ನಾಯಕನಹಟ್ಟಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ವಾಹನ ಕಳೆದ ಹತ್ತು ದಿನಗಳಿಂದ ಚಳ್ಳಕೆರೆ ನಗರದ ಚೇಂಬರ್ಸ ಆಫ್ ಕಾಮರ್ಸ್ ಎದುರುಗಡೆ ನಿಲ್ಲಿಸಿರುವುದು ಏಕೆ ಎಂದು ಕೆ ಆರ್ ಎಸ್ ಪಕ್ಷದ ಮುಖಂಡ ಬಾಲರಾಜ್ ಎನ್ ದೇವರಹಳ್ಳಿ ಪ್ರಶ್ನಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಕೋಟಿಗಟ್ಟಲೆ ಅನುದಾನವನ್ನು ನೀಡಿ ಗ್ರಾಮಗಳು ಸ್ವಚ್ಛವಾಗಿರಲಿ ಎಂದು ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ವಾಹನಗಳನ್ನು ಖರೀದಿಸಿ ಕೊಟ್ಟರೂ, ಅಧಿಕಾರಿಗಳು ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಅವರಿಗೆ ಹೇಗೆ ಬೇಕೋ ಆ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮವಾದ ಹೂಡೇಂ ಗ್ರಾಮ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ವಾಹನ ಸಂಖ್ಯೆ KA34C1049 TATA ACE ವಾಹನವನ್ನು ಅನ್ಯ ವ್ಯಕ್ತಿಯ ಮನೆಯ ಪಕ್ಕದಲ್ಲಿ ನಿಲ್ಲಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.ಹೂಡೇಂ ಗ್ರಾಮ ಪಂಚಾಯಿತಿ ಪಿಡಿಓ ರವರನ್ನು ಸಂಪರ್ಕಿಸಿದಾಗ ವಾಹನವನ್ನು ರಿಪೇರಿಗೆ ಕಳುಹಿಸಲಾಗಿದೆ ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದು, ವಾಹನ ರಿಪೇರಿಗೆ ಬಂದರೆ ಗ್ಯಾರೇಜ್ ನಲ್ಲಿ ಇರಬೇಕು. ಅನ್ಯ ವ್ಯಕ್ತಿಯ ಮನೆಗಳ ಹತ್ತಿರ ನಿಲ್ಲಿಸಬಾರದು. ಸರ್ಕಾರದ ಆಸ್ತಿಯನ್ನು ಅನ್ಯ ವ್ಯಕ್ತಿಗಳ ಬಳಕೆಗೆ ಮತ್ತು ನಿಲ್ಲಿಸಲಿಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಹೂಡೇಂ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನವನ್ನು ಚಳ್ಳಕೆರೆ ನಗರದಲ್ಲಿ ನಿಲ್ಲಿಸಿರುವುದಕ್ಕೆ ಉದಾಹರಣೆ ಎಂಬಂತೆ ಚಳ್ಳಕೆರೆ ತಾಲ್ಲೂಕಿನ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯಿತಿಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು ತಮ್ಮ ಸ್ವಂತ ಮನೆ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿಯ ಕಸ ವಿಲೇವಾರಿ ವಾಹನದಲ್ಲಿ ಇಟ್ಟಿಗೆಗಳನ್ನು ಸಾಗಿಸಲು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ರೀತಿ ಕೂಡ ಈ ವಾಹನವನ್ನು ಬಳಸಲಾಗಿದೆಯೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.
ಆದ್ದರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹೂಡೇಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಸ ವಿಲೇವಾರಿ ವಾಹನವನ್ನು ಚಳ್ಳಕೆರೆ ನಗರದಲ್ಲಿ ನಿಲ್ಲಿಸಿರುವ ಬಗ್ಗೆ ವರದಿ ನೀಡಲು ಸೂಚಿಸಲಾಗಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ನೋಟಿಸ್ ಜಾರಿಗೊಳಿಸಲಾಗುವುದು.
ತಾಲ್ಲೂಕು ಪಂಚಾಯಿತಿ
ಕಾರ್ಯನಿರ್ವಾಹಕ ಅಧಿಕಾರಿ.
ಕೂಡ್ಲಿಗಿ, ವಿಜಯನಗರ ಜಿಲ್ಲೆ.
About The Author
Discover more from JANADHWANI NEWS
Subscribe to get the latest posts sent to your email.