ಚಿತ್ರದುರ್ಗ ಫೆ. 19
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಳ್ಳಕೆರೆಯ ಬಸ್ ನಿಲ್ದಾಣದಲ್ಲಿನ ಮಳಿಗೆಯಲ್ಲಿ, ನಿಗಮದ ಆರ್ಥಿಕ ಹಿತದೃಷ್ಟಿಯಿಂದ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿರುತ್ತದೆ ಎಂದು ಕೆಎಸ್ಆರ್ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.
ಚಳ್ಳಕೆರೆ ಬಸ್ ನಿಲ್ದಾಣದಲ್ಲಿರುವ ಮಳಿಗೆ ಸಂಖ್ಯೆ 24 ರಲ್ಲಿ, ವ್ಯಾಪಾರಸ್ಥರಿಂದ ಸರ್ಕಾರಿ ಮಳಿಗೆಗಳ ವಿರೂಪ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಚಳ್ಳಕೆರೆ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆ ಸಂಖ್ಯೆ 54, ಜನರಲ್ ಸ್ಟಾಲ್ ಕಳೆದ 2020 ರ ಜನವರಿಯಿಂದ 2023 ರ ಸೆಪ್ಟಂಬರ್ ವರೆಗೂ ಖಾಲಿ ಉಳಿದಿತ್ತು. ವಾಣಿಜ್ಯ ಮಳಿಗೆ ವರ್ಷಗಟ್ಟಲೆ ಖಾಲಿ ಇರುವ ಬಗ್ಗೆ ಸರ್ಕಾರಿ ಲೆಕ್ಕ ಪರಿಶೋಧಕರು, ಆಡಿಟ್ ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಮಳಿಗೆಯು ಬಸ್ ನಿಲ್ದಾಣದ ಅಂಕಣದಿಂದ ದೂರವಿದ್ದು, ವ್ಯಾಪಾರ ವೃದ್ಧಿಸುವ ಸಲುವಾಗಿ ಉತ್ತರ ದಿಕ್ಕಿಗೆ ಹೆಚ್ಚುವರಿ ಬಾಗಿಲನ್ನು ಆಯ್ಕೆದಾರರ/ ಬಿಡ್ದಾರರ ಸ್ವಂತ ಖರ್ಚಿನಲ್ಲಿ ನಿಗಮದ ಕಟ್ಟಡಕ್ಕೆ ಹಾನಿಯಾಗದಂತೆ ಹಾಗೂ ಮೂಲ ಕಟ್ಟಡದ ಸ್ವರೂಪಕ್ಕೆ ಧಕ್ಕೆಯಾಗದಂತೆ ವಿಭಾಗದ ಕಾಮಗಾರಿ ಅಭಿಯಂತರರ ಸಲಹೆ ಪಡೆದು, ಅವರ ಮೇಲ್ವಿಚಾರಣೆಯಲ್ಲಿಯೇ ಮಳಿಗೆಗೆ ರೋಲಿಂಗ್ ಶೆಟರ್ ಅನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿರುತ್ತದೆ.
ನಿಗಮದ ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಆಯ್ಕೆದಾರರ / ಬಿಡ್ದಾರರ ಕೋರಿಕೆಯಂತೆ ಮಳಿಗೆಯಲ್ಲಿನ ಕಾಮಗಾರಿ ಕೈಗೊಳ್ಳಲಾಗಿರುತ್ತದೆ ಎಂದು ಕೆಎಸ್ಆರ್ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಅವರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.