January 29, 2026
IMG-20260120-WA0214.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಪ್ರತಿಯೊಬ್ಬರೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಪಟ್ಟಣದ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನ ಪೀಠದ ಧನುರ್ದಾಸೆ ಶ್ರೀ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಹೊಸದಾಗಿ ಬಣ್ಣ ಲೇಪನ ಮಾಡಿಸಲು ಸುಮಾರು 80,000 ರೂಗಳ ವೆಚ್ಚದ ಬಣ್ಣದ ಬಾಕ್ಸ್ ಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.

ಯಾರೇ, ಯಾರಿಗಾದರೂ ಸಹಾಯ ಮಾಡಿದರೂ ಅದನ್ನು ಪ್ರಚಾರಕ್ಕಾಗಿ ಮಾಡುವುದಲ್ಲ. ಪ್ರಾಮಾಣಿಕವಾಗಿ ಸೇವಾ ಮನೋಭಾವನೆಯಿಂದ ಮಾಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಭಗವಂತನು ಕೂಡ ಅಂತಹ ಸೇವಾ ಕಾರ್ಯವನ್ನು ಮೆಚ್ಚುತ್ತಾನೆ ಎಂದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜನ್ನು ದತ್ತು ಪಡೆದು ಅದರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಆ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ಹೆಚ್ಚಿನ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದರು.

ಶಾಲೆಗಳೆಂದರೆ ಅವುಗಳು ಸುಂದರ ದೇವಾಲಯಗಳಂತಿರಬೇಕು. ಅಲ್ಲಿ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡಬೇಕು ಆ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯುತ್ತ ಸೆಳೆಯುವ ಕೆಲಸವಾಗಬೇಕು ಎಂದರು.

ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಂದರ್ಭದಲ್ಲಿ ಶ್ರದ್ಧೆ ಭಕ್ತಿಯಿಂದ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು. ಆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದ ಅವರು ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿದ ಗುರುಗಳು, ಓದಿದ ಶಾಲೆ, ಹೆತ್ತವರು ಹಾಗೂ ಹುಟ್ಟಿದ ಊರಿಗೆ ಕೀರ್ತಿಯನ್ನು ತರಬೇಕು ಎಂದರು.

ಶಿಕ್ಷಕ ವೃಂದದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನ ಕಲಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಆ ಮೂಲಕ ಒಳ್ಳೆಯ ವ್ಯಕ್ತಿಗಳನ್ನು ರೂಪಿಸಿ ಸಮಾಜಕ್ಕೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ಕುಮಾರ್, ಉಪ ಪ್ರಾಂಶುಪಾಲೆ ಎಸ್.ಕೆ.ವತ್ಸಲ, ಉಪನ್ಯಾಸಕರುಗಳಾದ ಅಶೋಕ್, ಸುರೇಶ, ವಿಜಯನಾಯಕ್, ನಾಗರಾಜು, ಶಿಕ್ಷಕರಾದ ಮಧುಕುಮಾರ್, ನಾರಾಯಣ, ಶಶಿಕುಮಾರ್, ಜಯಕುಮಾರ್, ಮಮತ, ಕುಮುದ, ಮುಖಂಡರುಗಳಾದ ಪುಟ್ಟಪ್ಪ, ಮಹದೇವ, ಸಂತೋಷ, ಪ್ರಶಾಂತ್, ಅನಿಲ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading