
ವರದಿ: ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ : 108 ಆರೋಗ್ಯ ಕವಚ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲವೆಂದು ಸಿಬ್ಬಂದಿಗಳು ಗಂಭೀರ ಆರೋಪ ಮಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ಆರೋಗ್ಯ ಕವಚ ವಾಹನ ಚಾಲಕರಿಗೆ ತಿಂಗಳಿಗೆ 35 ಸಾವಿರದಂತೆ 6 ತಿಂಗಳ ವೇತನ ನೀಡಿದ್ದರು. ಆ ನಂತರದಲ್ಲಿ ವೇತನ ಕಡಿತಗೊಳಿಸಿ 30 ಸಾವಿರದಂತೆ ಆರು ತಿಂಗಳ ವೇತನವನ್ನು ನೀಡಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ದಿಡೀರನೆ ವೇತನವನ್ನು ಕಡಿತಗೊಳಿಸಿ ತಿಂಗಳಿಗೆ 13 ಸಾವಿರ ನೀಡುತ್ತಿದ್ದಾರೆ. ಅದು ಕೂಡ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲವೆಂದು ದೂರಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಆದೇಶವಿದ್ದರೂ ಸಮಾನ ವೇತನ ನೀಡುತ್ತಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದು ರೀತಿಯ ವೇತನ, ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದು ರೀತಿಯ ವೇತನ ಹಾಗೂ ಪಿ ಎಚ್ ಸಿ ಮತ್ತು ಸಿ ಎಚ್ ಸಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ 108 ಸಿಬ್ಬಂದಿಗಳಿಗೆ ಒಂದು ರೀತಿಯಲ್ಲಿ ವೇತನವನ್ನು ನೀಡುತ್ತಿದ್ದಾರೆ. 2016 ರಿಂದ ಜಿವಿಕೆ ಕಂಪನಿಯ ಗುತ್ತಿಗೆ ಮುಕ್ತಾಯಗೊಂಡಿದೆ ಆದರೂ ಕೂಡ ಜೀವಿಕೆ ಕಂಪನಿಯೇ ಕಾರ್ಯ ನಿರ್ವಹಿಸುತ್ತಿದೆ. ಸಕಾಲಕ್ಕೆ 108 ಆರೋಗ್ಯ ಕವಚ ವಾಹನಗಳಿಗೆ ಬೇಕಾಗುವ ಟೈರ್ ಮತ್ತು ಬಿಡಿ ಭಾಗಗಳನ್ನು ನೀಡಿ ದುರಸ್ತಿ ಮಾಡಿಸುತ್ತಿಲ್ಲ. ಸುಮಾರು 108 ವಾಹನಗಳು ಗ್ಯಾರೇಜ್ ಗಳಲ್ಲಿ ದುರಸ್ತಿ ಮಾಡಿಸದೇ ನಿಲ್ಲಿಸಲಾಗಿದೆ.
ಜಿವಿಕೆ ಕಂಪನಿಯವರು ಪ್ರಾರಂಭದಲ್ಲಿ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆ ವೇತನ ನೀಡಿದರೂ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಈ ರೀತಿಯಾದರೆ 108 ಆರೋಗ್ಯ ಕವಚದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ಜೀವನ ನಡೆಸುವುದು ಹೇಗೆ? ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಹಾಗೂ ಮಕ್ಕಳ ವಿದ್ಯಾಭ್ಯಾಸದ ಶಾಲಾ ಶುಲ್ಕ ಸೇರಿದಂತೆ ದಿನಪಯೋಗಿ ವಸ್ತುಗಳ ಬೆಲೆ ಹೆಚ್ಚಳದಿಂದ ಈಗಿನ ವೇತನದಲ್ಲಿ ಜೀವನ ನಿರ್ವಹಣೆ ಅಸಾಧ್ಯವೆಂದು 108 ಆರೋಗ್ಯ ಕವಚ ಸಿಬ್ಬಂದಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಜಿವಿಕೆ ಕಂಪನಿ ಪ್ರಾರಂಭದಲ್ಲಿ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಹಾಗೂ ವಾಹನಗಳ ಬಿಡಿಭಾಗಗಳನ್ನು ನೀಡಿ ದುರಸ್ತಿ ಮಾಡಿಸುತ್ತಿದ್ದರು. ಆದ್ದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆ ರೀತಿಯ ವಾತಾವರಣವಿಲ್ಲ ಎಂದರು.
ಪ್ರಸ್ತುತ ವೇತನ ಕಡಿತಗೊಳಿಸಿರುವ ಬಗ್ಗೆ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
About The Author
Discover more from JANADHWANI NEWS
Subscribe to get the latest posts sent to your email.