January 29, 2026
IMG-20251218-WA0219.jpg

ಚಿತ್ರದುರ್ಗ, ಡಿ.18:
ಪಂಡಿತ್ ಜವಾಹರಲಾಲ್ ನೆಹರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ಸ್ವಾತಂತ್ರ್ಯ ಹೋರಾಟಕ್ಕಾಗಿ ಬದುಕನ್ನೇ ಸಮರ್ಪಿಸಿ, ಜೈಲು ವಾಸ ಅನುಭವಿಸಿ, ಬ್ರಿಟಿಷರ ಗುಂಡಿಗೆ ಎದೆಕೊಟ್ಟು ಶಾಂತಿಯ ಮಾರ್ಗದಲ್ಲಿ ಹೋರಾಟ ನಡೆಸಿದ ಮಹಾನ್ ನಾಯಕರು. ಇಂತಹ ತ್ಯಾಗಮಯ ಕುಟುಂಬದ ವಿರುದ್ಧ ಬಿಜೆಪಿ ನಡೆಸುತ್ತಿರುವ ದ್ವೇಷದ ರಾಜಕಾರಣ ಸಂಪೂರ್ಣ ಅಸಮಂಜಸವಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.ಗುರುವಾರ ಜಿಲ್ಲಾ ಬಿಜೆಪಿ ಕಚೇರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮುತ್ತಿಗೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ದ್ವೇಷ ಹಾಗೂ ಸೇಡುತನ ಕೆಟ್ಟದ್ದು; ಅದು ಕೊನೆಗೆ ತನ್ನನ್ನೇ ಸುಡುತ್ತದೆ ಎಂಬ ಸತ್ಯವನ್ನು ಬಿಜೆಪಿ ಅರಿತುಕೊಳ್ಳಬೇಕು. ಆದರೆ ಅಧಿಕಾರದ ಮದ, ಸರ್ವಾಧಿಕಾರಿ ಧೋರಣೆ ಮತ್ತು ವಾಮಮಾರ್ಗದ ರಾಜಕಾರಣದ ಮೂಲಕ ಬಿಜೆಪಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ರಾಷ್ಟ್ರದ ಬಹುತೇಕ ತನಿಖಾ ಸಂಸ್ಥೆಗಳನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಂಡು ಪ್ರತಿಪಕ್ಷಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ವರ್ತನೆ ಬದಲಿಸದಿದ್ದರೆ ಜನರ ದಂಗೆ ಖಚಿತ ಎಂದು ಎಚ್ಚರಿಸಿದರು.ನೆಹರು ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ಆಂಗ್ಲರಿಂದ ಸಂಪನ್ಮೂಲ ಲೂಟಿ ಆಗಿದ್ದ ದೇಶದ ಪ್ರಥಮ ಪ್ರಧಾನಿಯಾಗಿ ನವಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕೈಗಾರಿಕೆ, ಶಿಕ್ಷಣ, ಆರೋಗ್ಯ, ಜಲಾಶಯ, ವಿಮಾನ ನಿಲ್ದಾಣಗಳಂತಹ ಮೂಲಭೂತ ಅಭಿವೃದ್ಧಿಗೆ ಅಡಿಪಾಯ ಹಾಕಿದ ನಾಯಕರ ಕುರಿತು ಹಾಗೂ ಇಂದಿರಾ ಗಾಂಧಿ ಕುಟುಂಬದ ತ್ಯಾಗವನ್ನು ಬಿಜೆಪಿ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ದೂರಿದರು.ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಅದರ ಅಭಿವೃದ್ಧಿಗೆ ನೆಹರು ಕುಟುಂಬ ಶ್ರಮಿಸಿದೆ. ಇದನ್ನೇ ಮಹಾಪರಾಧವೆಂದು ಬಿಂಬಿಸಿ ಸುಳ್ಳು ಪ್ರಕರಣ ದಾಖಲಿಸಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಲಾಗಿದೆ. ಆದರೆ ಈ ನಡೆಗೆ ನ್ಯಾಯಾಲಯ ಈಗಾಗಲೇ ಛಿಮಾರಿ ಹಾಕಿದೆ. ದ್ವೇಷದ ರಾಜಕಾರಣಕ್ಕೆ ಕೋರ್ಟ್ ಕಪಾಳಮೋಕ್ಷ ಮಾಡಿದ್ದರೂ ಬಿಜೆಪಿ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ಜನರ ಬದುಕು ಸುಧಾರಿಸಿ ದೇಶದ ಗಮನ ಸೆಳೆದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲೂ ಅಧಿಕಾರಕ್ಕೆ ಬರಲಿದೆ. ಆದರೂ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುವುದಿಲ್ಲ. ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಕರು, ಬಿಜೆಪಿ ರೀತಿ ಭಕ್ಷಕರು ಅಲ್ಲ ಎಂದರು.ಮತಗಳ್ಳತನ ಸೇರಿದಂತೆ ಜನಪರ ವಿಷಯಗಳಲ್ಲಿ ಧ್ವನಿಯೆತ್ತುತ್ತಿರುವ ರಾಹುಲ್ ಗಾಂಧಿಯನ್ನು ನೇರವಾಗಿ ಎದುರಿಸಲು ಆಗದೆ ಬಿಜೆಪಿ ವಾಮಮಾರ್ಗದಲ್ಲಿ ಸಾಗುತ್ತಿದೆ. ನ್ಯಾಯಾಲಯಗಳ ತೀರ್ಪುಗಳೇ ಬಿಜೆಪಿ ನಾಯಕರಿಗೆ ಸದಾ ಪಾಠ ಹೇಳುತ್ತಿವೆ. ಕೋರ್ಟ್ ಇರುವ ಕಾರಣವೇ ಇಂದು ಪ್ರತಿಪಕ್ಷಗಳು ಹಾಗೂ ಬಡ ಜನರ ಬದುಕು ಉಳಿದಿದೆ ಎಂದು ಹೇಳಿದರು.ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧದ ತನಿಖಾ ವರದಿಯನ್ನು ತಿರಸ್ಕರಿಸಿ ನ್ಯಾಯಾಲಯ ನೆಹರು ಕುಟುಂಬದ ಗೌರವವನ್ನು ರಕ್ಷಿಸಿದೆ. ಇನ್ನುಳಿದರೂ ಬಿಜೆಪಿ ಬುದ್ಧಿ ಕಲಿಯದೇ ದ್ವೇಷದ ರಾಜಕಾರಣ ಮುಂದುವರಿಸಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಕಾಂಗ್ರೆಸ್ ಕಾರ್ಯಕರ್ತರು ಎದ್ದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ನಾವು ಶಾಂತಿ ಮಾರ್ಗವನ್ನು ನಂಬುವವರು. ಅದಕ್ಕಾಗಿ ಶಾಂತಿಯುತ, ಪ್ರಜಾಪ್ರಭುತ್ವದ ಹಾದಿಯಲ್ಲಿ ಇಂದು ಎಚ್ಚರಿಕೆ ನೀಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಮುಖಭಂಗ ಉಂಟು ಮಾಡಿದ ಈ ಪ್ರಕರಣದ ಹೊಣೆ ಹೊತ್ತ ಸಚಿವರು ಹಾಗೂ ಷಡ್ಯಂತ್ರ ರೂಪಿಸಿದ ಬಿಜೆಪಿ ನಾಯಕರು ಕೂಡಲೇ ರಾಜೀನಾಮೆ ನೀಡಿ ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬಿಜೆಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸ್ ಸರ್ಪಗಾವಲು ತಡೆದಿತು. ಬಳಿಕ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ನಗರಸಭೆ ಸದಸ್ಯೆ ಮೀನಾಕ್ಷಿ, ಮಾಜಿ ಅಧ್ಯಕ್ಷರುಗಳಾದ ಸಿ.ಟಿ. ಕೃಷ್ಣಮೂರ್ತಿ, ಹೆಚ್. ಮಂಜಪ್ಪ, ಡಿ.ಎನ್. ಮೈಲಾರಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.ತ್ಯಾಗಮಯಿ ವಿರುದ್ಧ ಸೇಡುಮಹಾತ್ಮ ಗಾಂಧೀಜಿ ವಿಶ್ವಪೂಜ್ಯ ನಾಯಕರು. ಆದರೆ ಬಿಜೆಪಿ ನಾಯಕರಿಗೆ ಅವರ ಹೆಸರು ಸಹಿಸಿಕೊಳ್ಳಲು ಆಗುತ್ತಿಲ್ಲ. ಉದ್ಯೋಗ ಸೃಷ್ಟಿಗಾಗಿ ಜಾರಿಗೊಂಡ ನರೇಗಾ ಯೋಜನೆಯ ಹೆಸರನ್ನೇ ಬಳಸುವ ಕೆಟ್ಟ ರಾಜಕಾರಣ ಬಿಜೆಪಿ ಮಾಡುತ್ತಿದೆ. ತಾಕತ್ತು ಇದ್ದರೆ ಹೊಸ ಯೋಜನೆ ರೂಪಿಸಿ ತಮ್ಮದೇ ಹೆಸರು ಇಡಲಿ ಎಂದು ಆಂಜನೇಯ ಸವಾಲು ಹಾಕಿದರು.ಸುಳ್ಳು ದಾಖಲೆ ಸೃಷ್ಟಿಇಡಿ ಹಾಗೂ ಸಿಬಿಐಯನ್ನು ರಾಜಕೀಯ ದುರುಪಯೋಗಪಡಿಸಿ ಸುಳ್ಳು ದಾಖಲೆ ಸೃಷ್ಟಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಪ್ರಕರಣ ಹಾಕಲಾಗಿದೆ. ಈ ನಡೆಗೆ ನ್ಯಾಯಾಲಯ ತಡೆ ಹಾಕಿದೆ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಲಿ.– ಎಚ್. ಆಂಜನೇಯ, ಮಾಜಿ ಸಚಿವ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading