
ಹೊಸದುರ್ಗ: ಪಟ್ಟಣದ ಸ್ವಾಗತ ಬೋರ್ಡ್ ನಾಮಫಲಕವನ್ನು ‘ಸಿರಿಧಾನ್ಯಗಳ ನಾಡು ‘ ಎಂದು ಬದಲಾಯಿಸಿ, ನೂತನ ನಾಮಫಲಕವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಅನಾವರಣಗೊಳಿಸಿದರು.
ಹೊಸದುರ್ಗ ಸಿರಿಧಾನ್ಯ ಬೆಳೆಗೆ ತನ್ನದೇ ದಾಖಲೆ ಸೃಷ್ಟಿಸಿದೆ. ಸುಮಾರು ೨೮ ಸಾವಿರ ಎಕರೆ ಭೂಮಿಯಲ್ಲಿ ಸಾವೆ ಬಿತ್ತನೆಯಾಗಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
ತಾಲ್ಲೂಕಿನ ಮಣ್ಣು ಮತ್ತು ವಾತಾವರಣ ಸಿರಿಧಾನ್ಯ ಬೆಳೆಗೆ ಸೂಕ್ತವಾಗಿದೆ. ಇಲ್ಲಿ ಸಾವೆ, ಊದಲು, ಕೊರ್ಲೆ, ಆರ್ಕಾ ಸೇರಿದಂತೆ ಹಲವು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಮಳೆ ತಡವಾದ ಕಾರಣ ಹೆಸರು ಬಿತ್ತುವ ಸ್ಥಳವನ್ನು ಸಾವೆ ಆಕ್ರಮಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣವನ್ನು ಕಂಡು ‘ಸಿರಿಧಾನ್ಯಗಳ ನಾಡು ಹೊಸದುರ್ಗ ಕ್ಕೆ ಸ್ವಾಗತ ‘ ಎಂಬ ನೂತನ ನಾಮಫಲಕ ಅಳವಡಿಸಲಾಗಿದೆ.
‘ಹೊಸದುರ್ಗ ಸಿರಿಧಾನ್ಯ ಬೆಳೆಗೆ ಹಲವಾರು ವರ್ಷಗಳಿಂದ ಪ್ರಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ವರದಿಯನ್ನು ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ಶಾಸಕ ಬಿ.ಜಿ. ಗೋವಿಂದಪ್ಪ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳ ಸಹಕಾರದಿಂದ ನಾಮಫಲಕ ಬದಲಾಯಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ತಿಳಿಸಿದರು.’
ನಾಮಫಲಕ ಅನಾವರಣ ರೈತರಲ್ಲಿ ಸಂತಸ ತಂದಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆಗಳಿಗೆ ಪ್ರಾಮುಖ್ಯತೆಯಿದೆ. ಹೆಚ್ಚು ಸಿರಿಧಾನ್ಯ ಬೆಳೆಯುವ ಮೂಲಕ ಹೊಸದುರ್ಗವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ರೈತರು ಮಾಡಿದ್ದಾರೆ. ಜನಪ್ರತಿನಿಧಿಗಳು ಸಾವೆ ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಬೇಕು. ಆಗ ರೈತರ ಸಂತಸ ಇಮ್ಮಡಿಯಾಗುತ್ತದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಬೋರೇಶ್ ಅಭಿಪ್ರಾಯಪಟ್ಟರು.’
About The Author
Discover more from JANADHWANI NEWS
Subscribe to get the latest posts sent to your email.