
ಹಾಸನಅ 14: ವರ್ಷಕ್ಕೊಮ್ಮೆ ನಡೆಯುವ ಅದ್ದೂರಿ ಹಾಸನಾಂಬ ಜಾತ್ರಾ ಮಹೋತ್ಸವ 2024ರ ದಿನಾಂಕ ನಿಗದಿಯಾಗಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ನಿಗದಿ ಪಡಿಸಿದ ದಿನಗಳಂದು ಮಾತ್ರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗುತ್ತದೆ.
ಈ ಬಾರಿ ಅಕ್ಟೋಬರ್ 24ರಿಂದ ನವೆಂಬರ್ 3ರ ತನಕ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿರಲಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. 2024ರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಹಾಸನ ಜಿಲ್ಲಾಡಳಿತ ತಯಾರಿ ನಡೆಸಿದೆ. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಈ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 24 ರಿಂದ ನವೆಂಬರ್ 3ರ ತನಕ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಹಾಸನ ಎಸಿ ಮಾರುತಿ ಮಾತನಾಡಿ, “ಪ್ರತಿ ಬಾರಿ ಆಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ತೆರೆದು, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲನ್ನು ಎಲ್ಲರ ಸಮ್ಮುಖದಲ್ಲಿ ಮುಚ್ಚಲಾಗುತ್ತದೆ” ಎಂದರು.
“ಕಳೆದ ವರ್ಷ ಬಾಗಿಲು ಹಾಕುವಾರ ನೈವೇದ್ಯಕ್ಕೆ ಇಟ್ಟ ಅನ್ನ ಹಳಸುವುದಿಲ್ಲ, ಹೂವು ಬಾಡುವುದಿಲ್ಲ, ಹಚ್ಚಿದ ದೀಪ ಆರುವುದಿಲ್ಲ ಎನ್ನುವ ನಂಬಿಕೆ ಭಕ್ತರದ್ದು. ಈ ಪವಾಡವನ್ನು ಕಣ್ತುಂಬಿಕೊಳ್ಳುವುದಕ್ಕೆ ವರ್ಷಕ್ಕೊಮ್ಮೆ ಹಾಸನಾಂಬೆಯ ಸನ್ನಿಧಿಗೆ ಲಕ್ಷಾಂತರ ಭಕ್ತರು ಹರಿದು ಬರುತ್ತಾರೆ. ಶಕ್ತಿ ಯೋಜನೆಯ ಕಾರಣ ಈ ಬಾರಿಯೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಇದೆ” ಎಂದು ಹೇಳಿದರು.
ವರ್ಷಕ್ಕೊಮ್ಮೆ ದರ್ಶನ: ಅಕ್ಟೋಬರ್ 24ರಂದು ಹಾಸನಾಂಬೆ ದೇವಾಲಯದ ಬಾಗಿಲು ತರೆಯಲಾಗುತ್ತದೆ. ಆದರೆ ಅಂದು ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದ ದಿನ ಮಹಾಮಂಗಳಾರತಿ, ನೈವೇದ್ಯ ಅರ್ಪಿಸುವಾಗ ಮಾತ್ರ ಭಕ್ತರಿಗೆ ದರ್ಶನ ಸಿಗುವುದಿಲ್ಲ. ಉಳಿದಂತೆ ಭಕ್ತರು ಮುಂಜಾನೆಯ ತನಕ ದೇವಿಯ ದರ್ಶನ ಮಾಡಲು ಅವಕಾಶವನ್ನು ಮಾಡಿಕೊಡಲಾಗುತ್ತದೆ.
“ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ 2024 ಅನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲನೇ ಹಾಗೂ ಕೊನೆಯ ದಿನ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಈ ಬಾರಿ 9 ದಿನ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಕಡಿಮೆ ದಿನಗಳು ಇರುವುದರಿಂದ 24×7 ಮಾದರಿಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ. ಭಕ್ತರಿಗೆ ಶೌಚಾಲಯ, ಪಾರ್ಕಿಂಗ್, ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ತಯಾರಿ ಮಾಡಲಾಗುತ್ತಿದೆ” ಎಂದು ಹಾಸನ ಡಿಸಿ ಸತ್ಯಭಾಮ ಹೇಳಿದ್ದಾರೆ.
ಈ ಬಾರಿಯೂ ವಿಶೇಷ ದರ್ಶನಕ್ಕೆ ವಿವಿಐಪಿ, ವಿಐಪಿ, 1000 ಹಾಗೂ 300 ರೂಪಾಯಿಯ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಹಾಸನಾಂಬೆ ಜಾತ್ರೆ ಹಿನ್ನಲೆಯಲ್ಲಿ ದಸರಾ ಮಾದರಿಯಲ್ಲಿ ನಗರದ ತುಂಬ ವಿದ್ಯುತ್ ದೀಪಾಲಂಕಾರ, ತೋಟಗಾರಿಕಾ ಇಲಾಖೆಯಿಂದ ದೇವಾಲಯದ ಆವರಣದಲ್ಲಿ ಪುಷ್ಪಾಲಂಕಾರವನ್ನು ಮಾಡಲಾಗುತ್ತದೆ.
ಹಾಸನಾಂಬೆ ಜಾತ್ರೆ ಅಂಗವಾಗಿ ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನ, ಹೆಲಿಕಾಪ್ಟರ್ ಮೂಲಕ ಹಾಸನ ನೋಡೋ ಹೆಲಿಟೂರಿಸಂ ವ್ಯವಸ್ಥೆ ಮಾಡಲಾಗಿದೆ. ಬಸ್ಗಳ ಮೂಲಕ ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ನೋಡುವ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದೆ.
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಸೆಳೆಯಲು ಜಿಲ್ಲಾಡಳಿತ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಭಕ್ತರಿಗೆ ಲಾಡು ಪ್ರಸಾದವನ್ನು ಇಸ್ಕಾನ್ಗೆ ಮೂಲಕ ಮಾಡಿಸಲು ಚಿಂತನೆ ನಡೆದಿದೆ.
About The Author
Discover more from JANADHWANI NEWS
Subscribe to get the latest posts sent to your email.