March 17, 2026
FB_IMG_1737617760622.jpg


ಚಿತ್ರದುರ್ಗ.ಜ.23:
ನಗರದ ಕೇಂದ್ರ ಭಾಗದಲ್ಲಿರುವ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣಕ್ಕೆ ಗುರುವಾರ ಮುಂಜಾನೆ ಅನಿರೀಕ್ಷಿತ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು.
ಲೋಕಾಯುಕ್ತ ಭೇಟಿ ಕುರಿತು ವಾರದಿಂದಲೇ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ, ಆದರೂ ಬೇಜವಬ್ದಾರಿ ಹಾಗೂ ನಿರ್ಲಕ್ಷö್ಯದಿಂದ ಇದ್ದೀರಿ, ಸಾರ್ವಜನಿಕರು ನಿತ್ಯ ಓಡಾಟ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಲೋಕಾಯುಕ್ತರು ಬರುತ್ತಾರೆ ಎಂದು ತಿಳಿದ ಮೇಲೆಯೂ ಸ್ವಚ್ಛಗೊಳಿಸಿಲ್ಲ. ಇಷ್ಟೊಂದು ಬೇಜಾಬ್ದಾರಿ ತೋರಿದ್ದೀರಿ ಎಂದು ಸ್ಥಳದಲ್ಲಿ ಹಾಜರಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಅವರನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಕೇಂದ್ರದಲ್ಲಿರುವ ಬಸ್ ನಿಲ್ದಾಣವೇ ಈ ಸ್ಥಿತಿಯಲ್ಲಿದೆ, ಇನ್ನೂ ಬೇರೆ ಬಸ್ ನಿಲ್ದಾಣಗಳನ್ನು ಹೇಗೆ ಇಟ್ಟುಕೊಂಡಿದ್ದೀರೊ, ನನಗಂತು ಅರ್ಥವಾಗದು. ಬಸ್ ನಿಲ್ದಾಣದ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದೆ. ನಿಲ್ದಾಣ ಸ್ವಚ್ಛಗೊಳಿಸಿ ಎಷ್ಟು ದಿನವಾಗಿದೆಯೋ, ಸ್ವಚ್ಛತೆಗೆ ನೇಮಿಸಿರುವ ಏಜನ್ಸಿ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೀವೇನು ನಿಯಂತ್ರಣ ಮಾಡಿದ್ದೀರಿ ಎಂಬುದನ್ನು ಉತ್ತರಿಸಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡರು.
ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ದೂರಿನ ಸುರಿಮಳೆ
ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭೇಟಿ ಪರಿಶೀಲನೆ ಮಾಡುವುದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಸ್ ನಿಲ್ದಾಣದ ಹಾಗೂ ಬಸ್‌ಗಳ ನಿರ್ವಹಣೆಯ ಅವ್ಯವಸ್ಥೆ ಬಗ್ಗೆ ದೂರಿನ ಸುರಿಮಳೆ ಸುರಿಸಿದರು.
ಹೊಸದುರ್ಗ ಮಾರ್ಗದಲ್ಲಿ ಸಂಚರಿಸಲು ಮುಂಜಾನೆ ಯಾವುದೇ ಬಸ್ ಇಲ್ಲ. ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಸರಿಯಾದ ಸಮಯಕ್ಕೆ ಬಸ್ ಆಗಮಿಸುವುದಿಲ್ಲ. ನಮಗೆ ಜಿ.ಪಿ.ಎಸ್ ಹಾಗೂ ಬಯೋಮೆಟ್ರಿಕ್ ಆಧಾರಿತ ಹಾಜರಾತಿ ವ್ಯವಸ್ಥೆ ಇದೆ. ಸರಿಯಾದ ಸಂದರ್ಭಕ್ಕೆ ಕರ್ತವ್ಯ ಹಾಜರಾಗದಿದ್ದರೆ, ಅರ್ಧ ದಿನದ ವೇತನ ಕಡಿತಗೊಳಿಸುತ್ತಾರೆ. ವ್ಯವಸ್ಥಾಪಕರು ಹಾಗೂ ನಿಯಂತ್ರಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಸರಿಯಾದ ಕ್ರಮ ಕೈಗೊಳ್ಳದೇ ಉಡಾಫೆ ಉತ್ತರ ನೀಡುತ್ತಾರೆ ಎಂದು ಬಸ್‌ಗಾಗಿ ಕಾಯುತ್ತಿದ್ದ ಶಿಕ್ಷಕಿಯರು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಮುಂದೆ ಅಳಲು ತೊಡಿಕೊಂಡರು.
ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ ವಿಭಾಗದಲ್ಲಿ ಕಾರ್ಯಚರಣೆ ನಡೆಸುವ ನೂತನ ಬಸ್‌ಗಳ ವಿವರ ಹಾಗೂ ಗ್ರಾಮೀಣ ಭಾಗದ ಬಸ್ ಸಂಚಾರಗಳ ಕುರಿತು ಮಾಧ್ಯಮದವರೂ ಮಾಹಿತಿ ಕೇಳಿದರೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಂದಿಸುವುದಿಲ್ಲ, ಸಾರ್ವಜನಿಕ ಕಳಕಳಿಯಿಂದ ಮಾಧ್ಯಮಗಳು ಬಿತ್ತಿರಿಸಿದ ವರದಿಗಳಿಗೂ ಸಕಾರಾತ್ಮವಾಗಿ ಸ್ಪಂದಿಸುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಈ ವೇಳೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಗಮನ ಸೆಳೆದರು.
ಬಸ್‌ಗಳ ಕೊರತೆ, ನಿಲ್ದಾಣಗಳಲ್ಲಿ ಮೊಬೈಲ್ ಕಳ್ಳತನ, ಪಾರ್ಕಿಂಗ್ ಸಮಸ್ಯೆ, ಸ್ವಚ್ಚತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ನ್ಯಾಯಮೂರ್ತಿಗಳಲ್ಲಿ ಸಾರ್ವಜನಿಕರು ದೂರು ನೀಡಿದರು. ಈ ಕುರಿತು ನ್ಯಾಯಮೂರ್ತಿಗಳು ಪ್ರಶ್ನೆಗೆ ಉತ್ತರಿಸಲು ತಡವರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಪೊಲೀಸ್ ಉಪಠಾಣೆ, ಮಹಿಳಾ ವಿಶ್ರಾಂತಿ ಗೃಹ, ಮಾತೃ ಮನೆ, ಪರುಷರ ಶೌಚಾಲಯ, ಹೋಟೆಲ್ ಸೇರಿದಂತೆ ಬಸ್ ನಿಲ್ದಾಣದ ಆವರಣದಲ್ಲಿ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸಂಚರಿಸಿ ವೀಕ್ಷಣೆ ನಡೆಸಿದರು. ಈ ವೇಳೆ ಡ್ರೆöÊನೇಜ್ ತುಂಬಿ ಹರಿಯುತ್ತಿರುವುದನ್ನು ಗಮಸಿದ ಅವರು, ವಿಭಾಗೀಯ ನಿಯಂತ್ರಣಾಧಿಕಾರಿ ಪ್ರತಿನಿತ್ಯವೂ ವೀಕ್ಷಣೆ ನಡೆಸಿ, ಕ್ರಮ ಕೈಗೊಂಡಿದ್ದರೆ, ಇಷ್ಟೊಂದು ಅವ್ಯವಸ್ಥೆ ಇರುತ್ತಿರಲಿಲ್ಲ. ಕಣ್ಣುಮುಚ್ಚಿ ಕುಳಿತ್ತಿದ್ದೀರಿ, ಮೆಲ್ನೋಟಕ್ಕೆ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ನಾಳೆ ಸಂಜೆಯ ಒಳಗೆ ಮತ್ತೊಮ್ಮೆ ಬಸ್ ನಿಲ್ದಾಣಕ್ಕೆ ಭೇಟಿ ನೀಡುತ್ತೇನೆ. ನಿಲ್ದಾಣದ ಅಚ್ಚುಕಟ್ಟಾಗಿ ಇರದಿದ್ದರೆ, ನಿಮ್ಮನ್ನೂ ಕೆಲಸದಿಂದ ತೆಗೆಯಲು ಸರ್ಕಾರಕ್ಕೆ ಬರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಬಸ್ ನಿಲ್ದಾಣದಲ್ಲೇ ಇರುವ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಹಾಜರಾತಿ ಪುಸ್ತಕ, ಚಲನವಲನ ವಹಿ, ನಗದು ಘೋಷಣಾ ವಹಿಗಳನ್ನು ಪರಿಶೀಲನೆ ನೀಡುವಂತೆ ಸೂಚಿಸಿದರು. ಆದರೆ ಇನ್ನೂ ಸಿಬ್ಬಂದಿಗಳು ಕಚೇರಿ ಆಗಮಿಸಿರದ ಕಾರಣ, ಹಾಜರಾತಿ ಪುಸ್ತಕ ಮಾತ್ರ ನ್ಯಾಯಮೂರ್ತಿಗಳ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ ಅವರಿಗೆ ಚಲನವಲನ ವಹಿ, ನಗದು ಘೋಷಣಾ ವಹಿಗಳನ್ನು ಪರಿಶೀಲನೆ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಉಪ ಲೋಕಾಯುಕ್ತ ಭೇಟಿ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಎಸ್.ಜೆ.ಸೋಮಶೇಕರ್,ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ಎಂ.ವಿಜಯ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading