December 14, 2025
1742391166990.jpg



ಚಿತ್ರದುರ್ಗಮಾರ್ಚ್19:
ಆನ್‍ಲೈನ್ ವಹಿವಾಟು ಹೊಸ ಪೀಳಿಗೆಯ ಮಾರುಕಟ್ಟೆಯಾಗಿದ್ದು, ಆನ್‍ಲೈನ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವಾಗ ಬಹಳ ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಕಾನೂನು ಮಾಪನಾ ಶಾಸ್ತ್ರ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಗ್ರಾಹಕರ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ವಸ್ತುಗಳು ಸಹ ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಆನ್‍ಲೈನ್ ಮಾರುಕಟ್ಟೆ ಮೂಲಕ ಸೇವೆ ಒದಗಿಸಲಾಗುತ್ತಿದೆ. ಆದಾಗ್ಯೂ ಕೂಡ ನಮಗೆ ಆನ್‍ಲೈನ್ ಮಾರುಕಟ್ಟೆ ಕುರಿತು ಅರಿವಿನ ಕೊರತೆ ಇದೆ. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ಆನ್‍ಲೈನ್ ಮಾರುಕಟ್ಟೆ, ಆನ್‍ಲೈನ್ ಸೇವೆಗಳು ಬಹಳ ಅತ್ಯವಶ್ಯಕವಾಗಿದ್ದು, ಈ ಕುರಿತು ನಾವು ಹೆಚ್ಚಿನ ಅರಿವು ಪಡೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
ವಿಶ್ವ ಗ್ರಾಹಕರ ದಿನಾಚರಣೆಯ ಈ ವರ್ಷದ ಘೋಷವಾಕ್ಯ “ಸುಸ್ಥಿರ ಜೀವನ ಶೈಲಿಗೆ ಸರಳ ಪರಿವರ್ತನೆ” ಎಂಬುದಾಗಿದೆ. ಮನುಷ್ಯನ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಕಾಲಕ್ಕೆ ಬದಲಾವಣೆ ತರುವುದು ಹಾಗೂ ಮನುಷ್ಯನ ಒಳಿತಿಗಾಗಿ ಮಾಡಿಕೊಂಡ ಸೇವೆಗಳು ಪರಿಸರಕ್ಕೆ ಬಹಳಷ್ಟು ಹಾನಿಕಾರ ಮಾಡಬಾರದು ಎಂಬ ಪರಿಕಲ್ಪನೆಯಿಂದ ಈ ಘೋಷವಾಕ್ಯ ರೂಪಿಸಲಾಗಿದೆ. ಪ್ರತಿಯೊಬ್ಬರು ಸಹ ಆನ್‍ಲೈನ್ ಮಾರುಕಟ್ಟೆ ಬಳಸುತ್ತಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ವಸ್ತುವನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ ಅವರು, ಗ್ರಾಹಕರು ಎಚ್ಚರಿಕೆಯಿಂದ ಖರೀದಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಹೆಚ್.ಎನ್.ಮೀನಾ ಮಾತನಾಡಿ, ಗ್ರಾಹಕರ ರಕ್ಷಣಾ ಕಾಯ್ದೆಯನ್ನು ಮೊಟ್ಟ ಮೊದಲ ಬಾರಿಗೆ ಅಮೇರಿಕಾದಲ್ಲಿ ಜಾರಿಗೆ ಬಂದಿದ್ದು, ಅಂದು ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ಅಮೇರಿಕಾದಲ್ಲಿ ಗ್ರಾಹಕರಿಗೆ ಆಗುತ್ತಿರುವ ಮೋಸ, ವಂಚನೆ, ಅನ್ಯಾಯದ ವ್ಯಾಪಾರ, ಸೇವಾ ನ್ಯೂನತೆ ಅರಿತು ಗ್ರಾಹಕರ ಹಿತ ರಕ್ಷಣಾ ಕಾಯ್ದೆಯನ್ನು 1962ರಲ್ಲಿ ತಂದರು. ನಮ್ಮ ದೇಶದಲ್ಲಿ ಪ್ರತ್ಯೇಕವಾಗಿ ಕಾಯ್ದೆ ಇರಲಿಲ್ಲ. ಗ್ರಾಹಕರಿಗೆ ಆದ ಮೋಸ, ವಂಚನೆ, ಅನ್ಯಾಯ, ಅಪಘಾತಗಳ ಪರಿಹಾರಕ್ಕಾಗಿ ಕಂಪನಿ ಆಕ್ಟ್ 1956ರ ಕೆಳಗಡೆ ದೂರು ದಾಖಲಿಸಿ, ಪರಿಹಾರ ಪಡೆಯುವುದು ತುಂಬಾ ಕಷ್ಟವಾಗುತ್ತಿತ್ತು. ಮತ್ತು ಕೆಲವೊಮ್ಮೆ ಈ ಪರಿಹಾರ ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ನಮ್ಮ ದೇಶದಲ್ಲಿ 1986ರಲ್ಲಿ ಗ್ರಾಹಕರ ಕಾಯ್ದೆ ಜಾರಿಗೆ ಬಂದಿತು. ಗ್ರಾಹಕರು ತಮಗೆ ಅನ್ಯಾಯವದಾಗ, ಮೋಸವಾದಾಗ, ಗ್ರಾಹಕ ವ್ಯವಹಾರಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಪರಿಹಾರ ಹಾಗೂ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.
ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂಪ್ರಾದಾಯಿಕ ವ್ಯವಹಾರ ಪದ್ಧತಿ ಸಂಪೂರ್ಣ ಕಣ್ಮೆರೆಯಾಗಿದ್ದು, ಆನ್‍ಲೈನ್ ಬದಲಾದ ಪದ್ಧತಿಗೆ ಬಂದಿದ್ದೇವೆ. ಈ ಒಂದು ಹೊಸ ವ್ಯವಸ್ಥೆಯಲ್ಲಿ ಸಾಕಷ್ಟು ಮೋಸಗಳು, ಅನ್ಯಾಯಗಳು ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಗ್ರಾಹಕರ ದಿನಾಚರಣೆ ಆಚರಿಸುವ ಮೂಲಕ ಗ್ರಾಹಕರಿಗೆ ಅರಿವು, ತಿಳುವಳಿಕೆ ನೀಡುವ ಜತೆಗೆ ಗ್ರಾಹಕರು ತಮ್ಮ ಹಕ್ಕುಗಳನ್ನು ಯಾವ ರೀತಿಯಾಗಿ ರಕ್ಷಣೆ ಮಾಡಬೇಕು ಎಂಬುವುದರ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಅವರು ಮಾತನಾಡಿ, ಇಂದು ಅಂಗೈಯಲ್ಲೇ ಅಂಗಡಿಯಿದೆ. ಅಂದರೆ ಅಂಗೈಯಲ್ಲಿರುವ ಮೊಬೈಲೇ ಅಂಗಡಿಯಾಗಿದ್ದು, ಪ್ರತಿಯೊಂದು ವಸ್ತುಗಳನ್ನು ಆನ್‍ಲೈನ್‍ನಲ್ಲಿಯೇ ಖರೀದಿಸಲು ಅವಕಾಶವಿದೆ. ಆದರೆ ಈ ರೀತಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಮೋಸವಾಗಿದೆ ಅಥವಾ ಅನ್ಯಾಯವಾಗಿದೆ ಎನಿಸಿದಲ್ಲಿ, ನ್ಯಾಯ ಪಡೆಯುವುದು ಪ್ರತಿಯೊಬ್ಬ ಗ್ರಾಹಕರ ಹಕ್ಕು. ಇದು ಸುಲಭವಾಗಿ ದೊರೆಯದಿದ್ದಲ್ಲಿ, ಗ್ರಾಹಕ ವ್ಯವಹಾರಗಳ ಆಯೋಗ ಅಂತಹವರಿಗೆ ನ್ಯಾಯ ಒದಗಿಸಿಕೊಡಲಿದೆ ಎಂದರು.
ಸೈಬರ್ ತಾಣದಲ್ಲಿ ಗ್ರಾಹಕರ ಸುರಕ್ಷತೆ ಎಂಬ ವಿಷಯದ ಕುರಿತು ಸಿ.ಇ.ಎನ್.ಪೊಲೀಸ್ ಸ್ಟೇಷನ್‍ನ ಯಶೋಧ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರದಲ್ಲಿ ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕಾನೂನು ಮಾಪಾನ ಶಾಸ್ತ್ರ ಇಲಾಖೆಯ ಹಿರಿಯ ನಿರೀಕ್ಷಕ ರಾಗ್ಯಾ ನಾಯ್ಕ್, ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್, ನಾಗೇಶ್, ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ, ಭಾರತೀಯ ಮಾನಕ ಬ್ಯುರೋ ಸಂಪನ್ಮೂಲ ವ್ಯಕ್ತಿ ಸುರೇಶ್ ರಾವ್ ಸೇರಿದಂತೆ ಮತ್ತಿತರರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading