ನಾಯಕನಹಟ್ಟಿ: ಡಿ.15
ಐತಿಹಾಸಿಕ ಮಧ್ಯ ಕರ್ನಾಟಕದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪರಮ ಭಕ್ತರಾಗಿದ್ದ ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪ ಅವರ ನಿಧನವು ಭಕ್ತರಲ್ಲಿ ತೀವ್ರ ದುಃಖ ಮೂಡಿಸಿದೆ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಚ್. ಗಂಗಾಧರಪ್ಪ ಹೇಳಿದರು.





ಸೋಮವಾರ ಪಟ್ಟಣದ ಒಳಮಠದ ದಾಸೋಹ ಮಂಟಪದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂತಾಪ ಸೂಚಿಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ಸಂಜೆ 6.25ಕ್ಕೆ ನಿಧನರಾಗಿದ್ದು, ಅವರ ಆತ್ಮಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಶಾಮನೂರು ಶಿವಶಂಕರಪ್ಪ ಅವರು ಪ್ರತಿವರ್ಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಒಳಮಠ ಹಾಗೂ ಹೊರಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಳ್ಳುತ್ತಿದ್ದರು. ದೇವಾಲಯದ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಒಳಮಠದ ದೇವಾಲಯದ ಪಕ್ಕದಲ್ಲಿ ದಾಸೋಹ ಮಂಟಪ, ವೇದಶಾಲಾ ಕೊಠಡಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಗೆ 800 ಗ್ರಾಂ ತೂಕದ ಬಂಗಾರದ ಮುಖಕವಚ, ಹೊರಮಠದ ಬೆಳ್ಳಿ ಮಂಟಪ ಮತ್ತು ದ್ವಾರಬಾಗಿಲು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶಾಮನೂರು ಶಿವಶಂಕರಪ್ಪ ಅವರು ನೆರವೇರಿಸಿದ್ದರು ಎಂದು ತಿಳಿಸಿದರು.
ದೇವರು ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಶಾಂತಿ ಹಾಗೂ ನೆಮ್ಮದಿ ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಮನು, ಪ್ರಕಾಶ್, ಮಹದೇವ, ಮಂಜುನಾಥ್, ಶಿವರಾಜ್, ಶಿವಕುಮಾರ್ ಭಂಡಾರಿ, ಮಹಾಂತೇಶ್, ಹಾಗೂ ಗ್ರಾಮದ ಕಾಂತರಾಜ್, ಮಂಜುಳಾ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.