
ಚಿತ್ರದುರ್ಗ ಮೇ 23:
ಬಯಲುಸೀಮೆ ಹಾಗೂ ಕೋಟೆಯ ನಾಡು ಎನಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಕತ್ತಲೆಯನ್ನು ದೂರ ಮಾಡಿದ್ದು, ಮನೆ ಮನೆಗೂ ಬೆಳಕು ಚೆಲ್ಲುವಂತೆ ಮಾಡಿದೆ.
ರಾಜ್ಯ ಸರ್ಕಾರದ ಇಂಧನ ಇಲಾಖೆ ಮೂಲಕ ಜಾರಿ ಮಾಡಲಾದ ಗೃಹಜ್ಯೋತಿ ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಕೇವಲ ಬಡವರ ಮನೆ ಬೆಳಗುವುದು ಮಾತ್ರವಲ್ಲ, ವಿದ್ಯುತ್ ಬಿಲ್ ಭಾರ ಹೋರುತ್ತಿದ್ದ ಮಧ್ಯಮ ವರ್ಗದ ಕುಟುಂಬಗಳು ಕೂಡ ಇದರ ಫಲಾನುಭವ ಪಡೆದು ಬಿಲ್ ಕಟ್ಟುವ ಶ್ರಮ, ಕತ್ತಲೆ ಛಾಯೆಯನ್ನೂ ದೂರ ಮಾಡಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯು ಯಶಸ್ವಿಯಾಗಿ ಜಾರಿಗೊಂಡು ಎರಡು ವರ್ಷ ಪೂರ್ಣಗೊಳಿಸುವತ್ತ ಹೆಜ್ಜೆ ಹಾಕುತ್ತಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಅಭೂತ ಪೂರ್ವ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಾದ್ಯಂತ ಗೃಹಜ್ಯೋತಿ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು, ಬಹುತೇಕ ಫಲಾನುಭವಿಗಳು ನೋಂದಣಿ ಮಾಡಿಕೊಂಡು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡಿದ್ದಾರೆ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಂತೆ ಗೃಹಜ್ಯೋತಿ ಯೋಜನೆ ಈ ಸಮಾಜದಲ್ಲಿನ ಕಟ್ಟ ಕಡೆಯ ಕುಟುಂಬಕ್ಕೂ ಇದರ ಸವಲತ್ತು ದೊರೆಯುತ್ತಿದೆ. ಇದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಾರ್ಥಕ ಶ್ರಮವೂ ಆಗಿದೆ.
ಮನೆ-ಮನ ಬೆಳಗುತ್ತಿರುವ ಗೃಹ ಜ್ಯೋತಿ ಯೋಜನೆ:
*** ರಾಜ್ಯ ಸರ್ಕಾರವು ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯು ಜಾರಿಗೊಂಡು, ಇದೀಗ ರಾಜ್ಯಾದ್ಯಂತ ಜನರ ಮನೆ-ಮನಗಳನ್ನು ಬೆಳಗುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ಯೋಜನೆಗೆ ನೊಂದಣಿ ಕಾರ್ಯಕ್ಕೆ 2023 ರ ಜೂನ್ 18ರಂದು ಅಧಿಕೃತವಾಗಿ ಚಾಲನೆ ಸಿಕ್ಕಿತ್ತು. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಕಾರ್ಯಕ್ರಮದ ನೋಂದಣಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದೆ. ಅಲ್ಲದೆ ಸಾರ್ವಜನಿಕರು ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಆಯಾ ವಿದ್ಯುತ್ ಕಂಪನಿಗಳು ಕೂಡ ಅಂತರ್ಜಾಲದಲ್ಲಿ ಹೊಸ ಪೆÇೀರ್ಟಲ್ ತೆರೆದು, ಅನುಕೂಲ ಮಾಡಿಕೊಟ್ಟಿವೆ. ಇದರ ಜೊತೆಗೆ ಫಲಾನುಭವಿಗಳು ತಮ್ಮ ಮೊಬೈಲ್ನಲ್ಲಿಯೇ ನೊಂದಣಿ ಮಾಡಿಕೊಳ್ಳಲು ಅನುವಾಗುವಂತೆ ಸರಳೀಕರಣ ಮಾಡಲಾಗಿದೆ.
ಗೃಹ ಜ್ಯೋತಿ ನೋಂದಣಿಗೆ ಬೇಕಿರುವ ದಾಖಲೆಗಳು:




ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಸೇವಾಸಿಂಧು (https://sevasindhugs.karnataka.gov.in), ಫೋರ್ಟಲ್ನಲ್ಲಿ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಬಾಡಿಗೆ ಮನೆಯಲ್ಲಿ ವಾಸಿಸುವವರು, ಒಂದು ವೇಳೆ ಮನೆಯನ್ನು ಬೇರೆ ಮನೆಗೆ ಸ್ಥಳಾಂತರಿಸಿದ್ದಲ್ಲಿ ಅಂತಹವರು. ಹಾಗೂ ಹೊಸದಾಗಿ ಮನೆ ಕಟ್ಟಿಸಿಕೊಂಡವರು ಕೂಡ ಗೃಹಜ್ಯೋತಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ನಿಯಮವನ್ನು ಸರಳಗೊಳಿಸಲಾಗಿದೆ. ಗೃಹಜ್ಯೋತಿ ಯೋಜನೆಗೆ ಜನರು ಅರ್ಜಿ ಸಲ್ಲಿಕೆ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಎದುರಾದರೆ ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಚೇರಿ ಅಥವಾ 24*7 ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ 3.75 ಲಕ್ಷ ಫಲಾನುಭವಿಗಳು:
ಗೃಹಜ್ಯೋತಿ ಯೋಜನೆಯು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 4,19,7722 ಗೃಹಪಯೋಗಿ ಗ್ರಾಹಕರಿದ್ದು, ಅದರಲ್ಲಿ ಒಟ್ಟು 3,75,160 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ. 3,75,160 ಗ್ರಾಹಕರ ವಿದ್ಯುತ್ ಬಳಕೆ ಸಹಾಯಧನ ಮೊತ್ತ 15. 13 ಕೋಟಿ ರೂ. ಗಳಷ್ಟು ಕಳೆದ ಏಪ್ರಿಲ್-2025ರ ಮಾಹೆಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ 3,75,160 ಗ್ರಾಹಕರ ಸಹಾಯಧನ ಮೊತ್ತ ಒಟ್ಟು 292. 75 ಕೋಟಿ ರೂ. ಗಳಷ್ಟು ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಬಿ. ನಾಗರತ್ನಮ್ಮ, ವಾಲ್ಮೀಕಿ ನಗರ, ಜಾಫರ್ ಶರೀಫ್ ಲೇಔಟ್, ಚಳ್ಳಕೆರೆ.

ನಮ್ಮ ಮನೆಗೆ ಉಚಿತವಾಗಿ ವಿದ್ಯುತ್ ನೀಡುವಂತಹ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದ, ನಿಜಕ್ಕೂ ನಮಗೆ ಖುಷಿಯಾಗಿದೆ. ನಮ್ಮ ಮನೆಯ ನಿರ್ವಹಣೆಯಲ್ಲಿ ಗೃಹಜ್ಯೋತಿ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಎಂದೇ ಹೇಳಲು ಬಯಸುತ್ತೇನೆ. ಮನೆಯಲ್ಲಿ ಕಷ್ಟ ಇರಲಿ, ಏನೇ ಇರಲಿ, ಪ್ರತಿ ತಿಂಗಳು ನಾವು ಕರೆಂಟ್ ಬಿಲ್ಲು ಕಟ್ಟಲೇ ಬೇಕಿತ್ತು. ಇಲ್ಲದೇ ಹೋದರೆ, ಸಂಪರ್ಕ ಕಡಿತ ಜೊತೆಗೆ, ದಂಡವು ಬೀಳುತ್ತಿತ್ತು. ಮನೆಯಲ್ಲಿ ಓದುವ ಮಕ್ಕಳಿಗೆ ರಾತ್ರಿ ಹೊತ್ತು ಕರೆಂಟ್ ಬೇಕೇ ಬೇಕು. ಗೃಹಜ್ಯೋತಿ ಯೋಜನೆ ಜಾರಿಗೆ ಬಂದ ಬಳಿಕ, ನಮಗೆ ಸಾಕಷ್ಟು ಹಣ ಉಳಿತಾಯ ಆಗುತ್ತಿದ್ದು, ಇದೇ ಹಣವನ್ನು ಇಟ್ಟುಕೊಂಡು, ಮನೆಯ ನಿರ್ವಹಣೆಗೆ ಬೇಕಿರುವ ತರಕಾರಿ, ಹಾಲು, ಮೊಸರು ಖರೀದಿಸುತ್ತಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಯೋಜನೆಯನ್ನು ಜಾರಿಗೊಳಿಸಿದ ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್ ಅವರಿಗೆ ಧನ್ಯವಾದಗಳು.
