ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ ಮಾರ್ಚ್ ಅಂತ್ಯದಲ್ಲಿ ಬೀದರನಲ್ಲಿ ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಭಾಗವಹಿಸುವಂತೆ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಆಹ್ವಾನ ನೀಡಲಾಗಿದೆ.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಅಧಿಕೃತ ಮನವಿ ಸಲ್ಲಿಸಿತು.
ಮನವಿಗೆ ಸ್ಪಂದಿಸಿದ ರಾಜ್ಯಪಾಲರು, ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯಸಂಘದ ಇತಿಹಾಸದ ಬಗ್ಗೆ ಮಾಹಿತಿ ಪಡೆದ ಅವರು, ಸಂಘವನ್ನು ಸ್ಥಾಪಿಸಿದ ಡಿ.ವಿ.ಜಿ. ಹಾಗೂ ದೇಣಿಗೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿ, ಸಂಘಕ್ಕೆ ತೊಂಬತ್ತೈದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮೆಚ್ಚುಗೆ ಮತ್ತು ಅಭಿಮಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಕೆಯುಡಬ್ಲ್ಯೂಜೆ ನೆನಪಿನ ಸಂಚಿಕೆ, “ಕೋವಿಡ್ ಕಥೆಗಳು” ಮತ್ತು “ಅಮೃತ ಬೀಜ” ಪುಸ್ತಕಗಳನ್ನು ನೀಡಲಾಯಿತು. ಜೊತೆಗೆ ಕೆಯುಡಬ್ಲ್ಯೂಜೆ ಲೋಗೋ ಹಾಗೂ ಅವರ ಭಾವಚಿತ್ರವಿರುವ ಕಾಫಿ ಕಪ್ ಮತ್ತು ಕೆಯುಡಬ್ಲ್ಯೂಜೆ ಕ್ಯಾಲೆಂಡರ್ನ್ನು ಸ್ಮರಣಿಕೆಯಾಗಾಗಿ ನೀಡಲಾಯಿತು.
ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು ಹಾಗೂ ಖಜಾಂಚಿ ವಾಸುದೇವ ಹೊಳ್ಳ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.