January 29, 2026
d20-tm1.jpg


(ವರದಿ:ನಾಗತಿಹಳ್ಳಿಮಂಜುನಾಥ್)
ಹೊಸದುರ್ಗ : ತಾಲ್ಲೂಕಿನ ರೈತರಿಗೆ ಸಮರ್ಪಕ ವಿದ್ಯುತ್ ಹಾಗೂ ನೀರು ನೀಡುವ ಗುರಿಯಿತ್ತು. ಆ ಗುರಿ ತಲುಪುವ ಹಂತದಲ್ಲಿದ್ದೇವೆ. ರೈತರಿಗೆ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಿದರೆ, ಅವರ ಬದುಕು ಸಮೃದ್ಧವಾಗಿರುತ್ತದೆ. ದೇಶದ ಜಿಡಿಪಿಯೂ ಸಹ ಹೆಚ್ಚಾಗುತ್ತದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ತಾಲ್ಲೂಕಿನ ಮಾರಬಘಟ್ಟ ಗ್ರಾಮದ ಗೇಟ್ ಬಳಿ ಶುಕ್ರವಾರ ಸೋಲಾರ್ ವಿದ್ಯುತ್ ಪ್ಲಾಂಟ್ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಜಂಟಿ ಯೋಜನೆಯಲ್ಲಿ ಸೋಲಾರ್ ವಿದ್ಯುತ್ ಪ್ಲಾಂಟ್ ನ್ನು ತಾಲ್ಲೂಕಿನ ಮಾರಬಘಟ್ಟ ಸರ್ಕಾರಿ ಗೋಮಾಳದಲ್ಲಿ ಆರಂಭಿಸಲಾಗಿದೆ. ರಾತ್ರಿ ಜಮೀನುಗಳಿಗೆ ನೀರು ಬಿಡಲು ರೈತರು ಹರಸಾಹಸ ಪಡಬೇಕಾಗಿತ್ತು. ಎಷ್ಟೋ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈತರ ಹಿತದೃಷ್ಟಿಯಿಂದ ಈ ಯೋಜನೆ ಬಂದಿದೆ. ಈ ಸೋಲಾರ್ ಪ್ಲಾಂಟ್ ನಿಂದಾಗಿ ರೈತರು ಹಗಲಿನಲ್ಲಿಯೂ ಸಹ ನೀರು ಬಿಡಬಹುದು. ತಾಲ್ಲೂಕಿನಲ್ಲಿ ವಿದ್ಯುತ್ ಅವಶ್ಯಕತೆ ಬಹಳ ಇದೆ ಎಂದರು.
‘ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ತಲುಪಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಟ್ಯಾಂಕ್ ಗಳ ನಿರ್ಮಾಣ, ೧೨೬ ಪಂಪ್ ಹೌಸ್ ಗಳ ನಿರ್ಮಾಣ ಆಗುತ್ತಿದ್ದು, ವಿದ್ಯುತ್ ಅವಶ್ಯಕತೆ ಬಹಳ ಇದೆ. ಹಾಗಾಗಿ ಪಂಪ್ ಹೌಸ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಕೆಲಸ ತುರ್ತಾಗಿ ಆಗಬೇಕು. ಕೆಲ ಉಪಕೇಂದ್ರಗಳಿಗೆ ಹೆಚ್ಚುವರಿಯಾಗಿ ಟಿ.ಸಿ ಹಾಕಬೇಕು. ಈ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಒಟ್ಟಾರೆಯಾಗಿ ವಿದ್ಯುತ್ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೊಸದುರ್ಗ ಅಗ್ರಗಣ್ಯ ಸ್ಥಾನದಲ್ಲಿದೆ. ಸೋಲಾರ್ ವಿದ್ಯುತ್ ಪ್ಲಾಂಟ್ ಅತ್ಯಂತ ತ್ವರಿತವಾಗಿ ನಿರ್ಮಾಣ ಆಗಿರುವುದರಿಂದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿಗಳಿಗೆ ಶಾಸಕ ಬಿ.ಜಿ. ಗೋವಿಂದಪ್ಪ ಅಭಿನಂದನೆ ಸಲ್ಲಿಸಿದರು.
‘ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸಿ, ರೈತರಿಗೆ ಗುಣಮಟ್ಟದ ವಿದ್ಯುತ್ ಒದಗಿಸಲಾಗುವುದು. ಈ ಹಿಂದೆ ಉಪಕೇಂದ್ರಗಳಿAದ ರೈತರಿಗೆ ಹಗಲಿನಲ್ಲಿ ವಿದ್ಯುತ್ ಒದಗಿಸುವುದು ಸ್ವಲ್ಪ ಕಷ್ಟವಾಗಿತ್ತು. ಹಾಗಾಗಿ ಸೋಲಾರ್ ವಿದ್ಯುತ್ ಒದಗಿಸುವ ಯೋಜನೆ ರೈತರಿಗೆ ಅನುಕೂಲವಾಗಲಿದೆ. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಹೊಸದುರ್ಗದಲ್ಲಿ ಉದ್ಘಾಟನೆಯಾಗಿದೆ. ಶಾಸಕ ಬಿ.ಜಿ. ಗೋವಿಂದಪ್ಪ ಅವರ ಸಹಕಾರದಿಂದ ಈ ಕಾರ್ಯ ತ್ವರಿತವಾಗಿ ಸಾಗಿದೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ ತಾಲ್ಲೂಕಿನಾದ್ಯಂತ ೩ ಕಡೆ ಸ್ಥಳ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬರವೇ ಇಲ್ಲದಂತಾಗುತ್ತದೆ ಎಂದು ಅಧೀಕ್ಷಕ ರೇವಣಸಿದ್ದಪ್ಪ ಸಂತಸ ವ್ಯಕ್ತಪಡಿಸಿದರು.’
ಅಧೀಕ್ಷಕ ಇಂಜಿನಿಯರ್ ಗಳಾದ ಎಸ್.ಕೆ. ಪಾಟೀಲ್, ರೇವಣಸಿದ್ದಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ತಿಮ್ಮರಾಮಪ್ಪ, ಷಾಜಿಯಾಸುಲ್ತಾನ್, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಸಿ. ನಿಂಗಪ್ಪ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಬೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್. ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಹಲವರಿದ್ದರು. 

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading