ಹಿರಿಯೂರು:
ಪ್ರೊ|| ಬಿ.ಕೃಷ್ಣಪ್ಪನವರ ಚಿಂತನೆಗಳು ಹಾಗೂ ಹೋರಾಟ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದ್ದು, ಅವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಹೋರಾಟಗಾರರು ಉಳಿಸಿಕೊಳ್ಳಬೇಕು ಎಂಬುದಾಗಿ ಜನತಂತ್ರ ಉಳಿಸಿ ಆಂದೋಲನದ ರಾಜ್ಯ ಸಂಚಾಲಕರಾದ ಪ್ರೊಫೆಸರ್ ಸಿ.ಕೆ.ಮಹೇಶ್ ಅವರು ಅಭಿಮತ ವ್ಯಕ್ತಪಡಿಸಿದರು.
ನಗರದ ನೆಹರು ಆಂದೋಲನ ಕರ್ನಾಟಕ ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ಜನತಂತ್ರ ಉಳಿಸಿ ಆಂದೋಲನ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಜನತಂತ್ರ ಸವಾಲುಗಳು ಮತ್ತು ಪರಿಹಾರಗಳು ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.
ಪ್ರೊ.ಕೃಷ್ಣಪ್ಪನವರು ದಲಿತ ಚಳುವಳಿಯನ್ನು ಮೇರುಮಟ್ಟದಲ್ಲಿ ರೂಪಿಸಿ, ಜನತೆಗೆ ಅರಿವು ಮೂಡಿಸಿದ ಮಹಾನ್ ನೇತಾರರಾಗಿದ್ದು, ಅವರು ಉತ್ತರ ಭಾರತದಲ್ಲಿ ಚಳವಳಿಯು ಆರಂಭಗೊಳ್ಳುವ ಪೂರ್ವದಲ್ಲೇ ದಕ್ಷಿಣ ಭಾರತ ಈ ನೆಲದಲ್ಲಿ ಬಹಳ ದೊಡ್ಡ ಸಂಘಟನೆಯನ್ನು ತಾತ್ವಿಕ ನೆಲೆಯಲ್ಲಿ ಕಟ್ಟಿ ಸರ್ಕಾರಗಳನ್ನು ಪ್ರಶ್ನಿಸುವ ಮೂಲಕ ಹಕ್ಕು ಅಧಿಕಾರಗಳನ್ನು ಪಡೆಯಬಹುದೆಂಬ ಜಾಗೃತಿಯನ್ನು ಮೂಡಿದ್ದರು.
ಪ್ರೊ.ಕೃಷ್ಣಪ್ಪನವರಂತೆ ಇಂದಿನ ಹೋರಾಟಗಾರರು ಜನತಂತ್ರವನ್ನು ಸರಿದಾರಿಗೆ ತರಲು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಮತಗಳಿಗೆ ಮೌಲ್ಯವನ್ನು ತಂದುಕೊಂಡಾಗ ನಿಸ್ಸಂದೇಹವಾಗಿ ಜನತಂತ್ರವನ್ನು ಉಳಿಸುವಂತಹ ಕಾರ್ಯವಾಗುತ್ತದೆ, ಈ ನಿಟ್ಟಿನಲ್ಲಿ ಇಂದಿನ ಹೋರಾಟಗಾರರು ಜಾಗೃತರಾಗಬೇಕು ಎಂಬುದಾಗಿ ಅವರು ಹೇಳಿದರು.
ಸಮಾರೋಪ ಸಮಾರಂಭದ ನಿರ್ಣಯ ಮತ್ತು ಕ್ರಿಯಾಯೋಜನೆಗಳನ್ನು ಮಂಡಿಸಿ ಮಾತನಾಡಿದ ಹಿರೇಹಳ್ಳಿ ಮಲ್ಲಿಕಾರ್ಜುನ್ ರವರು ಸಂವಿಧಾನವೇ ಪ್ರಜಾಸತ್ತೆಗೆ ಜೀವಾಳವಾಗಿದ್ದು, ಈ ಸಂವಿಧಾನವು ಜನತೆಯ ಶಕ್ತಿಯಾಗಿದ್ದು, ಬಂಡವಾಳಶಾಹಿಗಳು ಕೋಮುವಾದಿಗಳು ಅಪೋಷನ ತೆಗೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಹಿಂದುಳಿದ ದಲಿತ ಮತ್ತು ಮಹಿಳೆ ವರ್ಗಗಳಿಗೆ ಜನತಂತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಿ ಮತಮೌಲ್ಯವನ್ನು ತಂದುಕೊಡದೆ ಹೋದರೆ ಜನತಂತ್ರವನ್ನು ಇತ್ತೀಚಿನ ಚುನಾವಣೆಗಳಿಂದ ಉಳಿಸಲು ಸಾಧ್ಯವಿಲ್ಲ.
ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಮತಗಳು ಹಣಕ್ಕಾಗಿ ಬಿಕಾರಿಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸೋಲುಗೆಲುವುಗಳಾಚೆ ಒಂದು ಮೇಲ್ಪಂಕ್ತಿಯ ಮಾದರಿಯನ್ನು ರೂಪಿಸಿಕೊಡುವಂತಹ ಗುರುತರ ಜವಾಬ್ದಾರಿ ಅಂಬೇಡ್ಕರ್ ಅವರ ಅನುಯಾಯಿಗಳ ಹೆಗಲ ಮೇಲಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಶಂಕರ್, ನವಯಾನ ಬುದ್ಧ ದಮ್ಮ ಸಂಘದ ಟಿ.ರಾಮು, ಬಾಲೇನಹಳ್ಳಿ ರಾಮಣ್ಣ, ರುದ್ರಮುನಿ, ಹುಚ್ಚವನಹಳ್ಳಿವೆಂಕಟೇಶ್, ತಿಪ್ಪೇಸ್ವಾಮಿಗೊಲ್ಲಹಳ್ಳಿ, ಎಸ್.ಜಿ.ರಂಗಸ್ವಾಮಿಸಕ್ಕರ, ಡಾ.ಶಿವಣ್ಣರಂಗೇನಹಳ್ಳಿ, ಆರ್.ಶಿವಶಂಕರ್ ಸೀಗೆಹಟ್ಟಿ, ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.