
ಹಿರಿಯೂರು:
ನಗರಸಭೆ ನೀಡಿರುವ ಪರವಾನಗಿಯಂತೆ ಕಟ್ಟಡಗಳನ್ನು ನಿರ್ಮಿಸಿದ್ದರೆ ಖಂಡಿತವಾಗಿ ಅಂತಹ ಕಟ್ಟಡಗಳ ಮಾಲೀಕರುಗಳಿಗೆ ಪರಿಹಾರವನ್ನು ಕೊಡಲಾಗುವುದು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಭರವಸೆ ನೀಡಿದರು.
ನಗರದಲ್ಲಿ ಗುರುವಾರದಂದು ಪ್ರಧಾನ ರಸ್ತೆ ವಿಸ್ತರಣೆಯ ಕಾಮಗಾರಿಯನ್ನು ವೀಕ್ಷಿಸಿ, ನಂತರ ಅವರು ಸುದ್ಧಿಗಾರರ ಜೊತೆ ಮಾತನಾಡಿದರು.
ಪ್ರಧಾನ ರಸ್ತೆಯಲ್ಲಿರುವ ಸತ್ಯನಾರಾಯಣಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ರಸ್ತೆ ವಿಸ್ತರಣೆಗೆಂದು ದೇಗುಲದ ಮುಂಭಾಗವನ್ನು ತೆರವು ಗೊಳಿಸಲಾಗುತ್ತದೆ.ತೆರವು ಕಾರ್ಯಾಚರಣೆ ಪೂರ್ಣಗೊಳ್ಳುತ್ತಿದ್ದಂತೆ ದೇವಸ್ಥಾನವನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರಲ್ಲದೆ,
ದೇವಸ್ಥಾನದ ಎದುರಿಗಿರುವ ವಕ್ಫ್ ಆಸ್ತಿಯನ್ನು ತೆರವುಗೊಳಿಸಲು ಮುಸ್ಲಿಮರು ಒಪ್ಪಿದ್ದು, ಉಳಿದಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ 1ಕೋಟಿ ರೂ ಅನುದಾನ ಕೇಳಿದ್ದಾರೆ. ರಸ್ತೆ ವಿಸ್ತರಣೆಯಿಂದ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಮೂರು ಲಕ್ಷ ಜನರಿಗೆ ಅನುಕೂಲವಾಗಲಿದೆ. ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಈ ಕಾರ್ಯಕ್ಕೆ ಸಹಕರಿಸಬೇಕು ಎಂಬುದಾಗಿ ಸಚಿವರು ಮನವಿ ಮಾಡಿದರು.
ಎಷ್ಟೇ ವಿರೋಧ ಎದುರಾದರೂ ರಸ್ತೆ ವಿಸ್ತರಣೆ ಕಾಮಗಾರಿ ನಿಲ್ಲಿಸಬಾರದು. ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ವಾಲ್ಮೀಕಿ ಸಮುದಾಯದವರು ಸಚಿವರಿಗೆ ಪತ್ರ ನೀಡಿದ್ದಾರೆ. ಬಹಳಷ್ಟು ವಕೀಲರು ವಿಸ್ತರಣೆ ಕಾಮಗಾರಿಗೆ ಬೆಂಬಲ ಸೂಚಿಸಿದ್ದಾರೆ.
ವೇದಾವತಿ ಸೇತುವೆಯಿಂದ ಗಾಂಧಿವೃತ್ತದವರೆಗೆ ಸಾರ್ವಜನಿಕರು ನಿತ್ಯ ಅನುಭವಿಸುತ್ತಿದ್ದ ಸಂಚಾರದ ಕಿರಿಕಿರಿಗೆ ಶಾಶ್ವತ ಪರಿಹಾರ ಸಿಗಲಿದೆ. ವಿಸ್ತರಣೆ ಕಾರ್ಯಕ್ಕೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾಆರಾಧ್ಯ, ನಗರಸಭೆ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.