
ಚಿತ್ರದುರ್ಗ:
ಪ್ಲಾಸ್ಟಿಕ್ ಕಣಗಳು ನೀರಿನ ಮೂಲಕ ಸಕ್ಕರೆ, ಉಪ್ಪು, ಹಾಲು ಸೇರಿದಂತೆ ಆಹಾರ ಪದಾರ್ಥಗಳ ಮೂಲಕ ಮನುಷ್ಯನ ಶ್ವಾಸಕೋಶ, ಜಠರ, ಮೆದುಳಿನಲ್ಲಿ ಸೇರುತ್ತಿವೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿದ್ದು, ಯಾವುದೇ ಕಾರಣಕ್ಕೂ ಹೊರಗಿನ ಹಾಗೂ ಬೇಕರಿ ತಿಂಡಿಗಳನ್ನು ಬಳಸಬಾರದು ಎಂಬುದಾಗಿ ಚಿತ್ರದುರ್ಗ ರೈನ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಅವರು ಹೇಳಿದರು.
ನಗರದ ಮದಕರಿಪುರ ರೈನ್ ಟ್ರಸ್ಟ್ ಸಂಸ್ಥೆ, ಜಿಂದಾಲ್ ಜೂಬ್ಲಿ ಭಾರತೀಯ ಪ್ರೌಢಶಾಲೆಯಲ್ಲಿ ನವೆಂಬರ್ 20ರಂದು ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಅಂದೋಲನದ ಅಂಗವಾಗಿ ಮಕ್ಕಳು ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆಯ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊರಗಿನ ಹಾಗೂ ಬೇಕರಿ ತಿಂಡಿಗಳಲ್ಲಿ ಹಾನಿಕಾರಕ ಕೃತಕ ಬಣ್ಣ, ಕೃತಕ ವಾಸನೆ ಮತ್ತು ಧೀರ್ಘಕಾಲ ಕೆಡದಂತೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಈ ಪದಾರ್ಥಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಆದ್ದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ ಎಂಬುದಾಗಿ ಅವರು ಹೇಳಿದರು.
ಅಪರಾಧ ಶಾಸ್ತ್ರದ ವಿಶ್ರಾಂತ ಪ್ರಾಂಶುಪಾಲರಾದ ಡಾ.ನಟರಾಜ್ ಮಕ್ಕಳ ಹಕ್ಕುಗಳ ಬಗ್ಗೆ ಮಾತಾನಾಡಿ, ಮಕ್ಕಳು ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ, ಸಾರ್ವಜನಿಕ ಪ್ರದೇಶದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ, ತಮ್ಮ ಅನುಮತಿಯಿಲ್ಲದೆ ಪೋಟೊ ತೆಗೆಯುವುದನ್ನು ಮಾಡಕೂಡದು, ಮತ್ತು ಅವುಗಳನ್ನು ಪ್ರದರ್ಶಿಸಬಾರದೆಂದು, ಹಾಗೊಮ್ಮೆ ಮಾಡಿದ್ದಲ್ಲಿ ಅಲ್ಲಿಯೇ ಪ್ರತಿಭಟಿಸಬೇಕು ಎಂಬುದಾಗಿ ಹೇಳಿದರು.
ಪರಿಸರವಾದಿಗಳಾದ ಡಾ.ಹೆಚ್.ಎಸ್.ಕೆ.ಸ್ವಾಮಿ ಮಾತನಾಡಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಸ್ಥಳೀಯರಿಗೆ ಉದ್ಯೋಗ ದೊರಕುವ ಮುಖಾಂತರ ಹಳ್ಳಿಯ ಹಣ ನಗರ ಸೇರದಂತೆ ತಡೆಗಟ್ಟಬೇಕಾದರೆ, ಬಟ್ಟೆ ನೇಯುವುದು ಸೇರಿದಂತೆ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಸ್ವಾವಂಲಂಬಿಗಳಾಗಬೇಕೆಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಎಂ.ಮಂಜುನಾಥ್ ಕಳ್ಳಿಹಟ್ಟಿ ಪ್ರಸ್ತಾವಿಕವಾಗಿ ಮಾತಾನಾಡಿ, ಮಕ್ಕಳಿಗೆ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಅಗತ್ಯ ಮಾಹಿತಿ ಅವಶ್ಯವಿದ್ದು, ಮಕ್ಕಳು ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆಯ ಕುರಿತ ಜಾಗೃತಿ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯಬೇಕು. ಮಕ್ಕಳು ರೋಗದಿಂದ ಬಳಲಬಾರದು, ಇಂದಿನ ಮಕ್ಕಳಿಗೆ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆ ಬಹುಮುಖ್ಯವಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ಎಂ.ಜಯಪ್ರಕಾಶ್, ಟಿ.ದ್ಯಾಮಣ್ಣ, ಲೋಹಿತ್ ಎಂ.ಜೆ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.