ಮುಜಿಮುಲ್ಲಾ ಬಿ.ಎಂ., ಭಾಗ್ಯಜ್ಯೋತಿ ನಗರ, ಮೊಳಕಾಲ್ಮೂರು.

ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಿರುವ ಕರ್ನಾಟಕ ಸರ್ಕಾರ ನುಡಿದಂತೆ ನಡೆದಿದೆ. ನಮ್ಮಂತಹವರ ಹಿತ ಕಾಯುತ್ತಿದೆ. ಎಲ್ಲರಿಗೂ ಉಚಿತವಾಗಿ ಗರಿಷ್ಟ 200 ಯುನಿಟ್ ಕರೆಂಟ್ ಕೊಡುತ್ತಿರುವುದು, ಅಲ್ಲದೆ ಯಾವುದೇ ಲೋಡ್ ಶೆಡ್ಡಿಂಗ್ ಮಾಡದೆ, ನಿರಂತರವಾಗಿ ಕರೆಂಟ್ ಕೊಡಲಾಗುತ್ತಿದೆ. ಗೃಹಜ್ಯೋತಿ ಯೋಜನೆ ಜಾರಿಗೂ ಮೊದಲು, ಆರ್ಥಿಕ ತೊಂದರೆಯಿಂದ ನಾವು ವಿದ್ಯುತ್ ಬಿಲ್ ಕಟ್ಟುವುದು ತಡವಾದರೆ, ಅದಕ್ಕೆ ದಂಡವನ್ನೂ ಕೂಡ ಹಾಕುತ್ತಿದ್ದರು. ವಿದ್ಯುತ್ ಬಿಲ್ ಜೊತೆಗೆ ದಂಡದ ಹಣವನ್ನೂ ನಾವು ಕಟ್ಟಬೇಕಿತ್ತು. ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದ್ದರಿಂದ, ನಮಗೆ ಸಾಕಷ್ಟು ಉಳಿತಾಯ ಆಗುತ್ತಿದೆ. ಈ ಉಳಿತಾಯದ ಹಣವನ್ನು ಮನೆಯ ಇತರೆ ಖರ್ಚು ವೆಚ್ಚಗಳಿಗೆ ಬಳಸುತ್ತಿದ್ದೇವೆ. ಉಚಿತವಾಗಿ ವಿದ್ಯುತ್ ಕೊಡುತ್ತಿದ್ದರೂ, ನಾವು ಹಿತ-ಮಿತವಾಗಿ ಬಳಸುತ್ತಿದ್ದು, ಪ್ರತಿ ತಿಂಗಳು ಶೂನ್ಯ ಮೊತ್ತದ ಬಿಲ್ ಬರುತ್ತಿದೆ. ಈಗ ತುಸು ನೆಮ್ಮದಿ ಬಂದಂತಾಗಿದೆ. ಜನಮುಖಿಯಾಗಿರುವಂತಹ ಈ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಬೇಕು.







About The Author
Discover more from JANADHWANI NEWS
Subscribe to get the latest posts sent to your email.