ಚಿತ್ರದುರ್ಗಜ.19:
ಪೋಷಕರು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡಿ ಅವರ ಭವಿಷ್ಯ ಹಾಳು ಮಾಡಬೇಡಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಬಿ ವಿ ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಪಿಚ್ಚಾರಹಟ್ಟಿ ಸುಲ್ತಾನಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ತಾಯಂದಿರುಗಳಿಗೆ ಮಾಹಿತಿ ನೀಡುತ್ತಾ ಅವರು ಮಾತನಾಡಿದರು.
ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಲ್ಲಿ 1098ಕ್ಕೆ ಕರೆ ಮಾಡಿರಿ. ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಮದುವೆಯ ವಯಸ್ಸು ಹೆಣ್ಣುಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹ ಕುರಿತು ಮಾಹಿತಿ ಶಿಕ್ಷಣ ನೀಡಲಾಗುತ್ತಿದ್ದು, ತಪ್ಪಿತಸ್ಥರಿಗೆ ವಿವಾಹದಲ್ಲಿ ಪಾಲ್ಗೊಂಡವರಿಗೆ ಜೈಲು ಅಥವಾ ದಂಡ ವಿಧಿಸಲಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ, ಯಾರೊಬ್ಬರ ಒತ್ತಡದಿಂದ ಅಥವಾ ತಾವೇ ಇಚ್ಛೆಪಟ್ಟು ಅಂಗಾಂಗಗಳ ಬೆಳವಣಿಗೆ ದೇಹದಾಢ್ಯತೆ ಇಲ್ಲದ, ಗರ್ಭಕೋಶ ಬೆಳವಣಿಗೆ ಇಲ್ಲದ ಬಾಲ್ಯಾವಸ್ಥೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರೆ ರಕ್ತಹೀನತೆಯಿಂದ ಹೆರಿಗೆಯ ಸಮಯದಲ್ಲಿ ತಾಯಿಗೆ ರಕ್ತಸ್ರಾವ, ಕಡಿಮೆ ತೂಕದ ಶಿಶುಗಳ ಜನನ, ದಿನ ತುಂಬದ ಹೆರಿಗೆ, ಗಂಡಾಂತರ ಸಮಸ್ಯೆ ಎದುರಾಗುತ್ತವೆ ಎಂದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆಟ-ಪಾಠದೊಂದಿಗೆ ಬಾಲ್ಯವನ್ನು ಸಂಭ್ರಮಿಸಬೇಕಾಗಿರುವ ಬಾಲಕಿಯರು ಶಿಕ್ಷಣದ ಕೊರತೆ, ಬಡತನ ಅಥವಾ ಮೊಬೈಲ್ ದುರ್ಬಳಕೆ ಹಾಗೂ ಅನ್ಯರ ತಪ್ಪಿನಿಂದ, ಗರ್ಭಧರಿಸಿ ಭಾರ ಹೊತ್ತುಕೊಳ್ಳುತ್ತಿದ್ದು, ಏನು ತಿಳಿಯದ ವಯಸ್ಸಿನಲ್ಲಿ ಶಿಶುವನ್ನು ಲಾಲನೆ ಪಾಲನೆ ಮಾಡುವಂತಾಗುತ್ತದೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ನಮ್ಮ ಮನೆಯ ಮಗಳನ್ನು ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮಾಡಿ ಸಾವಿನದವಡೆಗೆ ನಾವೇ ದೂಡಿದಂತಾಗುತ್ತದೆ ಎಂದರು.
ಕಳೆದ ವರ್ಷದಲ್ಲಿ ಸುಲ್ತಾನಿಪುರ ಗ್ರಾಮದಲ್ಲಿ ನಾಲ್ಕು ಜನ ಬಾಲ ಗರ್ಭಿಣಿಯರು ದಾಖಲಾಗಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಯಾವುದೇ ಬಾಲ್ಯ ವಿವಾಹ ಆಗದಂತೆ ಸಾರ್ವಜನಿಕರು ನಿಗಾವಹಿಸಿ ಬಾಲ ಗರ್ಭಿಣಿಯರಾಗದಂತೆ ಎಚ್ಚರವಹಿಸಿಕೊಂಡು ಕುಟುಂಬ ಕಲ್ಯಾಣ ವಿಧಾನಗಳ ಸದ್ಭಳಕೆಯಿಂದ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ತಾಯಿ ಮಗುವಿನ ರಕ್ಷಣೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿಯ ಜೊತೆಗೆ ದೇಶ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಕುಚೇಲ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತೆ ಕಲ್ಪನಾ, ಗರ್ಭಿಣಿಯರು ಸೇರಿದಂತೆ 45ಕ್ಕೂ ಹೆಚ್ಚು ಸಾರ್ವಜನಿಕ ತಾಯಂದಿರು, ಗ್ರಾಮದ ಹಿರಿಯರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.