February 19, 2026
FB_IMG_1771508107374.jpg

ಚಿತ್ರದುರ್ಗ ಫೆ.19:
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಇದೇ ಫೆಬ್ರವರಿ 20 ರಿಂದ 22 ರವರೆಗೆ ಮೂರು ದಿನಗಳ ಕಾಲ 33ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ನಗರದ ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ 33ನೇ ಫಲ-ಪುಷ್ಪ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಹೊರಮಠ, ಒಳಮಠ ದೃಶ್ಯ ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿ, ಸಾಹಿತಿ ಬಿ.ಎಲ್. ವೇಣು, ಜಾನೂರ್ ಕಲಾಕೃತಿಗಳು, ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಮರಳು ಕಲೆ ಪ್ರದರ್ಶನ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲುಮರದ ತಿಮ್ಮಕ್ಕ ಕಲಾಕೃತಿಗಳು 33ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಆಗಲಿದೆ ಎಂದು ತಿಳಿಸಿದರು.
ಜಿಲ್ಲಾ ಫಲ-ಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನೂ ಸಹ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ:
*********** ಪಂಚಗಣಾಧೀಶ್ವರರಲ್ಲೊಬ್ಬರಾದ ಶ್ರೀ ತಿಪ್ಪೇರುದ್ರಸ್ವಾಮಿ (ಸುಮಾರು 15-16 ನೇ ಶತಮಾನ) ಕರ್ನಾಟಕದ ಹಲವು ಭಾಗಗಳಲ್ಲಿ ಸಂಚರಿಸಿ ಪಣಿಯಪ್ಪನೆಂಬ ಶಿವಭಕ್ತನ ಇಚ್ಛೆಯಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ನೆಲಸಿದ ಇವರು ಪ್ರಸಿದ್ದ ಹಿಂದು ಆಧ್ಯಾತ್ಮಿಕ ಗುರು, ಸಮಾಜ ಸುಧಾರಕರು ಹಾಗೂ ಪವಾಡ ಪುರುಷರು. ಹಿಂದು-ಮುಸ್ಲೀಂ ಭಕ್ತರಿಂದ ಪೂಜಿಸಲ್ಪಡುವ ಇವರು “ಮಾಡಿದಷ್ಟು ನೀಡು ಭಿಕ್ಷೆ” ಎಂಬ ತತ್ವ ಭೋದಿಸಿ ಇವರು ಹಿರೇಕೆರೆ, ಚಿಕ್ಕಕೆರೆ ಮೊದಲಾದ ಐದು ಕೆರೆಗಳನ್ನು ಕಟ್ಟಿಸಿ ರೈತರ ಪಾಲಿನ ಭಗೀರಥ ಎನ್ನಿಸಿಕೊಂಡರು. ಇವರು ಹಲವು ಪವಾಡಗಳನ್ನು ಮೆರೆದಿದ್ದಾರೆ. ಇಂತಹ ಮಹಾನ್ ಸಂತರು ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆಸಿ ಸಮಾಜ ಸುಧಾರಣೆ ಮತ್ತು ಭಕ್ತರ ಕಷ್ಟಗಳನ್ನು ನೀಗುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಶಕ್ತಿ ಕೇಂದ್ರವಾಗಿರುವ ಹೊರಮಠ, ಒಳಮಠದ ದೃಶ್ಯವನ್ನು ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿಗಳನ್ನು ಫಲ ಪುಷ್ಪ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ.
“ನಮ್ಮ ವೇಣು” :
**********ಡಾ.ಬಿ.ಎಲ್ ವೇಣು ಕಥೆಗಾರರಾಗಿ ಮತ್ತು ಚಲನಚಿತ್ರ ಸಂಭಾಷಣೆಕಾರರಾಗಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದು, ಇವರು ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದವರಾಗಿದ್ದು, ಚಿತ್ರದುರ್ಗದ ಸಾಹಿತ್ಯ ಪ್ರೇಮಿಗಳ ಕಣ್ಮಣಿಯಾಗಿರುತ್ತಾರೆ. ಇದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿರುತ್ತದೆ. ಡಾ. ಬಿ.ಎಲ್ ವೇಣುರವರ ಪೂರ್ಣ ಹೆಸರು ಬಿ.ಎಲ್.ವೇಣು ಗೋಪಾಲ. ಚಿತ್ರದುರ್ಗದಲ್ಲಿ 1945 ರ ಮೇ 27 ರಂದು ಜನಿಸಿದರು ತಂದೆ ವೃತ್ತಿ ರಂಗಭೂಮಿ ನಟರಾಗಿದ್ದ ಲಕ್ಷ್ಮಯ್ಯ ತಾಯಿ ಸುಶೀಲಮ್ಮ ಹಾರ್ಮೋನಿಯಂ ವಾದಕಿ ಆಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಕಥಾ ಸಂಕಲನಗಳು-14, ಮಿನಿ ಕಾದಂಬರಿಗಳು-8, ಕಾದಂಬರಿಗಳು-34, ನಾಟಕಗಳು-5, ಐತಿಹಾಸಿಕ ಕಾದಂಬರಿಗಳು-8, ಅಂಕಣ ಬರಹಗಳ ಸಂಕಲನಗಳು-4, ಆತ್ಮಕಥೆ-1 ಒಟ್ಟು ಸಾಹಿತ್ಯ ಕೃತಿಗಳು-74. ಪ್ರಶಸ್ತಿಗಳಲ್ಲಿ ಮುಖ್ಯವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2005), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ(2007), ಕುವೆಂಪು ವಿ. ವಿ ಗೌರವ ಡಾಕ್ಟರೇಟ್, ಅಲ್ಲದೇ ಅ.ನ.ಕೃ. ಪ್ರಶಸ್ತಿ ಮಾಸ್ತಿ ಪ್ರಶಸ್ತಿ , ಬರಗೂರು ಪ್ರಶಸ್ತಿ ಇನ್ನೂ ಮುಂತಾದ ಹಲವಾರು ಪ್ರಶಸ್ತಿಗಳನ್ನು ಹಾಗೂ ಇತ್ತೀಚಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ (2022) ಹಾಗೂ ರಾಜವೀರ ಮದಕರಿ ಪ್ರಶಸ್ತಿ (2024) ಪಡೆದಿರುತ್ತಾರೆ.
ಸಿನಿಮಾ ಕ್ಷೇತ್ರದಲ್ಲಿ 8 ಚಿತ್ರಕಥೆ ರಚನೆ, 66 ಸಂಭಾಷಣೆ ರಚಿಸಿದ ಚಲನ ಚಿತ್ರಗಳು, ಶತದಿನ ಕಂಡ ಚಿತ್ರಗಳು 8 (ಪರಾಜಿತ, ಪ್ರೇಮ ಪರ್ವ, ಪೂವಿಳಂಗು (ತಮಿಳು), ಪ್ರೀತಿ ವಾತ್ಸಲ್ಯ, ಒಲವಿನ ಉಡುಗೊರೆ, ದೇವ, ವೀರಪ್ಪ ನಾಯಕ, ಆಟೋ ಶಂಕರ್). ಇವರ 19 ಕಾದಂಬರಿಗಳು ಚಲನಚಿತ್ರಗಳಾಗಿರುತ್ತವೆ ಚಿತ್ರದುರ್ಗದವರೇ ಆದ ಡಾ.ಬಿ.ಎಲ್ ವೇಣುರವರಿಗೆ ಸಂಭ್ರಮದ ಗೌರವ ಸಮರ್ಪಣೆಯ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ.
ಜಾನೂರ್ ಕಲಾಕೃತಿಗಳು:
************ಜಾನೂರು ಕಲೆಯೂ ಇಂಡೊನೇಷ್ಯಾದಲ್ಲಿ ಜಾನೂರು ಕೂನಿಂಗ್ ಎಂದು ಪರಿಚಿತವಾಗಿರುತ್ತದೆ. ಜಾನೂರು ಎಂದರೆ ತೆಂಗಿನ ಗರಿ, ಕೂನಿಂಗ್ ಎಂದರೆ ಹಳದಿ ಇಂಡೊನೇಶ್ಯಾದ ಜಾವನೀಸ್ ಸಂಸ್ಕøತಿಯ ಪದ. ಈ ಕಲೆಯು ತೆಂಗಿನ ಎಲೆಗಳನ್ನು ಬಳಸಿ ಮಾಡುವ ಸಾಂಪ್ರದಾಯಿಕ ಕಲೆಯಾಗಿರುತ್ತದೆ ವಿಶೇಷವಾಗಿ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಹಸಿರು ಮತ್ತು ಹಳದಿ ಎಲೆ ಬಣ್ಣಗಳನ್ನು ಬಳಸಿ ವಿಶಿಷ್ಟ ವಿನ್ಯಾಸಗಳನ್ನು ರೂಪಿಸಲಾಗುತ್ತದೆ. ಈ ಕಲೆಯೂ ದಕ್ಷಿಣ ಭಾರತದ ಸಂಸ್ಕøತಿಯ ಅಲಂಕಾರಿಕ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಈ ಕಲೆಯನ್ನು ಪರಿಚಯಿಸುವ ವಿವಿಧ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.
ಮರಳು ಕಲೆ:
*********ಮರಳಿನ ಕಣಗಳನ್ನು ಬಳಸಿ ಅದ್ಭುತವಾದ ಶಿಲ್ಪಗಳನ್ನು ಮತ್ತು ಚಿತ್ರಗಳನ್ನು ರಚಿಸುವ ವಿಶಿಷ್ಟವಾದ ಕಲೆಯಾಗಿರುತ್ತದೆ. ಮರಳು ಮತ್ತು ನೀರನ್ನು ಬಳಸಿ ಯಾವುದೇ ಕೃತಕ ಅಂಟು ಪದಾರ್ಥಗಳಿಲ್ಲದೆ ಈ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಈ ಕಲೆಯು ಕೇವಲ ದೃಶ್ಯ ವೈಭವವಲ್ಲ, ತಾತ್ಕಾಲಿಕವಾಗಿದ್ದರೂ ನೋಡುಗರಿಗೆ ಅಧ್ಭುತ ಅನುಭವವನ್ನು ನೀಡುತ್ತದೆ. ಈ ಕಲೆಯನ್ನು ಪರಿಚಯಿಸುವ ಸಲುವಾಗಿ ಕೋಟೆಯ ದೃಶ್ಯ ಹಾಗೂ ಒನಕೆ ಓಬವ್ವ ಅವರ ಮರಳು ಕಲೆ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.
ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ: ನಾವು ತಿನ್ನುವ ಪ್ರತಿ ಮೂರು ತುತ್ತುಗಳಲ್ಲಿ ಒಂದು ತುತ್ತು ಪರಾಗಸ್ಪರ್ಶಕಗಳ ವಿಶೇಷ ಕೊಡುಗೆಯಾಗಿರುತ್ತದೆ. ಜಗತ್ತಿನಲ್ಲಿ ಬೆಳೆಯುವ ಬೆಳೆಗಳ ಉತ್ಪಾದನೆಯೂ ಶೇ.80ರಷ್ಟು ಉತ್ಪಾದನೆಯು ಪರಾಗಸ್ಪರ್ಶಕಗಳ ಮೇಲೆ ಅವಲಂಭಿತವಾಗಿರುತ್ತದೆ. ಪ್ರಪಂಚದ ಆಹಾರ ಉತ್ಪಾದನೆಯಲ್ಲಿ ಶೇ.35 ರಷ್ಟು ಪರಾಗಸ್ಪರ್ಶಕಗಳ ಕೊಡುಗೆಯಾಗಿರುತ್ತದೆ. ಪ್ರಪಂಚದ ವಾರ್ಷಿಕ ಆರ್ಥಿಕ ಮೌಲ್ಯವು ಸುಮಾರು 71 ಲಕ್ಷ ಕೋಟಿ ಆದಾಯ ಇರುತ್ತದೆ. ಇದು ನಮ್ಮ ದೇಶದ ವಾರ್ಷಿಕ ಬಡ್ಜಟ್ ಗಿಂತ ಹೆಚ್ಚಾಗಿರುತ್ತದೆ. ಆದುದರಿಂದ ನಾವು ಈ ಪರಾಗಸ್ಪರ್ಶಕಗಳಿಗೆ ಕೃತಜ್ಞರಾಗಿರಬೇಕಲ್ಲವೇ. ಹವಮಾನ ಬದಲಾವಣೆ, ರಾಸಾಯನಿಕ ಕೀಟ ನಾಶಕಗಳ ಬಳಕೆ. ಪರಿಸರ ಮಾಲಿನ್ಯ, ಆವಾಸ ಸ್ಥಾನಗಳ ಅಳಿವು ಈ ಕಾರಣಗಳಿಂದಾಗಿ ಪರಾಗಸ್ಪರ್ಶಕಗಳ ಅವನತಿ ಉಂಟಾಗುತ್ತಿದೆ. ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಹೂವು, ಜೇನು ನೊಣಗಳ ಕಲಾಕೃತಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಲಾಗುವುದು.
ಸಾಲುಮರದ ತಿಮ್ಮಕ್ಕ ರವರ ಕಲಾಕೃತಿ:
*************** ಸಾಲುಮರದ ತಿಮ್ಮಕ್ಕ (1911 ರಿಂದ 2025) ಕರ್ನಾಟಕದ ಮಹಾನ್ ಪರಿಸರ ಪ್ರೇಮಿಯಾಗಿದ್ದು, ತನಗೆ ಮಕ್ಕಳಿಲ್ಲದ ಕಾರಣಕ್ಕೆ ಆಲದ ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ವೃಕ್ಷಮಾತೆಯಾಗಿ ಪ್ರಸಿದ್ದರಾದವರು. ಸಾಲುಮರದ ತಿಮ್ಮಕ್ಕ ಮತ್ತು ಅವರ ಪತಿ ಚಿಕ್ಕಯ್ಯ ರವರು ರಾಮನಗರ ಜಿಲ್ಲೆಯ ಹೆದ್ದಾರಿಯ ಬದಿಯಲ್ಲಿ ಆಲದ ಸಸಿಗಳನ್ನು ನೆಡಲು ಪ್ರಾರಂಭಿಸಿದರು, ಬಡತನವಿದ್ದರು, ದಿನಗೂಲಿ ಕೆಲಸದಿಂದ ಬಂದ ಅಲ್ಪ ಹಣದಲ್ಲಿ ಸಸಿಗಳನ್ನು ನೆಟ್ಟು, ಮುಳ್ಳಿನ ಬೇಲಿ ಹಾಕಿ ದೂರದಿಂದ ನೀರು ಹೊತ್ತು ತಂದು ಪೋಷಿಸಿದರು. ಅವರು ಸುಮಾರು 8,000 ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.
ಸಾಲು ಮರದ ತಿಮ್ಮಕ್ಕ ರವರ ಅಸಾಮಾನ್ಯ ಪರಿಸರ ಸೇವೆಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ (2019) ಮತ್ತು ರಾಷ್ಟ್ರೀಯ ನಾಗರೀಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಸಾಲು ಮರದ ತಿಮ್ಮಕ್ಕ ರವರು ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯಮಾಡಿದ ತಿಮ್ಮಕ್ಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿರುತ್ತಾರೆ. 114 ವರ್ಷಗಳ ಕಾಲ ಸುಧೀರ್ಘ ಬದಕು ಕಂಡ ಸಾಲುಮರದ ತಿಮ್ಮಕ್ಕ ರವರು ನವಂಬರ್ 14, 2025 ರಂದು ಧೈವಾಧೀನರಾದರು. ಅವರ ಅದಮ್ಯ ಪರಿಸರ ಪ್ರೇಮ ಮತ್ತು ಸೇವೆ ನಮ್ಮಗೆಲ್ಲರಿಗೂ ಚಿರಸ್ಮರಣಿಯಾಗಿರುತ್ತದೆ. ಆದುದರಿಂದ ಅವರ ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು.
ಇದರ ಜೊತೆಗೆ ಜಟಕಾ ಬಂಡಿ (ಟಾಂಗಾ), ಹುಡುಗ, ಹುಡುಗಿ, ಟಾಂಗಾ ಹಾಗೂ ಕುದುರೆ ಕಲಾಕೃತಿಗಳಿಗೆ ಹೂವಿನಿಂದ ಅಲಂಕಾರ ಮಾಡಿ ವಿಶೇಷವಾಗಿ ಪ್ರದರ್ಶಿಸಲಾಗುವುದು. ಚಿತ್ರದುರ್ಗ ಕೋಟೆಯ ಆಕರ್ಷಣೆಗಳಲ್ಲಿ ಒಂದಾದ ಉಯ್ಯಾಲೆ ಕಂಬದ ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು. ಕ್ರಿಕೆಟ್ ಪ್ರಿಯರಿಗೆ ಮನರಂಜನೆಗೋಸ್ಕರ ಪ್ರಸ್ತುತ ನಡೆಯುತ್ತಿರುವ ಟಿ-20 ವಲ್ರ್ಡ್ ಕಪ್‍ನಲ್ಲಿ ಆಡುತ್ತಿರುವ ನಮ್ಮ ಭಾರತ ತಂಡಕ್ಕೆ ಗೆಲುವು ಸಾಧಿಸಲು ಶುಭಾಷಯ ಕೋರುವ ಪರಿಕಲ್ಪನೆಯ ಉದ್ದೇಶದಿಂದ ತಂಡದ ಸದಸ್ಯರ ಮುಖಗಳ ಕಲಾಕೃತಿಗಳನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. ಜಿಲ್ಲೆಯ ರೈತರು ಬೆಳೆದಿರುವ ಹೂ, ತರಕಾರಿ, ಹಣ್ಣು, ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಸುಮಾರು 500 ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿರುತ್ತದೆ. ಉತ್ತಮವಾಗಿ ಬೆಳೆದ ರೈತರಿಗೆ ಬಹುಮಾನಗಳನ್ನು ಕೊಡುವುದರಿಂದ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 70 ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವಿನಗಿಡಗಳನ್ನು ಬೆಳಯಲಾಗಿದೆ. ಮೆಲಾಪೋಡಿಯಂ, ಕ್ಲಿಯೋಂ (ಸ್ಪೈಡರ್), ಹಾಲಿಯಾಕ್, ಗಾಕ್ಸೀನಿಯ, ಕೆಲಂಚಾ, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ, ಸಾಲ್ವಿಯಾ (ಕೆಂಪು, ನೀಲಿ, ಬಿಳಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ ಮಿಕ್ಸ್, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡುಲಾ, ಗಜೇನಿಯ ಮಿಕ್ಸ್ , ಪೆಂಟಾಸ್ ಮಿಕ್ಸ್, ಯುಪೋರ್ಬಿಯ ಮಿಲ್ಲಿ, ಬಿಗೋನಿಯಾ, ವಿಂಕಾ, ವರ್‍ಬೆನಾ ಇತ್ಯಾದಿ ವಿವಿಧ ಪುಷ್ಪ ಸಸಿಗಳು, 70 ಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನವು ಮುದ ನೀಡಲಿದೆ ಎಂದು ತಿಳಿಸಿದರು.
ಚಿತ್ರದುರ್ಗದ ಖ್ಯಾತ ಚಿತ್ರಕಲಾವಿದರಿಂದ ಅಕ್ರಾಲಿಕ್, ಜಲವರ್ಣ ಹಾಗೂ ಆಯಿಲ್ ಮಾಧ್ಯಮದ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ನೀರು ಹರಿಯುವಂತೆ ಇರುವ ಜಲಪಾತಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ. ಪ್ರದರ್ಶನದ ಅಂಗವಾಗಿ ನಗರದ ವಿವಿಧ ಶಾಲೆಗಳ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತೇಜನ ನೀಡಲಾಗುವುದು. ನಗರದ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ, ಮನೆಯ ಆವರಣದಲ್ಲಿ ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೋಡಣೆ ಮತ್ತು ಮನೆ, ಸಂಸ್ಥೆಗಳ ಆವರಣದಲ್ಲಿ ಉದ್ಯಾನವನಗಳನ್ನು ನಿರ್ಮಿಸಿದವರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪದ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸಾಮಾನ್ಯವಾಗಿ ಫೆಬ್ರವರಿ ಮೊದಲ ವಾರದಲ್ಲಿ ನಡೆಯುತ್ತಿದ್ದ ಫಲ-ಪುಷ್ಪ ಪ್ರದರ್ಶನವು ಈ ಬಾರಿ ಚಳಿಗಾಲಯದ ಅವಧಿ ಹೆಚ್ಚಾಗಿದ್ದ ಕಾರಣ ಎರಡು ವಾರ ತಡವಾಗಿ ಆರಂಭವಾಗಿದೆ. ಚಿತ್ರದುರ್ಗದ ಜನತೆ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಜನರು ತಮ್ಮ ಮಕ್ಕಳೊಂದಿಗೆ ವಾರಾಂತ್ಯದಲ್ಲಿ ಈ ಸುಂದರ ಫಲ-ಪುಷ್ಪ ಪ್ರದರ್ಶನ ವೀಕ್ಷಿಸಲು ಬರಬೇಕು ಎಂದು ಜಿ.ಪಂ ಸಿಇಒ ಡಾ. ಆಕಾಶ್ ಮನವಿ ಮಾಡಿದರು.
ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ ಮಾತನಾಡಿ, ಜಿಲ್ಲೆಯ ಸುಮಾರು 4898 ರೈತರು ಅಡಿಕೆ, ತೆಂಗು ಮತ್ತು ಮಾವು ಬೆಳೆಗಳಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿಯ ವಿಮೆ ನೋಂದಾಯಿಸಿಕೊಂಡಿದ್ದರು. ವಿಮೆಗೆ ಸಂಬಂಧಿಸಿದಂತೆ ರೈತರಿಗೆ ಒಟ್ಟು 15 ಕೋಟಿ ರೂ. ಪಾವತಿಸಬೇಕಿದೆ. ಆದರೆ ‘ಕ್ಷೇಮ’ ಇನ್ಶೂರೆನ್ಸ್ ಕಂಪನಿಯು ರಾಜ್ಯದ 11 ಜಿಲ್ಲೆಗಳಲ್ಲಿ ವಿಮೆ ಹಣ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿದ್ದಾರೆ. ಇದರ ಫಲವಾಗಿ, ಇನ್ಶೂರೆನ್ಸ್ ಕಂಪನಿಯು ಲಿಖಿತವಾಗಿ ಉತ್ತರಿಸಿದ್ದು, ಮುಂದಿನ ಎರಡು ವಾರದಲ್ಲಿ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡುವುದಾಗಿ ತಿಳಿಸಿದೆ. ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲು ತೋಟಗಾರಿಕಾ ಇಲಾಖೆಯ ವತಿಯಿಂದ ಫಲ-ಪುಷ್ಪ ಪ್ರದರ್ಶನದಲ್ಲಿ ವಿಶೇಷ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಬೆಂಗಳೂರಿನ ಲಾಲ್‍ಬಾಗ್ ಮಾದರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈರುಳ್ಳಿ, ತೆಂಗು ಮತ್ತು ಅಡಿಕೆ ಬೆಳೆಗಳಲ್ಲಿ ಅಂತರಬೆಳೆ ಹಾಗೂ ಆಧುನಿಕ ತಂತ್ರಜ್ಞಾನದ ಬಗ್ಗೆ ಕೃಷಿ ವಿಜ್ಞಾನಿಗಳು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ, ರಾಜ್ಯವಲಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ತೋಟಯ್ಯ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಗಿರೀಶ್, ಖಜಾಂಚಿ ನಾಗರಾಜ್ ಬೇದ್ರೆ, ಹಿರಿಯ ಸಲಹೆಗಾರ ಜಿ.ಎಸ್.ಉಜ್ಜೀನಪ್ಪ, ನಿರ್ದೇಶಕರಾದ ಸುಮನಾ ಅಂಗಡಿ, ಸತ್ಯನಾರಾಯಣ ನಾಯ್ಡು, ಶ್ವೇತಾ ವಿಶ್ವನಾಥ್, ರೀನಾ ವೀರಭದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.

==========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading