ಹಿರಿಯೂರು:
ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮದ್ಯಮಾರಾಟದಿಂದ ಉಂಟಾಗುತ್ತಿರುವ ಕೌಟುಂಬಿಕ ಸಮಸ್ಯೆಗಳಿಂದ ಮಹಿಳೆಯರು ಬೇಸೆತ್ತು ಕುಟುಂಬದಲ್ಲಿ ಅಶಾಂತಿ ಮೂಡುತ್ತಿದ್ದು, ನಿತ್ಯ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ ಎಂಬುದಾಗಿ ಸಾರ್ವಜನಿಕರು ಆಪಾದಿಸಿದ್ದಾರೆ.
ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಮದ್ಯಮಾರಾಟ ಮಾಡುತ್ತಿದ್ದರು ಕಣ್ಮುಚ್ಚಿ ಕುಳಿತಿರುವ ಅಬಕಾರಿ ಇಲಾಖೆ ಇದ್ದರೂ ಇಲ್ಲದಂತಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಭಯವಿಲ್ಲದೆ, ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲೂ ಕಿರಾಣಿ ಅಂಗಡಿಗಳಲ್ಲಿ ಬೀದಿಯ ಶೆಡ್ ಗಳಲ್ಲಿ, ಹೋಟೆಲ್ ಗಳಲ್ಲಿ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿರುವ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಯುವಪೀಳಿಗೆ ಕೈಗೆ ಮದ್ಯ ಸಿಗುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ಕುಡಿತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಪೀಳಿಗೆಗೆ ತಮ್ಮ ತಂದೆ-ತಾಯಿಗಳು, ಪೋಷಕರು, ಗುರುಹಿರಿಯರ ಭಯವಿಲ್ಲದೆ ಎಷ್ಟೋ ಕುಟುಂಬಗಳು ನೆಮ್ಮದಿಯನ್ನ ಕಳೆದುಕೊಂಡಿವೆ.
ತಂದೆ-ತಾಯಿಗಳು ಕೂಲಿನಾಲಿ ಮಾಡಿ ಮಕ್ಕಳ ಭವಿಷ್ಯ ರೂಪಿಸಲು ಶ್ರಮ ಪಡುತ್ತಿದ್ದರೂ ಏನೂ ಪ್ರಯೋಜವಿಲ್ಲದಂತಾಗಿದೆ. ಚಿಕ್ಕ-ಚಿಕ್ಕ ವಯಸ್ಸಿನ ಹುಡುಗರು ಮದ್ಯಪಾನ ಮಾಡುತ್ತಿರುವುದರಿಂದ ಊರಲ್ಲಿ ಯಾರು ಕುಡುಕರು ಯಾರು ಸಭ್ಯರು ಎನ್ನುವ ವ್ಯತ್ಯಾಸ ಇಲ್ಲದಂತಾಗಿದೆ.
ಪ್ರತಿನಿತ್ಯ ಯುವಕರು ಕುಡಿದ ಅಮಲಿನಲ್ಲಿ ಎಷ್ಟೋ ಮನೆಗಳಲ್ಲಿ ಜಗಳವಾಡಿ ನೆಮ್ಮದಿಯನ್ನೇ ಕೆಡಿಸುವಂತ ಯುವಪೀಳಿಗೆ ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿರುವ ಸನ್ನಿವೇಶಗಳು ಪ್ರತಿ ಊರುಕೇರಿಗಳಲ್ಲಿ ಕಂಡುಬರುತ್ತಿದೆ.
ದುಡಿಮೆ ಮಾಡಿದ ಹಣವನ್ನು ಕುಟುಂಬದ ನಿರ್ವಹಣೆಗಾಗಿ ಕೊಡದೆ ಎಷ್ಟೋ ಯುವಕರು ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ. ಅಬಕಾರಿ ಇಲಾಖೆ ಯುವಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಹಳ್ಳಿಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಎಷ್ಟೋ ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ.
ಎಷ್ಟೋ ಬಡಕುಟುಂಗಳಲ್ಲಿ ಜೀವನ ಸಾಗಿಸುವುದೇ ತುಂಬಾ ಕಷ್ಟದ ಪರಿಸ್ಥಿತಿ ಇರುತ್ತದೆ. ಅದರ ಜೊತೆಗೆ ಇಡೀ ಕುಟುಂಬದ ಪುರುಷರು ಕುಡಿತದಂತಹ ಚಟಕ್ಕೆ ಬಿದ್ದು ಸಮಸ್ಯೆಗಳನ್ನು ಎದುರಿಸುವುದರಿಂದ ಮಹಿಳೆಯರು ನಿತ್ಯಸಂಕಷ್ಟ ಮತ್ತು ನೋವುಗಳನ್ನು ಅನುಭವಿಸುತ್ತಿದ್ದಾರೆ.
ಕುಡುಕರ ಹಾವಳಿಯಿಂದಾಗಿ ಕೇವಲ ಕುಟುಂಬಗಳಲ್ಲಿ ಅಶಾಂತಿ ಮೂಡುವುದಲ್ಲದೆ ಊರುಗಳಲ್ಲೂ ಅಶಾಂತಿ ಮೂಡಿದೆ. ಕುಡಿತದ ಚಟಕ್ಕೆ ಬಲಿಯಾಗಿರುವ ಕುಟುಂಬಗಳಲ್ಲಿ ಮಕ್ಕಳ ವಿದ್ಯಾಭ್ಯಾಸ , ಕುಟುಂಬ ನಿರ್ವಹಣೆ ಮಾಡಲು ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಎಷ್ಟೋ ಕುಟುಂಗಳು ಜೀವನ ಸಾಗಿಸುವುದೇ ಕಷ್ಟ ಆಗಲಿದೆ. ಅಬಕಾರಿ ಇಲಾಖೆಯವರು ಎಚ್ಚೆತ್ತುಕೊಂಡು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುವ ವಿರುದ್ಧ ಶಿಸ್ತುಕ್ರಮ ವಹಿಸಿದರೆ ನೊಂದ ಕುಟುಂಬದವರಿಗೆ ದಾರಿದೀಪವಾಗಬಹುದು.
ವರದಿ- ಗಿರಿಧರಮಲ್ಲಪ್ಪನಹಳ್ಳಿ
About The Author
Discover more from JANADHWANI NEWS
Subscribe to get the latest posts sent to your email.