ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಆರ್ಥಿಕ ವ್ಯವಹಾರ ಉತ್ತಮವಾಗಿ ನಡೆಯಲು ಕರ್ನಾಟಕ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಹೇಳಿದರು.


ಅವರು ತಾಲೂಕಿನ ಹರದನಹಳ್ಳಿ ಗ್ರಾಮದ ಕರ್ನಾಟಕ ಬ್ಯಾಂಕ್ ನಲ್ಲಿ ಆಯೋಜಿಸಿದ್ದ ಬ್ಯಾಂಕ್ ಸ್ಥಾಪನೆಯ 12ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹರದನಹಳ್ಳಿ ಗ್ರಾಮದಲ್ಲಿ ಕಳೆದ 12 ವರ್ಷಗಳ ಹಿಂದೆ ಆರಂಭಗೊಂಡ ಕರ್ನಾಟಕ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಇಂದು ಇಡೀ ಜಿಲ್ಲೆಯಲ್ಲಿಯೇ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಬ್ಯಾಂಕ್ ನಿಂದ ಈ ಭಾಗದ ಜನರು ವಿವಿಧ ವ್ಯವಹಾರ ಚಟುವಟಿಕೆಗಳನ್ನು ಮಾಡಲು, ಕೃಷಿ ಚಟುವಟಿಕೆಗಳಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳಲು ಹಾಗೂ ಪ್ರತಿನಿತ್ಯ ಆರ್ಥಿಕ ವ್ಯವಹಾರ ವಹಿವಾಟುಗಳನ್ನು ನಡೆಸಲು ಹೆಚ್ಚಿನ ಅನುಕೂಲವಾಗಿದೆ. ಈ ಬ್ಯಾಂಕ್ ನಲ್ಲಿ ಹರದನಹಳ್ಳಿ, ಶೀಗವಾಳು ಹಾಗೂ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಲವು ಗ್ರಾಮಗಳ ಜನರು ಗ್ರಾಹಕರಾಗಿದ್ದಾರೆ. ಇಲ್ಲಿ ಆರಂಭದಿಂದಲೂ ಇಲ್ಲಿನವರೆಗೂ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ನ ಎಲ್ಲಾ ನೌಕರರು ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಕೆಲಸ ಮಾಡುವ ಮೂಲಕ ಗ್ರಾಹಕರಿಗೆ ನೆರವಾಗುವುದರಲ್ಲಿ ಮತ್ತು ಬ್ಯಾಂಕ್ ನ ಅಭಿವೃದ್ಧಿಯಲ್ಲಿ ಇತರೆಡೆಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕ್ ನ ಬ್ರಾಂಚ್ ಮ್ಯಾನೇಜರ್ ಸಿದ್ಧಿವಿನಾಯಕ ಹೆಗಡೆ ಮಾತನಾಡಿ ಕಳೆದ 12 ವರ್ಷಗಳ ಹಿಂದೆ ಹರದನಹಳ್ಳಿ ಗ್ರಾಮದಲ್ಲಿ ಆರಂಭಗೊಂಡ ಕರ್ನಾಟಕ ಬ್ಯಾಂಕ್ ಶಾಖೆಯು 8,000 ಗ್ರಾಹಕರನ್ನು ಹೊಂದಿದೆ. ಬ್ಯಾಂಕ್ ನಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಲ ಸೌಲಭ್ಯ, ಸಣ್ಣ ಉದ್ದಿಮೆದಾರರು, ರೈತರು, ಮಹಿಳಾ ಸಂಘಗಳಿಗೆ ಸಾಲ ವಿತರಣೆ, ವಾಹನ ಸಾಲ, ಮನೆ ನಿರ್ಮಾಣ ಸಾಲ, ಬಂಗಾರದ ಸಾಲ, ಪಶು ಸಾಲ ಸೇರಿದಂತೆ ವಿವಿಧ ಮಾದರಿಯ ಹಲವು ಯೋಜನೆಗಳ ಅಡಿಯಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಬ್ಯಾಂಕ್ ಸುಮಾರು 40 ಕೋಟಿ ರೂಗಳ ವ್ಯವಹಾರವನ್ನು ಮಾಡಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ 50 ಕೋಟಿ ವ್ಯವಹಾರದ ಗುರಿಯನ್ನು ಹೊಂದಲಾಗಿದೆ. ಬ್ಯಾಂಕ್ ನ ಬೆಳವಣಿಗೆಗೆ ಕಾರಣರಾಗಿರುವ ಗ್ರಾಹಕರು ಹಾಗೂ ಗ್ರಾಮಸ್ಥರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಬ್ಯಾಂಕಿನ ಈ ಸಾಧನೆಗೆ ಕರ್ನಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್, ಮೈಸೂರು ವಿಭಾಗದ ಮುಖ್ಯಸ್ಥ ಡಾ.ಟಿ.ಆರ್.ಅರುಣ್, ಕ್ಲಸ್ಟರ್ ಹೆಡ್ ಗೋಪಾಲಕೃಷ್ಣ, ರೀಜಿನಲ್ ಹೆಡ್ ಬದ್ರಿಪ್ರಸಾದ್ ಅವರುಗಳು ಬ್ಯಾಂಕ್ ಸಿಬ್ಬಂದಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಹಕರುಗಳಿಗೆ ಸಿಹಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಸೂರ್ಯನಾರಾಯಣ, ಗೋವಿಂದರಾಜು, ರವಿ, ಬ್ಯಾಂಕ್ ಸಿಬ್ಬಂದಿಗಳಾದ ದಿಲೀಪ್, ಪೂರ್ಣಿಮಾ, ಪ್ರದೀಪ್, ವಿಮಾ ಕಂಪನಿಯ ಸಹಭಾಗಿಗಳಾದ ಪಾರ್ಥಸಾರಥಿ, ರಾಕೇಶ್ ಗೌಡ, ಅಶೋಕ್, ಯತೀಶ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.