ಚಿತ್ರದುರ್ಗ ನ.14:
ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 2025ನೇ ಸಾಲಿನ ದೇಶದ ಜಿಡಿಪಿಗೆ (ತಲಾ ರಾಷ್ಟ್ರೀಯ ಉತ್ಪನ್ನ) ಕೃಷಿ ವಲಯದ ಕೊಡುಗೆ ಶೇ.18 ರಷ್ಟಿದೆ. ರೈತರು ನಮಗೆಲ್ಲಾ ಅನ್ನ ನೀಡುವುದರ ಜೊತೆಗೆ ದೇಶದ ಖಜಾನೆ ತುಂಬುವ ಮೂಲಕ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಬಬ್ಬೂರು ಫಾರಂನಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಕೃಷಿ ಹಾಗೂ ತೋಟಗಾರಿಕೆ ಮೇಳ-2025 ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ಘೋಷಣೆ ಫಲ ನೀಡಿದೆ. ಇಂದು ಭಾರತ 350 ಮಿಲಿಯನ್ ಮೆಟ್ರಿಕ್ ಟನ್ ಕೃಷಿ ಉತ್ಪಾದನೆಯನ್ನು ಮಾಡುತ್ತಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದೇವೆ. ಅದರೂ ರೈತರ ಪರಿಸ್ಥಿತಿ ಇನ್ನೂ ಸುಧಾರಣೆಯಾಗಬೇಕಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಬೇಕಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಹೊಸ ವಿಚಾರ, ತಂತ್ರಜ್ಞಾನ, ತೋಟಗಾರಿಕೆ ವಿಸ್ತರಣೆ, ಜೈವಿಕ ಕೃಷಿ ಉತ್ಪಾದನೆ, ಪುಷ್ಪ ಕೃಷಿ, ಮೀನುಗಾರಿಕೆ ಸೇರಿದಂತೆ ಎಲ್ಲ ಆಯಾಮಗಳಲ್ಲಿ ರೈತರಿಗೆ ನೆರವು ನೀಡಿ, ಆರ್ಥಿಕ ಶಕ್ತಿ ತುಂಬುವ ಯೋಜನೆಗಳ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನÀಕ್ಕೆ ಒತ್ತು ನೀಡುವ ಕೆಲಸ ಮಾಡುತ್ತಿದೆ. ಸುಮಾರು 10 ಸಾವಿರ ರೈತ ಉತ್ಪಾದಕ ಸಂಘಗಳನ್ನು ಒಗ್ಗೂಡಿಸಿ ಸೊಸೈಟಿಗಳನ್ನು ಸ್ಥಾಪಿಸಲಾಗುತ್ತಿದೆ. ನಮೋ ಡ್ರೋನ್ ದೀದಿ ಯೋಜನೆಯಡಿ ಮಹಿಳಾ ರೈತ ಸಂಘಗಳಿಗೆ ರೂ.400 ಕೋಟಿ ಮೌಲ್ಯದ ಕೃಷಿ ಡ್ರೋನ್ಗಳನ್ನು ನೀಡಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರಗಳು ಹೆಚ್ಚು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡುಗಳನ್ನು ನೀಡಲಾಗಿದೆ. ‘ಪ್ರತಿ ಹನಿಗೆ ಹೆಚ್ಚು ಬೆಳೆ’ ಎಂಬ ಉದ್ದೇಶದಿಂದ ನೀರನ್ನು ಮಿತವಾಗಿ ಬಳಕೆ ಮಾಡಲು ಪಿ.ಎಂ ಕಿಸಾನ್ ಸಿಂಚಾಯಿ ಯೋಜನೆ ಜಾರಿ ಮಾಡಲಾಗಿದೆ. ಕೃಷಿ ವಿಜ್ಞಾನಿಗಳು ಹಾಗೂ ವಿಶ್ವ ವಿದ್ಯಾಲಯಗಳು ಸಂಶೋಧನೆಯ ಫಲಿತಾಂಶಗಳನ್ನು ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಕೇಂದ್ರ ಸರ್ಕಾರ ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1,42,767 ರೈತರಿಗೆ ರೂ.713.72 ಕೋಟಿ ನೀಡಿದೆ. ಇದೇ ಮಾದರಿಯಲ್ಲಿ ಫಸಲ್ ಭೀಮಾ ಯೋಜನೆಯಡಿ 3,43,000 ರೈತರಿಗೆ ರೂ.722 ಕೋಟಿ ಪರಿಹಾರ, ಕೃಷಿ ಯಂತ್ರೋಪಕರಣ ಯೋಜನೆಯಡಿ ಜಿಲ್ಲೆಯ 17,306 ರೈತರಿಗೆ ರೂ.47.72 ಕೋಟಿ ವೆಚ್ಚದ ಯಂತ್ರೋಪಕರಣಗಳನ್ನು ನೀಡಲಾಗಿದೆ. ಪಿ.ಎಂ.ಸಿಂಚಾಯ್ ಯೋಜನೆಯಡಿ 53,301 ರೈತರಿಗೆ ರೂ.94 ಕೋಟಿ ವೆಚ್ಚದಲ್ಲಿ ತುಂತುರು ಹನಿ ನೀರಾವರಿ ಘಟಕಗಳನ್ನ ನೀಡಿದೆ. 2,500 ಕೃಷಿ ಕಾರ್ಮಿಕರಿಗೆ ಹಸುಗಳನ್ನು ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲೆಯ 4.86 ಲಕ್ಷ ಜನರಿಗೆ ರೂ.930 ಕೋಟಿ ನೀಡಿದೆ. ಮುದ್ರಾ ಯೋಜನೆಯಡಿ 2,65,000 ಫಲಾನುಭವಿಗಳಿಗೆ ರೂ.3,891 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಉಜ್ವಲ ಯೋಜನೆಯಡಿ 1,63,000 ಕುಟುಂಬಗಳಿಗೆ ಎಲ್.ಬಿ.ಜಿ ಗ್ಯಾಸ್ ಸಂಪರ್ಕ ನೀಡಲಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಮಾಹಿತಿ ನೀಡಿದರು.
ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದು. ಆದರೆ ರಾಜ್ಯದಲ್ಲಿ ಸದ್ಯ 40 ಲಕ್ಷ ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. ಎಲ್ಲಾ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ನೀರಾವರಿ ಪ್ರದೇಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದರು.
ಕೃಷಿ ಪದವಿ ಪಡೆದು ಕಕ್ರ್ಲ್ಗಳಾಗಬೇಡಿ : ಸಂಸದ ಗೋವಿಂದ ಕಾರಜೋಳ ಕಿವಮಾತು
ಕೃಷಿ ಪದವಿ ಪಡೆದವರು, ಕೃಷಿ ವಿಜ್ಞಾನಿಗಳು, ಕೃಷಿ ಇಂಜಿಯರ್ಗಳು ಸರ್ಕಾರದ ಕಚೇರಿಗಳಲ್ಲಿ ಕ್ಲರ್ಕ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಬ್ ರಿಜಿಸ್ಟಾರ್ ಕೆಲಸಕ್ಕೆ ಸೇರುವ ಬದಲು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡು ಕೆಲಸ ಮಾಡಬೇಕು. ಬಿ.ಎಸ್ಸಿ ಅಗ್ರಿಕಲ್ಚರ್, ಎಂ.ಎಸ್ಸಿ ಅಗ್ರಿಕಲ್ಚರ್ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಓದಿದ ಬಳಿಕ ವಿದ್ಯಾರ್ಥಿಗಳು ಕ್ಲರ್ಕ್ಗಳಾಗಿ ಕೆಲಸಕ್ಕೆ ಸೇರಿದರೆ ಸಮಾಜಕ್ಕೆ ಪ್ರಯೋಜನವಿಲ್ಲ. ಕೃಷಿ ಕ್ಷೇತ್ರಕ್ಕೆ ನೀವು ಆಸ್ತಿಯಾಗಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯ ಒಂದು ಸಾವಿರ ಯುವ ರೈತರಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಕೃಷಿ ಅಧ್ಯಯನ ಪ್ರವಾಸ ಏರ್ಪಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜಿಲ್ಲೆಯ ಈರುಳ್ಳಿ ಬೆಳಗಾರು ಅನುಭವಿಸುತ್ತಿರುವ ನಷ್ಟದ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸಳೆಯಲಾಗಿದೆ. ಈರುಳ್ಳಿ ಬೆಳೆಯುವ ರೈತರು ಸಹಕಾರ ಸಂಘ ರಚಿಸಿಕೊಂಡು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಬೇಕು. ಜೈ ಜವಾನ್, ಜೈಕಿಸಾನ್, ಜೈ ವಿಜ್ಞಾನ್, ಜೊತೆಗೆ ಜೈ ಸಹಕಾರ್ ಮಂತ್ರವನ್ನು ಎಲ್ಲರೂ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಕೈಪಿಡಿ ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರಗತಿಪರ ರೈತರು ಹಾಗೂ ಬಬ್ಬೂರು ಫಾರಂನಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಹೆಚ್.ಡಿ.ದೇವಿಕುಮಾರ್, ಹೆಚ್.ಎಸ್. ಶಶಾಂಕ್, ಡಾ.ಶ್ರೀನಿವಾಸ, ನಿರ್ದೇಶಕರುಗಳಾದ ಡಾ.ಬಿ.ಹೇಮ್ಲಾನಾಯ್ಕ್, ಡಾ.ದುಷ್ಯಂತ ಕುಮಾರ್ ಬಿ.ಎಂ, ಡಾ.ಜೆ.ಕೆ. ಗಿರಿಜೇಶ್, ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಶರಣಪ್ಪ ಜಂಗಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥ, ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ.ಜಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿ.ಹೆಚ್.ಕಾಂತರಾಜ, ಜಿಲ್ಲಾ ಪ್ರತಿನಿಧಿ ಕೆ.ಜಗದೀಶ್ ಕಂದಿಕೆರೆ, ಮುಖಂಡರಾದ ಉಮೇಶ್, ತಿಪ್ಪೇಸ್ವಾಮಿ, ಕೆ.ಎಸ್.ಹೊರಕೇರಪ್ಪ, ಮುರುಳಿ, ಅಭಿನಂದನ್ ಸೇರಿದಂತ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸುರೇಶ ಡಿ, ಹಿರಿಯ ವಿಜ್ಞಾನ ಡಾ.ಪರಶುರಾಮ ಚಂದ್ರವಂಶಿ ವಂದಿಸಿದರು. ಏಕಬೋಟೆ ಸ್ವಾಗತಿಸಿದರು. ವಿಜ್ಞಾನಿ ಡಾ.ಪ್ರೀತಿ ನಿರೂಪಿಸಿದರು. ತೋಟಗಾರಿಕೆ ವಿದ್ಯಾರ್ಥಿಗಳು, ಪ್ರಾರ್ಥನೆ, ನಾಡಗೀತೆ ಹಾಗೂ ರೈತಗೀತೆ ಪ್ರಸ್ತುತ ಪಡಿಸಿದರು.
===============
About The Author
Discover more from JANADHWANI NEWS
Subscribe to get the latest posts sent to your email.