ಚಳ್ಳಕೆರೆ:
ತಾಲೂಕಿನ ಕಸ್ತೂರ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಭೂತಪ್ಪನ ಹಬ್ಬದ ಕಾರ್ಯಕ್ರಮಕ್ಕೆ ರಾಜ್ಯ ಕಾಡುಗೊಲ್ಲರ ಸಂಘದ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಹಾರೋಹಳ್ಳಿ ಎಂ. ಮಹೇಶ್ ಭಾಗಿಯಾಗಿ ವಿಶೇಷವಾಗಿ ಮೆರೆದರು.
ಈ ವೇಳೆ ಮಾತನಾಡಿದ ಅವರು, ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಚಳ್ಳಕೆರೆ ತಾಲೂಕಿಗೆ ಆಗಮಿಸಿರುವುದಾಗಿ ತಿಳಿಸಿ, ಇಲ್ಲಿನ ಜನತೆ ಆತ್ಮೀಯವಾಗಿ ಸ್ವಾಗತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ನಿಗಮದಿಂದ ಸಮುದಾಯಕ್ಕೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎಂದರು.








ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಿ ಎರಡು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಮೊದಲನೇ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೆ ನ್ಯಾಯ ಒದಗಿಸಲಾಗಿದೆ ಎಂದು ಹೇಳಿದರು. ಈ ವರ್ಷ ಸುಮಾರು ನಾಲ್ಕು ಸಾವಿರ ಅರ್ಜಿಗಳು ಬಂದಿದ್ದು, ಅವುಗಳ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ, ನೇರ ಸಾಲ, ಟ್ಯಾಕ್ಸಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯವಾಗಿ, ನಿಗಮದಿಂದ ಕಾರುಗಳಿಗಾಗಿ ಸಾಕಷ್ಟು ಅರ್ಜಿಗಳು ಬಂದಿದ್ದರೂ, ಕಾಡುಗೊಲ್ಲ ಸಮುದಾಯ ಕೃಷಿ, ಮೇಕೆ ಮತ್ತು ಕುರಿ ಸಾಕಾಣಿಕೆಗೆ ಅವಲಂಬಿತವಾಗಿರುವುದರಿಂದ ಟ್ರ್ಯಾಕ್ಟರ್ಗಳ ಅವಶ್ಯಕತೆ ಹೆಚ್ಚು ಇದೆ ಎಂದು ಅಭಿಪ್ರಾಯಪಟ್ಟರು. ಕುರಿಗಳನ್ನು ಬೇರೆಡೆಗೆ ಸಾಗಿಸುವಾಗ ಆಹಾರ ಸಾಮಗ್ರಿಗಳ ಸಾಗಣೆಗಾಗಿ ಟ್ರ್ಯಾಕ್ಟರ್ ಅತ್ಯಂತ ಉಪಯುಕ್ತವಾಗುತ್ತದೆ ಎಂದರು.
ಈ ಕುರಿತು ಸಚಿವರಾದ ಶಿವರಾಜ ತಂಗಡಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಟ್ಯಾಕ್ಸಿ ಬದಲಿಗೆ ಟ್ರ್ಯಾಕ್ಟರ್ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದರು. ಇದೇ ವೇಳೆ, ಈ ವರ್ಷ ಉತ್ತಮ ಮಳೆ ಬಂದು ಜನತೆ ಸುಭಿಕ್ಷವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷರಾದ ಬೂದಿಹಳ್ಳಿ ರಾಜಣ್ಣ, ಯುವ ಘಟಕದ ತಾಲೂಕು ಅಧ್ಯಕ್ಷ ವೀರೇಶ್ (ಜೆಸಿಬಿ), ಮುಖಂಡರಾದ ಕೃಷ್ಣಮೂರ್ತಿ, ಮಹೇಶ್, ಶಿವಮೂರ್ತಿ, ಕ್ತಾತಣ್ಣ, ಶ್ರೀಕಂಠಯ್ಯ ಹಾಗೂ ಕಸ್ತೂರ ತಿಮ್ಮನಹಳ್ಳಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.