸಿಯನ್ನು ಮಂಗ ಮಾಯ ಮಾಡಿದಿರಿ, ಆ ಸಂದರ್ಭದಲ್ಲಿ ಹಿರಿಯೂರಿನ ರೈತರು ಮತ್ತು ಸಹೋದರತ್ವ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ ?,…
ನೀವುಗಳು ಪದೇ ಪದೇ ವಾಣಿವಿಲಾಸಸಾಗರ ಜಲಾಶಯ ಹೊಸದುರ್ಗ ತಾಲೂಕಿನಲ್ಲಿದೆ ಎಂದು ಹೇಳುತ್ತೀರಿ ಅದೇ ರೀತಿ ತುಂಗಭದ್ರ ಜಲಾಶಯ ಕರ್ನಾಟಕದಲ್ಲಿ ಇದ್ದರೂ ಸಹ ಆಂಧ್ರ ಪ್ರದೇಶಕ್ಕೆ ನೀರು ಕೊಡುತ್ತಿಲ್ಲವೇ. ಇಡುಕ್ಕಿ ಡ್ಯಾಮ್ ಕೇರಳದಲ್ಲಿದೆ ತಮಿಳುನಾಡಿಗೆ ನೀರು ಉಣಿಸುತ್ತಿದೆ. ಕಾವೇರಿ ನೀರು ತಮಿಳುನಾಡಿಗೂ ಹರಿಯುತ್ತಿಲ್ಲವೇ. ಎಂದರಲ್ಲದೆ,
ಈ ಎಲ್ಲಾ ಕಡೆ ಬಂದಿರಲಾರದ ತಿಕ್ಕಾಟ ನಮ್ಮ ಒಂದೇ ಜಿಲ್ಲೆಯ ಸಹೋದರ ಬಂಧುಗಳಲ್ಲಿ ಯಾಕೆ ಬರಬೇಕು. ಡ್ಯಾಮ್ ನಿರ್ಮಾಣ ಮಾಡಿ 120 ವರ್ಷಗಳಲ್ಲಿ ಇಲ್ಲದ ಕೋಡಿ ತಗ್ಗಿಸುವ ಪ್ರಸ್ತಾವ ಮಾತು ಈಗ ಬರುತ್ತಿರುವುದು ವಿಪರ್ಯಾಸವೇ ಸರಿ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನ ನೀರು ಹೆಚ್ಚುವರಿಯಾದಾಗ ಕರ್ನಾಟಕದ ಕೃಷ್ಣಾ , ಭೀಮ ನದಿ ಪಾತ್ರದಲ್ಲಿ ಮುಳುಗಡೆಯಾಗುತ್ತದೆ.
ಹಾಗೆಂದು ಕೊಯ್ನಾ ಅಣೆಕಟ್ಟಿನ ಸಂಗ್ರಹಣ ಸಾಮರ್ಥ್ಯ ಕಡಿಮೆ ಮಾಡಿ ಎಂದು ಒತ್ತಾಯಿಸಲು ಬರುತ್ತದೆಯೇ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಮುಖ್ಯ ಇಂಜಿನಿಯರಾಗಿದ್ದ ಚೆಲುವರಾಜ್ ಅವರು ಈಗ ತಾಂತ್ರಿಕ ಸಲಹಾ ಸಮಿತಿ ಸದಸ್ಯರು. ಮೊನ್ನೆ ತಾನೆ ನಮ್ಮ ಇಲಾಖೆಯ ಮುಂದೆ ಕೋಡಿ ಇಳಿಸುವ ಯಾವುದೇ ಪ್ರಸ್ತಾವ ಇಲ್ಲ ಇದು ಸುಳ್ಳು ಎಂದು ಸ್ಪಷ್ಟೀಕರಣ ಕೊಟ್ಟಿದ್ದರು.
ಆದರೆ ಇಂದು ಅವರದೇ ತಾಲ್ಲೂಕಿನ ಹಿರಿಯರಾದ , ಸರಳ ಸಜ್ಜನ ರಾಜಕಾರಣಿ ಗೋವಿಂದಪ್ಪನವರು ಸತ್ಯವನ್ನೇ ಹೇಳಿದ್ದಾರೆ. ಹಾಗಾದರೆ ಸುಳ್ಳು ಹೇಳಿದ ಚೆಲುವರಾಜ್ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಬರಲಿ. ಅದು ಬಿಟ್ಟು ವಾಣಿವಿಲಾಸ ಸಾಗರದ ಬಗ್ಗೆ ಮಲತಾಯಿ ಧೋರಣೆ ಇಟ್ಟುಕೊಂಡು ಅಧಿಕಾರದಲ್ಲಿ ಇರಬಾರದು ಮುಂದಿನ ದಿನಗಳಲ್ಲಿ ನಿಮ್ಮಿಂದ ವಿವಿಸಾಗರಕ್ಕೆ ತೊಂದರೆಯಾಗಲಿದೆ ಎಂಬುದಾಗಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಯುವ ರೈತ ಸಂಘದ ಅಧ್ಯಕ್ಷ ಚೇತನ್ ಗೌಡ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿಕೃಷ್ಣಪ್ಪ, ನಿರ್ದೇಶಕರಾದ ಆರ್.ಕೆ. ಗೌಡ್ರು, ಮುಖಂಡರಾದ ಮಂಜುನಾಥ್ ಮಾಳಿಗೆ ,ಪಿಟ್ಲಾಲಿ ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.