
ಚಳ್ಳಕೆರೆ;
ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಶ್ರೀಕನ್ನೇಶ್ವರ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ಮಠದ ಶ್ರೀಸತ್ ಉಪಾಸಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಫೆ.25ರಂದು ಇಲ್ಲಿನ ಶ್ರೀದತ್ತಾತ್ರೇಯ, ಶ್ರೀಪಾದ ವಲ್ಲಭ, ನರಸಿಂಹ ಸರಸ್ವತಿ, ಕನ್ನೇಶ್ವರ, ತ್ರಿಪುರಾಂಭಿಕೆ ದೇವರುಗಳನ್ನು ಉತ್ಸವ ಮೂರ್ತಿಗಳೊಂದಿಗೆ ಹೊರವಲಯದ ಗರಣಿ ಹಳ್ಳಕ್ಕೆ ಗಂಗಾಪೂಜೆಗೆ ಕರೆದೊಯ್ಯಲಾಗುತ್ತದೆ. ಇಲ್ಲಿ ಕಂಬಳಿ ಗದ್ದುಗೆ ಹಾಕಿ ದೇವರುಗಳನ್ನು ಕೂರಿಸಿ, ದೇವರ ಒಡವೆಗಳನ್ನು ಶುದ್ಧೀಕರಣ ಮಾಡಿ ನಂತರ ವಿಶೇಷ ಗಂಗಾ ಪೂಜೆ ಮಾಡಿದ ಬಳಿಕ ಹಸಿ ತಂಬಿಟ್ಟಿನ ಎಡೆ ಹಾಕಿ, ಕಂಕಣಧಾರಣೆ ಮಾಡಿ ಪೂಜೆ ಮಾಡಲಾಗುತ್ತದೆ. ಸಂಜೆ ಹೊತ್ತಿಗೆ ಕನ್ನೇಶ್ವರ ಶ್ರೀಕ್ಷೇತ್ರಕ್ಕೆ ದೇವರುಗಳನ್ನ ಕರೆ ತರಲಾಗುವುದು. ಫೆ.26ರಂದು ಮಹಾಶಿವರಾತ್ರಿ ಅಂಗವಾಗಿ ಶ್ರೀಕನ್ನೇಶ್ವರನ ಭವ ಮಂಟಪಕ್ಕೆ ಕುಂಭಮೇಳ, ದಂಡಕಾರಿಗಳೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀಸತ್ ಉಪಾಸಿ ಮಲ್ಲಿಕಾರ್ಜುನ ಸ್ವಾಮೀಜಿಗಳನ್ನು ಕರೆದೊಯ್ಯಲಾಗುವುದು. ವಿಶೇಷ ಪೂಜೆ ಸಲ್ಲಿಸಿ ತ್ರಿಶೂಲ ಹಿಡಿದು ಸ್ವಾಮೀಜಿಗಳು ಶಿವನಾಟ್ಯ ಮಾಡುವರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ನಾಟಕ, ಭಜನೆ ಮತ್ತು ವಿಶೇಷವಾಗಿ ಶಿವನಿಗೆ ಮೂರು ಹೊತ್ತಲ್ಲಿ ಅಭಿಷೇಕ ನೆರವೇರಿಸಿ, ಮಹಾಮಂಗಳಾರತಿ ಮಾಡಲಾಗುವುದು.
ಫೆ27ರಂದು ನೂತನವಾಗಿ ನಿರ್ಮಾಣ ಮಾಡಿರುವ ಬ್ರಹ್ಮ ರಥೋತ್ಸವ ನಡೆಯಲಿದೆ. ರಥೋತ್ಸವದ ಪೂಜಾ ಕಾರ್ಯಕ್ರಮಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಡಿಆರ್ಡಿಒ ಅನುಮತಿ ಸೇರಿದಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಚಿತ್ರದುರ್ಗ ಸಮೀಪ ನಿಲುಗಡೆ ಆಗುವ ಹೆಲಿಕ್ಯಾಪ್ಟರ್ನಿಂದ ಎರಡು ಬಾರಿ ಬ್ರಹ್ಮ ರಥೋತ್ಸವದ ಮೇಲೆ ಪುಷ್ಪಾರ್ಚನೆ ನಡೆಯಲಿದೆ ಎಂದು ಮಠದ ಭಕ್ತ ಸಿ. ಚಿಕ್ಕಣ್ಣ ತಿಳಿಸಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಈಗಾಗಲೇ ಅಮೇರಿಕಾದಿಂದಲೂ ಶ್ರೀಕ್ಷೇತ್ರಕ್ಕೆ ನಡೆದುಕೊಳ್ಳುವ ಕುಟುಂಬಸ್ಥರು ಮಹಾಶಿವರಾತ್ರಿ ಆಚರಣೆಗೆ ಬಂದು ಮಠದಲ್ಲಿ ನೆಲೆಸಿದ್ದಾರೆ. ಸುಮಾರು 10 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ. ಭಕ್ತರಿಗೆ ಸಕಾಲಕ್ಕೆ ಊಟ, ತಿಂಡಿ, ವಸತಿ ಸೌಕರ್ಯ ಸೇರಿದಂತೆ ವಾಹನಗಳ ನಿಲುಗಡೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

About The Author
Discover more from JANADHWANI NEWS
Subscribe to get the latest posts sent to your email.