
ಹಿರಿಯೂರು :
ಸಮಾಜದಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ತಡೆಯುವುದು ನಮ್ಮ ಪೋಲೀಸರ ಮೊದಲ ಕರ್ತವ್ಯವಾಗಿರಬೇಕು, ಇದಕ್ಕೆ ಸಮಾಜದ ಎಲ್ಲ ಜನರು ಪೋಲೀಸರಿಗೆ ಸಹಕಾರ ನೀಡಬೇಕು, ಯಾವುದೇ ಅಪರಾಧಗಳಾಗಲಿ, ಅಪಘಾತಗಳಾಗಲಿ ಬಾಗಿದಾರರಿಗೆ ಘನಘೋರವಾಗಿದ್ದು, ಕೆಟ್ಟ ಅನುಭವಗಳನ್ನು ಉಂಟು ಮಾಡುತ್ತವೆ ಎಂಬುದಾಗಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಾದ ರಂಜಿತ್ ಕುಮಾರ್ ಭಂಡಾರು ಹೇಳಿದರು.
ನಗರದ ಗುರುಭವನದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಕ್ರೈಂ, ಮಾದಕ ವಸ್ತು, ಸಂಚಾರ ಸುರಕ್ಷತೆ, ಬಾಲ್ಯವಿವಾಹ, ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡೆ ಜಾಗೃತಿಯ ಕಡೆ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪ್ರೌಢ ವಯಸ್ಸಿನಲ್ಲಿ ಅಪರಾಧ ಚಟುವಟಿಕೆಗಳಿಂದ ದೂರವಿರಬೇಕು, ಪಾಶ್ಚಿಮಾತ್ಯ ಶೈಲಿಗೆ ಮಾರುಹೋಗಿ ಲೈಂಗಿಕ ದುರ್ಬಳಕೆ, ಸಹಜೀವನ ನಡೆಸುವುದು, ಗಾಂಜಾ, ಅಫೀಮು ಸೇವನೆ ಅಪರಾಧಕ್ಕೆ ಪ್ರೇರಣೆ ನೀಡುತ್ತವೆ, ಇದರಿಂದಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ,
ಯಾವುದೇ ಜೈಲುಗಳಲ್ಲಿ ಕೈದಿಗಳನ್ನು ಗಮನಿಸಿದರೆ 18 ರಿಂದ 21ರ ಯುವಕರೇ ಹೆಚ್ಚಾಗಿ ಕಾಣುತ್ತಿದ್ದು, ಕಾರಣಗಳ ಪರಿಶೀಲಿಸಿದರೆ ಪೋಷಕರ ಒತ್ತಾಯಕ್ಕೋ, ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲ್ಯವಿವಾಹ, ಲೈಂಗಿಕ ದುರ್ಬಳಕೆಗಳೇ ಹೆಚ್ಚಾಗಿರುವುದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಸಮ್ಮತವಿದ್ದರೂ ದೈಹಿಕ ಸಂಪರ್ಕ ಬೆಳೆಸಿದರೆ ಹತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದರು,
ಸಂಚಾರಿ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯಬೇಕು, ಅತಿವೇಗದ ಚಾಲನೆ ಮೊಬೈಲ್ ಬಳಕೆ ಮದ್ಯಪಾನ ಮಾಡಿ, ವಾಹನ ಚಾಲನೆ ಅಗತ್ಯಕ್ಕಿಂತ ಹೆಚ್ಚು ಜನರ ಪ್ರಯಾಣಗಳು, ಅಪಘಾತಗಳಿಗೆ ಮೂಲ ಕಾರಣ ಜಿಲ್ಲೆಯಲ್ಲಿ ತಿಂಗಳಿಗೆ 30 ರಿಂದ 40 ಜನ ಅಪಘಾತಗಳಿಂದ ಮರಣ ಹೊಂದುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ,
ಅಲ್ಲದೆ ಇತ್ತೀಚೆಗೆ ಸೈಬರ್ ಕ್ರೈಮ್ ವಂಚನೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರು ಎಚ್ಚರ ವಹಿಸಬೇಕು, ಅಧಿಕ ಬಡ್ಡಿ ಆಸೆಗೆ ಹಣ ಹೂಡಿಕೆ, ಹಣ ದ್ವಿಗುಣ, ಉದ್ಯೋಗಾವಕಾಶ ನಂಬಿ ಮೋಸ ಹೋಗದಿರಿ, ಯುವಜನತೆ ವಿದ್ಯಾರ್ಥಿಗಳಿಗೆ ಅಪರಾಧ ಪ್ರಕರಣ ಪ್ರಕರಣಗಳ ಬಗ್ಗೆ ಕನಿಷ್ಠ ಸಾಮಾನ್ಯ ಜ್ಞಾನವಿರಬೇಕು ಯಾವುದೇ ಮೋಹ ಆಸೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಅಪರಾಧ ಪ್ರಕರಣಗಳ ಪ್ರಾತ್ಯಕ್ಷಿಕೆ ಮತ್ತು ಪೊಲೀಸ್ ಆಯುಧಗಳ ಬಳಕೆಗಳ ಬಗ್ಗೆ ಪ್ರದರ್ಶನ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೆನ್ ಡಿ ವೈ ಎಸ್ ಪಿ ಈಶ್ವರ್ ನಾಯಕ, ಹಿರಿಯೂರು ಉಪ ವಿಭಾಗದ ಡಿವೈಎಸ್.ಪಿ ಟಿ.ಎಂ.ಶಿವಕುಮಾರ್, ಪೌರಾಯುಕ್ತರಾದ ವಾಸೀಂ, ಇನ್ಸ್ ಪೆಕ್ಟರ್ ಗಳಾದ ರಾಘವೇಂದ್ರ ಕಾಂಡಿಕೆ, ಗುಡ್ಡಪ್ಪ, ಆನಂದ್, ಸೆನ್ ಇನ್ಸ್ ಪೆಕ್ಟರ್ ವೆಂಕಟೇಶ್ ಹಾಗು ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.